ಆಡಿ ಬೆಳೆದ ನೆನಪಿಗಾಗಿ ಗಲ್ಲಿ ಕ್ರಿಕೆಟ್ ಟೂರ್ನಮೆಂಟ್ ಮಾಡಿದ ಹುಡುಗರು!
ಮಂಗಳೂರು, ಜನವರಿ 25; ಇಲ್ಲಿ ಕಾಂಕ್ರೀಟ್ ರಸ್ತೆಯೇ ಕ್ರಿಕೆಟ್ ಪಿಚ್, ಅಡ್ಡರಸ್ತೆಯೇ ಕ್ರಿಕೆಟ್ ಗ್ರೌಂಡ್. ಸುತ್ತಲೂ ಇರೋ ಕಟ್ಟಡಗಳೇ ಆಡಿಯೆನ್ಸ್ ಗ್ಯಾಲರಿ. ಇದರ ನಡುವೆಯೇ ನಡೆಯುತ್ತದೆ ರನ್ ಕದಿಯೋ ಕಸರತ್ತು. ಇದು ಮಂಗಳೂರು ನಗರದ ಸದಾ ಗಿಜಿಗಿಡುವ ಬಂದರು ಪ್ರದೇಶದ ಕಂದಕ ಅನ್ನೋ ಪ್ರದೇಶದ ಅಡ್ಡ ರಸ್ತೆಯಲ್ಲಿ ನಡೆದ ಗಲ್ಲಿ ಕ್ರಿಕೆಟ್ನ ವೈಭವ.
ಹಗಲಿಡೀ ಜನರ, ವಾಹನಗಳ ಓಡಾಟಗಳಿಂದ ಫುಲ್ ಬ್ಯುಸಿಯಾಗಿರುವ ರಸ್ತೆ ರಾತ್ರಿಯಾಗುತ್ತಲೇ 'ಗಲ್ಲಿ ಪ್ರೀಮಿಯರ್ ಲೀಗ್'ನ ಮೈದಾನವಾಗಿದೆ. ಹೊನಲು ಬೆಳಕಿನಲ್ಲಿ ಸಾಗುವ ಗಲ್ಲಿ ಕ್ರಿಕೆಟ್ ಟೂರ್ನಮೆಂಟ್ ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಸುತ್ತಲೂ ಇರೋ ಕಟ್ಟಡಗಳೇ ಗ್ಯಾಲರಿ ಅನ್ನೋದು ಇಲ್ಲಿನ ವಿಶೇಷ.
ಅಮೆರಿಕ ಕ್ರಿಕೆಟ್ ಅಂಗಳದಲ್ಲಿ ಕಾಫಿನಾಡು ಯುವಕನ ಕಮಾಲ್
ಈ ಹಿಂದಿನಿಂದಲೂ ಬಂದರು ಪ್ರದೇಶದಲ್ಲಿರೋ ಹುಡುಗರು ಕಂದಕ್ನ ಈ ಅಡ್ಡ ರಸ್ತೆಯಲ್ಲಿ ಕ್ರಿಕೆಟ್ ಆಟವಾಡುತ್ತಿದ್ದರು. ಇದೀಗ ಗಲ್ಲಿ ಪ್ರೀಮಿಯರ್ ಲೀಗ್ ಅನ್ನೋ ಹೆಸರಿನಡಿ ಟೂರ್ನಮೆಂಟ್ ಅನ್ನು ಲೀಗ್ ಮಾದರಿಯಲ್ಲಿ ಆರಂಭಿಸಿದ್ದು, ಇದೇ ಬೀದಿಯಲ್ಲಿ ಆಡುತ್ತಿದ್ದ ಯುವಕರೆಲ್ಲ ಸೇರಿ 6 ತಂಡಗಳನ್ನು ರಚಿಸಿ ಲೀಗ್ ಮಾದರಿಯ ಕ್ರಿಕೆಟ್ ಕೂಟವನ್ನೇ ಆಯೋಜಿಸಿದ್ದಾರೆ. ಸುತ್ತಲೂ ಇರೋ ಕಟ್ಟಡಗಳ ನಡುವೆಯೆ ರನ್ ಕದಿಯಲು ಆಟಗಾರರು ತೋರುವ ಚಾಕಚಕ್ಯತೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ.
