ಜೋಡುಪಾಲ ನಿಗೂಢ ಸ್ಫೋಟ ಭೇದಿಸಲಿಕ್ಕೆ ಹೋದಾಗ ಒನ್ಇಂಡಿಯಾಗೆ ಕಂಡದ್ದು...
ಮಂಗಳೂರು, ಆಗಸ್ಟ್ 24: ಪಶ್ಚಿಮ ಘಟ್ಟದ ಉದ್ದಕ್ಕೂ ಭೂಮಿ ಬಿರುಕು ಬಿಟ್ಟಿದೆಯೇ ? ಭಾರೀ ಮಳೆ ಸುರಿದರೆ ಮತ್ತೆ ಬೆಟ್ಟದಲ್ಲಿ ಸರಣಿ ಕುಸಿತವಾಗಲಿದೆಯೇ ? ಇಂತಹದೊಂದು ಅನುಮಾನ ಕಾಡಲಾರಂಭಿಸಿದೆ.
ಭಾರೀ ಭೂ ಕುಸಿತ ದುರಂತ ಸಂಭವಿಸಿದ ಜೋಡುಪಾಲ ಪ್ರದೇಶದ ಭೇಟಿ ಸಂದರ್ಭದಲ್ಲಿ ಬೆಟ್ಟದ ತಪ್ಪಲು ಕುಸಿಯುತ್ತಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿದೆ. ಹೊರಜಗತ್ತಿಗೆ ಗೋಚರಿಸದ ಹಲವಾರು ರಹಸ್ಯ ಭೂಕುಸಿತಗಳು ಸಾಕ್ಷಿ ಸಮೇತ ಬೆಳಕಿಗೆ ಬಂದಿವೆ.
ಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು
ಕಳೆದ ಕೆಲವು ದಿನಗಳಲ್ಲಿ ಬೆಟ್ಟಗಳು ಮತ್ತೆ ಮತ್ತೆ ಕುಸಿದು ಬೀಳುತ್ತಿರುವ ದುರಂತ ಸನ್ನಿವೇಶ ಎದುರಾಗುತ್ತಿವೆ. ಕೊಡಗು, ಶಿರಾಡಿ, ಬಿಸ್ಲೆ , ಬ್ರಹ್ಮಗಿರಿ, ಕೂಜುಮಲೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೆಟ್ಟ ಕುಸಿದ ಸರಣಿ ಘಟನೆ ನಡೆದಿದೆ.ಇತ್ತೀಚೆಗೆ ಕುದುರೆಮುಖ ಪ್ರದೇಶ, ಚಿಕ್ಕಮಗಳೂರು ಜಿಲ್ಲೆಯ ಕೆಲಭಾಗದಲ್ಲೂ ಭೂ ಕುಸಿತ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಬೆಳವಣಿಗೆಗಳು ಪಶ್ಚಿಮ ಘಟ್ಟ ತಪ್ಪಲಿನ ಜನರ ಅತಂಕಕ್ಕೆ ಕಾರಣವಾಗಿದೆ.
ಈ ಆತಂಕಕ್ಕೆ ತಜ್ಞರ ಅಭಿಪ್ರಾಯಗಳು ಕೂಡ ಪುಷ್ಠಿ ನೀಡಿವೆ. ಎರಡು ದಿನಗಳ ಹಿಂದೆ ದುರಂತ ನಡೆದ ಜೋಡುಪಾಲ ,ಮದೆನಾಡು, ಅರೆಕಲ್ಲು ಪ್ರದೇಶಕ್ಕೆ ಭೇಟಿ ನೀಡಿದ ವಿಜ್ಞಾನಿಗಳ ತಂಡ ಕೂಡ ಅಪಾಯದ ಮುನ್ಸೂಚನೆ ನೀಡಿದೆ.
