ಮೂಡಬಿದಿರೆಯಲ್ಲಿ ಕುಸಿಯುತ್ತಿರುವ ಅಂತರ್ಜಲ, ಬೇಸಿಗೆ ಭೀಕರ
ಮಂಗಳೂರು, ಮಾರ್ಚ್ 04 : ಮೂಡಬಿದಿರೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ ತ್ವರಿತ ಗತಿಯಲ್ಲಿ ಅಂತರ್ಜಲ ಕುಸಿಯುತ್ತಿದ್ದು, ಕುಡಿಯುವ ನೀರಿನ ಅಭಾವ ಎದುರಾಗುವ ಸಾಧ್ಯತೆ ಕಂಡುಬಂದಿದೆ.
ಇಲ್ಲಿ ಗುರುತಿಸಲಾದ 18 ನೀರಿನಾಶ್ರಯ ನವೀಕರಿಸಿದಲ್ಲಿ ಈ ವರ್ಷ ನೀರಿನ ಸಮಸ್ಯೆ ಅಸಂಭವ ಎಂದು ಸ್ಥಳೀಯ ತಜ್ಞರ ಸಮಿತಿಯೊಂದು ಹೇಳಿದೆ.
ಇದಕ್ಕೆ ಪೂರಕವಾಗಿ ಮುರಳಿಕೃಷ್ಣ, ಪಿ.ಕೆ. ಥಾಮಸ್ ಮತ್ತು ಮಕ್ಬಲ್ ಹುಸೇನರಂತಹ ಯುವ ನಾಯಕರು ಮುಂದಾಳತ್ವ ವಹಿಸಿರುವ ಈ ಸಮಿತಿಯು ಪಟ್ಟಣದಲ್ಲಿ ಸುತ್ತಲ ಪ್ರದೇಶದಲ್ಲಿ ಪಾಳು ಬಿದ್ದಿರುವ 18 ನೀರಿನಾಶ್ರಯ ಗುರುತಿಸಿದೆ.
ಈ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ ಮುರಳಿಕೃಷ್ಣ, ಸುಮಾರು 600 ವರ್ಷ ಇತಿಹಾಸ ಹೊಂದಿರುವ 'ಮೊಹಲ್ಲ ಕೆರೆ'ಯನ್ನು ಪುನರುಜ್ಜೀವನಗೊಳಿಸಿದ್ದಲ್ಲಿ ಸುತ್ತಲ ಪ್ರದೇಶಕ್ಕೆ ಸಾಕಷ್ಟು ನೀರು ದೊರಕಲಿದೆ. ಮೂಡಬಿದಿರೆ ಪಟ್ಟಣ ಪಂಚಾಯತ್ ಮನಸ್ಸು ಮಾಡಿದರೆ ಕೆರೆ ಅಭಿವೃದ್ದಿ ಖಂಡಿತವಾಗಿಯೂ ಸಾಧ್ಯವಿದೆ ಎಂದರು.
ಮೊಹಲ್ಲ ವಾರ್ಡಿನಲ್ಲಿ ಕೆರೆ, ಬಸದಿ, ಅಂಕಸಾಲೆ ಮತ್ತು ಮೊಹಲ್ಲ ಕೆರೆ ಇದೆ. ಇವು ಉತ್ತಮ ನೀರಿನ ತಾಣಗಳಾಗಿದ್ದು, ಪುನರುಜ್ಜೀವನಗೊಳಬೇಕಿದೆ ಎಂದು ಕಡಲ ಕೆರೆಯಲ್ಲಿ ಜಲಾಶಯ ನವೀಕರಣ ಯೋಜನೆಯ ರೂವಾರಿ ಡಾ. ಸೋನ್ಸ್ ಹೇಳಿದರು.
''ರೋಟರಿ ಕ್ಲಬ್ ಆಫ್ ಮೂಡಬಿದಿರೆ ರೋಟರಿ ಪ್ರದೇಶಾಭಿವೃದ್ದಿಗೆ 7000 ಡಾಲರ್ ದೇಣಿಗೆ ನೀಡಿದೆ. ಈ ಹಣವನ್ನು ಪಟ್ಟಣದ ಕೆರೆ ಕಟ್ಟೆಗಳ ನವೀಕರಣಕ್ಕೆ ಬಳಕೆಯಾಗಬಹುದು ಎಂದು ರೋಟರಿ ಕ್ಲಬ್ನ ಪದಾಧಿಕಾರಿ ಮೊಹಮ್ಮದ್ ಶೆರೀಫ್ ವಿಶ್ವಾಸ ವ್ಯಕ್ತಪಡಿಸಿದರು.