ದಕ್ಷಿಣ ಕನ್ನಡ: ಕೊರಗಜ್ಜನ ವೇಷ ಧರಿಸಿ ವರನ ಹುಚ್ಚಾಟ; ಕಠಿಣ ಕ್ರಮಕ್ಕೆ ಆಗ್ರಹ
ಮಂಗಳೂರು, ಜನವರಿ 7: ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅವಮಾನ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಎಂಬಲ್ಲಿ ನಡೆದಿದೆ. ಮದುವೆ ದಿನ ವರ- ವಧುವಿನ ಮನೆಯಲ್ಲಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದು, ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜನವರಿ 6ರ ಗುರುವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದ್ದು, ಬಂಟ್ವಾಳದ ಕೊಳ್ನಾಡು ಗ್ರಾಮದ ಅಝೀಝ್ ಎಂಬುವವರ ಪುತ್ರಿಯ ಮಗಳ ವಿವಾಹ ಕೇರಳ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ನಡೆದಿತ್ತು. ಮದುವೆ ದಿನ ಮುಸ್ಲಿಂ ಸಂಪ್ರದಾಯದಂತೆ ವರ- ವಧುವಿನ ಮನೆಗೆ ಬರುವ ಸಂಪ್ರದಾಯವಿದ್ದು, ಈ ವೇಳೆ ವರ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವರನ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
ಕೊರಗಜ್ಜ ದೈವಕ್ಕೆ ಮತ್ತೆ ಅಪಮಾನ
ಕರಾವಳಿಯ ಜನರ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅಪಮಾನ ಮಾಡಲಾಗಿದೆ. ಕೊರಗಜ್ಜ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ದುರುಳರು ಮಾರಕ ಕಾಯಿಲೆಗೆ ಒಳಗಾಗಿ ಬಲಿಯಾದ ಘಟನೆ ಮಂಗಳೂರಿಗರ ಅಕ್ಷಿಪಟಲದಲ್ಲಿ ಇನ್ನೂ ಜೀವಂತವಾಗಿರುವಾಗಲೇ, ಕೊರಗಜ್ಜ ದೈವಕ್ಕೆ ಮತ್ತೆ ಅಪಮಾನ ಮಾಡಲಾಗಿದೆ. ಮದುವೆ ದಿನ ವರ- ವಧುವಿನ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ, ದೈವಕ್ಕೆ ಅಪಹಾಸ್ಯ ಮಾಡಿದ ಘಟನೆ ಬಂಟ್ವಾಳದ ಕೊಳ್ನಾಡಿನಲ್ಲಿ ನಡೆದಿದೆ.
ಕೊಳ್ನಾಡಿನ ಅಝೀಝ್ ಎಂಬುವವರ ಮಗಳನ್ನು ಕೇರಳದ ಉಪ್ಪಳದ ಯುವಕನೊಂದಿಗೆ ಮಾಡಲಾಗಿತ್ತು. ಮದುವೆ ದಿನ ರಾತ್ರಿ ವಧುವಿನ ಮನೆಗೆ ಬರುವ ವರ ಮತ್ತು ಆತನ ಸ್ನೇಹಿತರು ವಧುವಿನ ಮನೆಯಲ್ಲಿ ಸಂತೋಷದ ಪಾರ್ಟಿ ಮಾಡೋದು ಮುಸ್ಲಿಂ ಸಂಪ್ರದಾಯಗಳಲ್ಲಿ ಒಂದಾಗಿದೆ.
ವರ ಕೊರಗಜ್ಜನ ವೇಷ ಭೂಷಣ ಧರಿಸಿದ್ದಾನೆ
ವಧುವಿನ ಮನೆಗೆ ರಾತ್ರಿ ಆಗಮಿಸಿದ್ದ ವರನ ಸ್ನೇಹಿತ ಬಳಗ ವಧುವಿನ ಮನೆಯಲ್ಲಿ ಹುಚ್ಚಾಟ ಮೆರೆದಿದೆ. ವರ ಕೊರಗಜ್ಜನ ವೇಷ ಭೂಷಣ ಧರಿಸಿ, ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣ ಹಚ್ಚಿಕೊಂಡು ವರ ಬಂದಿದ್ದ. ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದ ವರನ ತಂಡ ಆ ಬಳಿಕ ವಧುವಿನ ಮನೆಯಲ್ಲಿ ಹುಚ್ಚಾಟ ಮೆರೆದಿದೆ.