ಈ ಭಾಗದಲ್ಲಿ ನಿರಂತರ ಮಳೆ ಸುರಿದರೆ ದುರಂತ ಸಂಭವಿಸಲಿದೆ ಎಂದು ವಿಜ್ಞಾನಿಗಳ ತಂಡ ಅಭಿಪ್ರಾಯಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಇಲಾಖೆಯ ನಿರ್ದೇಶಕ ಡಾ .ಶ್ರೀನಿವಾಸ್ ರೆಡ್ಡಿ, ಬೆಟ್ಟ ಪ್ರದೇಶಗಳಲ್ಲಿ ನೀರು ಇಂಗಿ ಮಣ್ಣು ಸಡಿಲಗೊಂಡು ಭೂ ಪದರದಿಂದ ಜಲ ಸ್ಫೋಟವಾಗಿ ಹೊರಬಂದಿದೆ.
ಜೋಡುಪಾಲದಲ್ಲಿ ಮನುಷ್ಯರ ಸುಳಿವಿಲ್ಲ, ಸಾಯೋ ಸ್ಥಿತೀಲಿ ಸಾಕುಪ್ರಾಣಿಗಳು
ದುರಂತ ಸಂಭವಿಸಿದ ಜೋಡುಪಾಲ, ಮದೆನಾಡು ಹಾಗು ಅರೆಕಲ್ಲು ಸ್ಥಳಗಳಲ್ಲಿ ಜನರ ವಾಸ ಅಪಾಯಕಾರಿ ಎಂದು ಅವರು ಮಾಹಿತಿ ನೀಡಿದ್ದರು. ಅಂದಹಾಗೆ ದುರಂತ ನಡೆದ ಕೆಲವು ಸ್ಥಳಗಳಿಗೆ ವಿಜ್ಞಾನಿಗಳ ತಂಡ ತೆರಳದಿದ್ದರೂ ಒನ್ ಇಂಡಿಯಾ ತಲುಪಿತ್ತು. ಅಲ್ಲಿ ನಮ್ಮ ಕಣ್ಣಿಗೆ ಕಂಡ ಚಿತ್ರಣವನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನ ಮಾಡಿದ್ದೇವೆ.
ಕೇಳಿ ಬರುತ್ತಿರುವುದು ಜಲಸ್ಫೋಟ
ಈ ಭಾಗದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಭೂಮಿಯ ಅಂತರ್ ಜಲದ ಮಟ್ಟ ಏರಿಕೆಯಾಗಿದ್ದು, ಅರೆಕಲ್ಲು ಪ್ರದೇಶದಲ್ಲಿ ಭೂಮಿ ಕುಸಿಯುತ್ತಿದೆ. ಈ ಕಾರಣಗಳಿಂದ ಅರೆಕಲ್ಲು, ಜೋಡುಪಾಲ ಪ್ರದೇಶದಲ್ಲಿ ಮತ್ತೆ ಅಪಾಯ ಸಂಭವಿಸುವ ಅತಂಕವಿರುವ ಕಾರಣ ಈ ಪ್ರದೇಶದಲ್ಲಿ ವಾಸ ಅಪಾಯಕಾರಿ ಎಂದು ವಿಜ್ಞಾನಿಗಳು ಆಭಿಪ್ರಾಯಪಟ್ಟಿದ್ದಾರೆ.
ಇನ್ನೂ ಸ್ಫೋಟದ ಶಬ್ದಕ್ಕೂ ಭೂಕಂಪನಕ್ಕೂ ಸಂಬಂಧವಿಲ್ಲ ಎಂದು ಡಾ. ಶ್ರೀನಿವಾಸ್ ರೆಡ್ಡಿ ಸ್ಪಷ್ಟಪಡಿಸಿದ್ದು, ಜಲಸ್ಫೋಟವೇ ಈ ಭಾರೀ ಶಬ್ದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
3 ತಿಂಗಳಲ್ಲಿ ಅಧ್ಯಯನದ ವರದಿ ಸಿದ್ಧ
ಎಲ್ಲಾ ಆತಂಕಗಳಿಗೆ ಆಯಾ ಪ್ರದೇಶದ ಭೌಗೋಳಿಕ ಸಮಗ್ರ ಅಧ್ಯಯನದಿಂದ ಮಾತ್ರ ಉತ್ತರ ದೊರೆಯಲಿದೆ. ಶೀಘ್ರವೇ ಭೂ ವಿಜ್ಞಾನಿಗಳ ತಂಡ ಜಲಪ್ರಳಯ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಲಿದೆ. 2 ರಿಂದ 3 ತಿಂಗಳ ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲಿದೆ.
