ಅಲ್ಪಸಂಖ್ಯಾತ ಶಾಲೆಗಳಲ್ಲಿ ಆರ್ಟಿಐ : ಸಮಿತಿ ರಚನೆ
ಮಂಗಳೂರು, ಜೂ. 17 : "ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಆಯಾ ಸಮುದಾಯದ ಶೇ.25 ಮಕ್ಕಳಿಗೆ ಸೀಟು ನೀಡಿದರೆ ಸಾಕು ಎಂಬ ರಾಜ್ಯ ಸರ್ಕಾರದ ನಿರ್ಧಾರದ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ, ಸಲಹೆಗಳನ್ನು ನೀಡಲು ಸಮಿತಿಯೊಂದನ್ನು 15 ದಿನಗಳಲ್ಲಿ ರಚಿಸಲಾಗುವುದು" ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಹಾಲಿ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಮುಂದಿನ ಸಾಲಿನಿಂದ ಹೊಸ ನೀತಿ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ ಎಂದರು.
ಸರ್ಕಾರದ ನಿರ್ಧಾರದ ಸಾಧಕ-ಬಾಧಕಗಳ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು 15 ದಿನದೊಳಗೆ ರಚಿಸಲಾಗುವುದು. ಸಮಿತಿ ನೀಡುವ ವರದಿ ಮತ್ತು ಸದನದಲ್ಲಿ ನಡೆಯುವ ಚರ್ಚೆಯ ಸಲಹೆಗಳನ್ನು ಪಡೆದುಕೊಂಡು ಒಂದು ಸ್ಪಷ್ಟವಾದ ರೂಪುರೇಷೆಯೊಂದಿಗೆ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರದ ಹಣ ನೀಡಲಾಗುವುದು
ವಿದ್ಯಾರ್ಥಿಗಳ ಸಮವಸ್ತ್ರವನ್ನು ಇನ್ನು ಏಜೆನ್ಸಿಗಳ ಮೂಲಕ ವಿತರಣೆ ಮಾಡುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೇ ನೇರವಾಗಿ ಸಮವಸ್ತ್ರದ ಹಣ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಏಜನ್ಸಿಗಳಿಗೆ ಗುತ್ತಿಗೆ ಕೊಡುವುದಿಲ್ಲ
ರಾಜ್ಯದಲ್ಲಿ ಈ ಹಿಂದಿನ ವರ್ಷಗಳಲ್ಲಿ ಸಮವಸ್ತ್ರವನ್ನು ಟೆಂಡರ್ ಕರೆದು ಒಂದು ಸಂಸ್ಥೆಯ ಮೂಲಕ ವಿತರಿಸಲಾಗುತ್ತಿತ್ತು. ಸಮವಸ್ತ್ರ ವಿತರಣೆಯ ಜವಾಬ್ದಾರಿಯನ್ನು ಒಂದು ಏಜೆನ್ಸಿಗೆ ಗುತ್ತಿಗೆ ವಹಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಆದ್ದರಿಂದ ಈಗಾಗಲೇ ಎಲ್ಲ ಶಾಲಾಭಿವೃದ್ಧಿ ಸಮಿತಿಗಳ ಖಾತೆ ಸಂಖ್ಯೆ ಸಂಗ್ರಹಿಸಲಾಗಿದ್ದು, ಸಮವಸ್ತ್ರದ ಹಣವನ್ನು ನೇರವಾಗಿ ಪಾವತಿಸಲಾಗುವುದು ಎಂದು ಸಚಿವರು ತಿಳಿಸಿದರು.
ಲೆಕ್ಕಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಮೊದಲು ಏಜೆನ್ಸಿ ಮೂಲಕ ಸಮವಸ್ತ್ರ ವಿತರಣೆ ಮಾಡಿದ್ದರಿಂದ ಲೆಕ್ಕಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇದರಿಂದಾಗಿ ರಾಜ್ಯಕ್ಕೆ ಬರಬೇಕಾಗಿದ್ದ 800 ಕೋಟಿ ರೂ. ಕೂಡ ತಪ್ಪಿಹೋಗಿತ್ತು ಎಂದು ಸಚಿವರು ಹೇಳಿದರು.
ಮುಖ್ಯ ಶಿಕ್ಷಕರಿಗೆ ಕ್ಲಾಸ್
ಎಸ್ಎಸ್ಎಲ್ ಸಿಯಲ್ಲಿ ಕನಿಷ್ಠ ಫಲಿತಾಂಶ ಪಡೆದ ಶಾಲೆಗಳ ವಿವರಗಳನ್ನು ಪಡೆದುಕೊಂಡು ಅಲ್ಲಿನ ಶಿಕ್ಷಕರು, ಮುಖ್ಯಶಿಕ್ಷಕರಿಗೂ ಕ್ಲಾಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಡಿಮೆ ಫಲಿತಾಂಶ ಪಡೆದ ಶಾಲೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿರುವ ಶಿಕ್ಷಕರು, ಮುಖ್ಯ ಶಿಕ್ಷಕರು ಫಲಿತಾಂಶ ಹೆಚ್ಚಿಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಸಚಿವರು ಹೇಳಿದರು.