ಮಂಗಳೂರು ಕ್ರೈಸ್ತ ಧರ್ಮಪ್ರಾಂತದಲ್ಲಿ ಹಸಿರು ಕ್ರಾಂತಿ
ಮಂಗಳೂರು, ಜೂನ್ 04: ಸಮುದಾಯದ ಎಲ್ಲ ಮನೆಗಳಲ್ಲಿ ಗಿಡ ನೆಡಲು ಕರೆ ನೀಡುವ ಮೂಲಕ ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಈ ವರ್ಷ ಹಸಿರು ಕ್ರಾಂತಿಗೆ ಪಣ ತೊಟ್ಟಿದೆ. ಧರ್ಮಪ್ರಾಂತ ವ್ಯಾಪ್ತಿಗೆ ಒಳಪಡುವ ಕ್ರೈಸ್ತ ಸಮುದಾಯದ ಎಲ್ಲ ಮನೆಗಳಲ್ಲಿ ಗಿಡ ನೆಡಲು ಸೂಚನೆ ನೀಡಲಾಗಿದೆ.
ಧರ್ಮಪ್ರಾಂತದ ಬಿಷಪ್ ಪೀಟರ್ ಪೌಲ್ ಸಲ್ದಾನ ಅವರ ಸೂಚನೆಯಂತೆ ಎಲ್ಲ ಮನೆಗಳಲ್ಲಿ ಗಿಡ ನೆಡಲು ನಿರ್ಧರಿಸಲಾಗಿದ್ದು ಚರ್ಚ್ನಲ್ಲಿ ಈ ಬಗ್ಗೆ ಸಂದೇಶ ರವಾನಿಸಲಾಗಿದೆ. ಪರಿಸರದ ಅಸಮತೋಲನ ತಪ್ಪಿಸಲು ಈ ವರ್ಷ ಸಮರೋಪಾದಿಯಲ್ಲಿ ಹಸಿರಿನ ರಕ್ಷಣೆಗೆ ಒಂದಾಗಬೇಕು ಎಂಬ ಸಂದೇಶ ಸಾರಲಾಗಿದೆ.
ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್
ಸಮುದಾಯದ ಮನೆಗಳಿಗೆ ಗಿಡ ವಿತರಿಸಲು ಸಮಿತಿ ರಚಿಸಲಾಗಿದೆ. ಈ ವರ್ಷ 70 ಸಾವಿರ ಗಿಡ ನಾಟಿ ಗುರಿ ಹೊಂದಲಾಗಿದೆ. ಮಳೆ ಚುರುಕಾದ ಬಳಿಕ ಜೂನ್ 15ರ ವೇಳೆಗೆ ಎಲ್ಲ ಮನೆಗಳಿಗೆ ಗಿಡ ತಲುಪಿಸಲು ಕ್ರಮಕೈಗೊಳ್ಳಲಾಗಿದ್ದು ಈ ಕಾರ್ಯಕ್ಕೆ ಅರಣ್ಯ ಇಲಾಖೆ ಕೈಜೋಡಿಸಿದೆ.
ಧರ್ಮಪ್ರಾಂತದ ನೂತನ ಬಿಷಪ್ ಪೀಟರ್ ಪೌಲ್ ಸಲ್ದಾನ ಅಧಿಕಾರ ಸ್ವೀಕರಿಸುವಾಗಲೇ ಹಸಿರು ಯೋಜನೆಯ ಪಣತೊಟ್ಟಿದ್ದರು. ಕಳೆದ ವರ್ಷ ಎಲ್ಲ ಚರ್ಚ್ಗಳ ಆವರಣದಲ್ಲಿ ಬಿಷಪ್ ರ ಕೋರಿಕೆಯಂತೆ ಗಿಡ ನೆಡಲಾಗಿತ್ತು. ಈ ವರ್ಷ ಸಮರೋಪಾದಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕ್ರೈಸ್ತ ಮನೆಗಳಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಡಬೇಕೆಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9.8 ಲಕ್ಷ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ
ಜನರು ಇಷ್ಟಪಟ್ಟ ಗಿಡಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಯಾವ ಗಿಡ ಬೇಕೆಂದು ಧರ್ಮಪ್ರಾಂತಕ್ಕೆ ಮೊದಲೇ ತಿಳಿಸಿದರೆ ಆ ಗಿಡಗಳನ್ನು ಚರ್ಚ್ಗಳಿಗೆ ತಲುಪಿಸಲಾಗುತ್ತದೆ. ಗಿಡ ನಾಟಿಯ ಮಾಹಿತಿ ಸಂಗ್ರಹಣೆಗೆ ಧರ್ಮಪ್ರಾಂತದಿಂದ ಆಯಾ ಪ್ರದೇಶದ ಚರ್ಚ್ ಮೂಲಕ ಕುಟುಂಬಗಳಿಗೆ ಅರ್ಜಿ ನಮೂನೆ ರವಾನೆಯಾಗಿದೆ. ಮನೆಗಳ ಮಾಹಿತಿಯೊಂದಿಗೆ ಎಷ್ಟು ಗಿಡ ಬೇಕು, ಯಾವ ಗಿಡ ಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ. ವಿವಿಧ ಹಣ್ಣುಗಳ ಗಿಡ, ಅಲಂಕಾರಿಕಾ ಗಿಡ, ವಾಣಿಜ್ಯೋದ್ದೇಶದ ಗಿಡಗಳನ್ನು ನೆಡಲು ಅವಕಾಶವಿದೆ.