ಈ ಸಂದರ್ಭದಲ್ಲಿ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಿರುಕು, ಧರಣಾ ಸಾಮರ್ಥ್ಯ ಎಷ್ಟಿದೆ? ದುರಂತಗಳು ನಡೆಯದಂತೆ ಜಾರಿಗೆ ತರಬೇಕಾದ ಕ್ರಮಗಳೇನು? ಇವೆಲ್ಲಕ್ಕೂ ಸ್ಪಷ್ಟ ಉತ್ತರ ದೊರೆಯಲಿದೆ.
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವೆ ಕಾಡುಪ್ರಾಣಿಗಳು?
ನಿಗೂಢ ಶಬ್ದ ತಿಳಿಯುವ ಯತ್ನ
ಈ ನಡುವೆ ಜೋಡುಪಾಲದಲ್ಲಿ ಸಂಭವಿಸಿದ ಭಾರೀ ಭೂ ಕುಸಿತದ ಮೊದಲು ನಡೆದ ಜಲಸ್ಫೋಟದ ಮೂಲ ಹುಡುಕುವ ಪ್ರಯತ್ನ ಒನ್ ಇಂಡಿಯಾ ನಡೆಸಿತ್ತು. ದುರಂತ ನಡೆಯುವ ಮುನ್ನ ಜೋಡುಪಾಲ ಹಾಗು ಮದೆನಾಡು ಗ್ರಾಮದ ಜನರಿಗೆ ಭಾರೀ ಸ್ಫೋಟಗಳು ಸಂಭವಿಸಿದ ಸದ್ದು ಕೇಳಿ ಬಂದಿತ್ತು.
ಒನ್ ಇಂಡಿಯಾ ದುರಂತ ಸಂಭವಿಸಿದ ಜೋಡುಪಾಲದ ಭೇಟಿ ಸಂದರ್ಭದಲ್ಲಿ ಈ ನಿಗೂಢ ಶಬ್ದದ ಬಗ್ಗೆ ಕುತೂಹಲ ಹೆಚ್ಚಾಗಿ ಉತ್ತರ ಹುಡುಕುವ ಪ್ರಯತ್ನ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಜೋಡುಪಾಲದ ಭೇಟಿ ಸಂದರ್ಭದಲ್ಲಿ ಬೆಟ್ಟದ ಹಾದಿಯಲ್ಲೇ ಕೆಲ ಫರ್ಲಾಂಗ್ ಸಾಗಿದಾಗ ಚಿಕ್ಕ ತೊರೆಯೊಂದು ಬೃಹತ್ ನದಿಯಾಗಿ ಹರಿದು ಮುಂದೆ ಸಿಕ್ಕಿದ ಎಲ್ಲವನ್ನು ಕೊಚ್ಚಿಸಾಗಿದ್ದು ಗೋಚರಿಸಿತ್ತು.
ಈ ಸಣ್ಣ ತೊರೆ ಬೃಹತ್ ನದಿಯಾಗಿ ಬದಲಾಗಿದ್ದಾದರೂ ಹೇಗೆ? ತನ್ನೊಂದಿಗೆ ಭಾರೀ ಗಾತ್ರದ ಬಂಡೆ, ಬೃಹತ್ ಗಾತ್ರದ ಮರಗಳನ್ನು ಹೊತ್ತು ತಂದಿದ್ದ ನೀರು ಬಂದದ್ದಾದರೂ ಎಲ್ಲಿಂದ ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಸಲಾಯಿತು.