ವರನ ತಂಡ ವಧುವಿನ ಮನೆ ಮುಂಭಾಗ ಹಾಡು ಹೇಳುತ್ತಾ ಬಂದಿದ್ದು, ಸುಮಾರು ಹೊತ್ತು ಪದ್ಯ ಹೇಳುತ್ತಾ, ನಲಿಯುತ್ತಾ ಕಾಲಕಲ ಕಳೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಈ ಕೃತ್ಯದಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕೃತ್ಯವನ್ನು ಖಂಡಿಸಿರುವ ಆಡಿಯೋ ವೈರಲ್
ಯುವಕರ ಈ ಕೃತ್ಯವನ್ನು ಸ್ವತಃ ಮುಸ್ಲಿಂ ಸಮುದಾಯದ ಹಲವರು ಖಂಡಿಸಿದ್ದಾರೆ. ಈ ಕೃತ್ಯವನ್ನು ಖಂಡಿಸಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯದ್ದು ಎನ್ನಲಾದವರ ಆಡಿಯೋ ವೈರಲ್ ಆಗಿದ್ದು, ಹುಚ್ಚಾಟ ಪ್ರದರ್ಶಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಈ ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಕಿಡಿಕಾರಿವೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ. "ಕೆಲ ದಿನಗಳ ಹಿಂದೆ ಸಾಲೆತ್ತೂರು ಕೊಳ್ನಾಡು ಗ್ರಾಮದ ಮದುವೆಯಲ್ಲಿ ಮಂಜೇಶ್ವರ ಮೂಲದ ವರ ನಮ್ಮ ಆರಾಧ್ಯ ದೈವ ಕೊರಗಜ್ಜನಂತೆ ತಲೆಗೆ ಅಡಕೆ ಹಾಳೆಯ ಟೋಪಿಯನ್ನು ಧರಿಸಿ ಮುಖಕ್ಕೆ ಮಸಿಯನ್ನು ಬಳಿದು ವೇಷವನ್ನು ಧರಿಸಿ ವಿಚಿತ್ರವಾಗಿ ಕುಣಿದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾನೆ ಎಂದು ದೂರಿವೆ.
Recommended Video
ವರ ಹಾಗೂ ಸ್ನೇಹಿತರ ಮೇಲೆ ಕಠಿಣ ಕಾನೂನು ಕ್ರಮ
ಅಲ್ಲದೆ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನನ್ನು ಮತ್ತು ಕೊರಗ ಸಮುದಾಯವನ್ನು ಅಮಾನಿಸಿರುವ ಕೃತ್ಯ ಅಮಾನವೀಯವಾಗಿದ್ದು, ಇದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿ ಅವಮಾನ ಮಾಡುವ ಕೃತ್ಯ ನಿರಂತರವಾಗಿ ನಡೆಯುತ್ತಿದ್ದು, ಅದರ ಮುಂದುವರಿದ ಭಾಗ ಇದಾಗಿದ್ದು, ಪೊಲೀಸ್ ಇಲಾಖೆ ವರನ ಮೇಲೆ ಮತ್ತು ವರನ ಸ್ನೇಹಿತರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹ ಮಾಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ವಿಟ್ಲ ಠಾಣೆಯ ಪೊಲೀಸರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಪಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವರ ಉಮರುಳ್ಳ ಬಾಷಿತ್ ವಿರುದ್ಧ ಮತ್ತು ಆತನ ಸ್ನೇಹಿತರ ವಿರುದ್ಧ ವಿಟ್ಲ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153ಎ, 295ರಂತೆ ಪ್ರಕರಣ ದಾಖಲಾಗಿದೆ.