ಕೊಡಗು; ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ
ದಿವಂಗತ ಸರೋಜಿನಿ ಪುಂಡಲೀಕ ಕರ್ಕೇರ ಸ್ಮರಣಾರ್ಥವಾಗಿ ಮೊದಲ ಬಾರಿಗೆ ಆಯೋಜಿಸಲಾದ ಈ ಗಲ್ಲಿ ಕ್ರಿಕೆಟ್ ಕೂಟವು ಜನವರಿ 26ರ ವರೆಗೆ ನಡೆಯಲಿದ್ದು, ಸದ್ಯ ಬಂದರು ಪರಿಸರದಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಪ್ರತಿದಿನ ಅಂಡರ್ ಆರ್ಮ್ ನ ನಿಗದಿತ ಓವರ್ ಗಳ ಮೂರು ಪಂದ್ಯಗಳು ಆಯೋಜಿಸಲಾಗುತ್ತಿದ್ದು, ಅತ್ಯಂತ ಶಿಸ್ತಿನಿಂದ ಪಂದ್ಯಗಳನ್ನು ನಡೆಸುತ್ತಿರುವುದು ಈ ಗಲ್ಲಿ ಪ್ರೀಮಿಯರ್ ಲೀಗ್ ನ ವಿಶೇಷ.
ಬೆಂಗಳೂರಿನಲ್ಲಿ ಎಮ್ಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಪ್ರಾರಂಭ
ಗಲ್ಲಿಯಲ್ಲಿರುವ ಹುಡುಗರ ಪಾಲಿಗೆ ರಸ್ತೆಗಳೇ ಆಟದ ಮೈದಾನವಾಗುತ್ತಿರುವುದು ಇದು ಮೊದಲೇನಲ್ಲ. ಆದರೆ ಕಡಲನಗರಿಯ ಪಾಲಿಗೆ ಗಲ್ಲಿ ಕ್ರಿಕೆಟ್ ಅನ್ನೋದು ಅಪರೂಪವಾದುದು. ಅದರಲ್ಲೂ ಮೊದಲ ಬಾರಿಗೆ ನಗರದಲ್ಲಿ ಗಲ್ಲಿ ಪ್ರೀಮಿಯರ್ ಲೀಗ್ ಆಯೋಜಿಸಲಾಗಿದ್ದು ಇಡೀ ಗಲ್ಲಿಯಲ್ಲೇ ಉತ್ಸವದ ವಾತಾವರಣ ಮೂಡಿಸಿದೆ.
ಈ ಕಂದಕ್ ಪರಿಸರದ ಯುವಕರು ತಾವು ಚಿಕ್ಕದಿನಿಂದಲೇ ಆಡುತ್ತಿದ್ದ ಪ್ರದೇಶದಲ್ಲಿ ಮತ್ತೆ ನೆನಪನ್ನು ಹಚ್ಚ ಹಸಿರನ್ನಾಗಿ ಮಾಡಿದೆ. ಈ ಭಾಗದ ಯುವಕರು ಸದ್ಯ ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದರೂ, ತಾವು ಆಡಿದ ಜಾಗವನ್ನು, ನೆನಪನ್ನು ಮತ್ತೆ ಹಸಿರನ್ನಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಲತೀಫ್ ಕಂದಕ್, "ಗಲ್ಲಿ ಕ್ರಿಕೆಟ್ ನಮ್ಮ ಭಾವನೆಯೊಳಗೆ ಬಂಧಿಯಾದ ವಿಚಾರವಾಗಿದೆ. ನಾವು ಸಣ್ಣದಿರುವಾಗ ಆಡಿದ ನೆನಪು ಇನ್ನೂ ಇದೆ. ಆ ನೆನಪನ್ನು ಮತ್ತೆ ಹಸಿರಾಗಿಸುವ ನಿಟ್ಟಿನಲ್ಲಿ ಈ ಟೂರ್ನಮೆಂಟ್ ಮಾಡಿದ್ದೇವೆ. ಜನವರಿ 26 ರಂದು ಈ ಲೀಗ್ ಕೊನೆಗೊಳ್ಳಲಿದೆ. ಎಲ್ಲಾ ಜಾತಿ ಧರ್ಮದ ಜನರು ಈ ಲೀಗ್ ನಲ್ಲಿ ಭಾಗಿಯಾಗಿದ್ದಾರೆ" ಎಂದರು.