ಭಾರೀ ಭೂ ಕುಸಿತ
ಸೃಷ್ಠಿಯಾದ ಬೃಹತ್ ನದಿ ಪಾತ್ರದಲ್ಲಿ ಹೂತು ಹೋಗುವಷ್ಟು ಕೆಸರು ತುಂಬಿದ ದಾರಿಯಲ್ಲಿ ಬಂಡೆಕಲ್ಲುಗಳ ನಡುವೆ ಬೆಟ್ಟದ ಮೇಲೆ ಸುಮಾರು 3 ಕಿ.ಮೀ ಸಾಗಿದ ಬಳಿಕ ಬೆಟ್ಟದಲ್ಲಿ ಜಲ ಸ್ಫೋಟ ಗೊಂಡು ಗುಡ್ಡ ಜರಿದು ಕೆಳಗೆ ಬಂದ ಭಾಗ ಗೋಚರಿಸುತ್ತದೆ. ಈ ಭಾಗದಿಂದಲೇ ಭೂಮಿಯಲ್ಲಿ ಸಂಗ್ರಹವಾಗಿದ್ದ ನೀರು ಸ್ಫೋಟಗೊಂಡು ಚಿಮ್ಮಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.
ಘೋರ ದುರಂತ ಸೃಷ್ಟಿಯಾದ ಸ್ಥಳದವರೆಗೆ ಅಧ್ಯಯನಕ್ಕೆ ಬಂದ ವಿಜ್ಞಾನಿಗಳ ತಂಡ ತೆರಳದಿದ್ದರೂ ಒನ್ ಇಂಡಿಯಾ ತಲುಪಿತ್ತು. ಅದಲ್ಲದೇ ಸಮೀಪದಲ್ಲಿರುವ ಬ್ರಹ್ಮಗಿರಿ ಸೇರದಂತೆ ಇತರ ಬೆಟ್ಟಗಳಲ್ಲಿ ಭಾರೀ ಭೂ ಕುಸಿತ ಸಂಭವಿಸದ ಸ್ಥಳಗಳು ಪತ್ತೆಯಾಗಿದೆ.
ಪಶ್ಚಿಮ ಘಟ್ಟದುದ್ದಕ್ಕೂ ದಟ್ಟಾರಣ್ಯದ ನಡುವೆ ಜಲಸ್ಫೋಟಗೊಂಡು ಭಾರೀ ಭೂ ಕುಸಿತ ಸಂಭವಿಸಿದ ಘಟನೆಗಳು ಬೆಳಕಿಗೆ ಬಂದಿದೆ.
ಜನರಲ್ಲಿ ಆತಂಕ ಮೂಡಿಸಿದ ಬೆಳವಣಿಗೆಗಳು
ಇತ್ತೀಚೆಗೆ ಸುಳ್ಯ ತಾಲೂಕಿನ ಕಲ್ಮಕಾರಿನ ಬಳಿಯ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿರುವುದು ಬೆಳೆಕಿಗೆ ಬಂದಿತ್ತು. ಅದಲ್ಲದೇ ಅರೆಕಲ್ಲು ಪ್ರದೇಶದಲ್ಲಿ ಭಾರೀ ಭೂ ಕುಸಿತ ಸಂಭವಿಸಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ಈ ಎಲ್ಲಾ ಬೆಳವಣಿಗೆಗಳು ಜನರಲ್ಲಿ ಅತಂಕ ಮೂಡಿಸುತ್ತಿದೆ.
ಪ್ರಕೃತಿಯ ವ್ಯವಸ್ಥೆಯಲ್ಲಿ ಮಾನವನ ಹಸ್ತಕ್ಷೇಪವೇ ಗುಡ್ಡ ಕುಸಿತ ಘಟನೆಗಳಿಗೆ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಜನರಲ್ಲಿ ಮನೆಮಾಡಿರುವ ಅತಂಕಗಳಿಗೆ ವಿಜ್ಞಾನಿಗಳ ಅಧ್ಯಯನ ಉತ್ತರ ನೀಡಲಿದೆ. ಆ ಸಮಯದವರೆಗೆ ಅತಂಕದಲ್ಲೇ ದಿನದೂಡುವ ಪರಿಸ್ಥಿತಿ ಜನರ ಮುಂದಿದೆ.