ಬಿಪಿಎಲ್ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ತಾಳೆಎಣ್ಣೆ ವಿತರಣೆ
ಮಂಗಳೂರು, ಆಗಸ್ಟ್ 24 : 'ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಪಡಿತರದ ಜತೆ ತೆಂಗಿನ ಎಣ್ಣೆ ಅಥಾವಾ ಸೂರ್ಯಕಾಂತಿ ಎಣ್ಣೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವ ಪ್ರಸ್ತಾವವಿದೆ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳವಾರ ಮಂಗಳೂರಿನ ಸರ್ಕೀಟ್ ಹೌಸ್ನಲ್ಲಿ ಮಾತನಾಡಿದ ಸಚಿವರು, 'ಈಗ ಬಿಪಿಎಲ್ ಕುಟುಂಬಗಳಿಗೆ ತಾಳೆ ಎಣ್ಣೆ ವಿತರಿಸಲಾಗುತ್ತಿದೆ. ಅದೇ ಸಬ್ಸಿಡಿ ದರದಲ್ಲಿ ತೆಂಗಿನ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಬಿಪಿಎಲ್ ಕುಟುಂಬಗಳಿಗೆ ನೀಡುವ ಪ್ರಸ್ತಾವ ಪರಿಶೀಲನೆಯಲ್ಲಿದೆ' ಎಂದರು.[ನಗರದ ಬಡ ಕುಟುಂಬಗಳಿಗೆ ಹೆಚ್ಚುವರಿ ಸಿಲಿಂಡರ್]
'ಅನರ್ಹ ವ್ಯಕ್ತಿಗಳು ಬಿಪಿಎಲ್ ಪಡಿತರ ಸಹಾಯಧನ ಪಡೆಯುವುದನ್ನು ತಪ್ಪಿಸಲು ಜಾರಿಗೆ ತಂದಿರುವ ಆಹಾರ ಭದ್ರತಾ ಚೀಟಿ (ಕೂಪನ್) ವಿತರಣೆ ಸಪ್ಟೆಂಬರ್ 1ರಿಂದ ಜಿಲ್ಲಾ ಕೇಂದ್ರಗಳಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ' ಎಂದು ಹೇಳಿದರು.[ಬಡವರಿಗೆ ಬಟ್ಟೆ ನೀಡಲು ಬಂತು 'ವಸ್ತ್ರ ಭಾಗ್ಯ' ಯೋಜನೆ]
'ನಗರ ಸ್ಥಳೀಯ ಸಂಸ್ಥೆಗಳ ಸೇವಾ ಕೇಂದ್ರಗಳು, ಕಂದಾಯ ಇಲಾಖೆಯ ಜನಸ್ನೇಹಿ ಕೇಂದ್ರಗಳು ಮತ್ತು ಫ್ರಾಂಚೈಸಿಗಳ ಮೂಲಕ ಕೂಪನ್ಗಳ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು. ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಮೊಬೈಲ್ ಮೂಲಕವೇ ಆಹಾರ ಭದ್ರತಾ ಚೀಟಿ ವಿತರಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು' ಎಂದು ಸಚಿವರು ತಿಳಿಸಿದರು.[ಅನ್ನಭಾಗ್ಯಯೋಜನೆಗೆ ಗೋಧಿ, ಜೋಳ ಸೇರ್ಪಡೆ]