ಮಂಗಳೂರು ದಸರಾ ಸೌಹಾರ್ದತೆ: ಶತಮಾನದ ಶಾರಾದಾಮಾತೆಗೆ ಮುಸ್ಲಿಂ ನೇಕಾರ ನೇಯ್ದ ಸೀರೆ!
ಮಂಗಳೂರು, ಸೆಪ್ಟೆಂಬರ್ 24: ದಕ್ಷಿಣ ಕನ್ನಡ ಅಂದರೆ ಕೋಮು ಸೂಕ್ಷ್ಮ ಪ್ರದೇಶ, ಕೋಮು ವಿಚಾರಕ್ಕೆ ಜಿಲ್ಲೆಯಲ್ಲಿ ಆಗ್ಗಾಗ್ಗೆ ಗಲಾಟೆ, ದೊಂಬಿ ನಡೆಯುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಜಿಲ್ಲೆಯಲ್ಲಿ ಸೌಹಾರ್ದತೆ, ಸಾಮರಸ್ಯ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಶಾರಾದಾ ಮಹೋತ್ಸವ ಸಾಕ್ಷಿಯಾಗಿದೆ.
ಮಂಗಳೂರು ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನದ ಸಂಭ್ರಮ. ಈ ಬಾರಿ ಇಲ್ಲಿನ ಶಾರದೆ ಮಾತೆಯು ವಾರಣಾಸಿಯ ಮುಸ್ಲಿಂ ನೇಕಾರರು ನೇಯ್ದ ಬಂಗಾರದ ಹೂವಿನಿಂದ ಕೂಡಿರುವ ಹೊನ್ನಿನ ಜರಿಯುಳ್ಳ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ.
1922ರಲ್ಲಿ ಆರಂಭವಾದ ಇಲ್ಲಿನ ಶಾರದಾ ಮಹೋತ್ಸವವು ಈ ಬಾರಿ ನೂರರ ವರ್ಷದ ಸಂಭ್ರಮದಲ್ಲಿದೆ. ಮಂಗಳೂರಿನ ಪ್ರಖ್ಯಾತ ವಸ್ತ್ರ ಮಳಿಗೆ ಕುಲ್ಯಾಡಿಕರ್ಸ್ ನೂತನ್ ಸಿಲ್ಕ್ ನ ಸಹೋದರರು ತಮ್ಮ ತಾಯಿಯ ನೆನಪಿಗಾಗಿ 1988ರಿಂದ ಶಾರದೆಗೆ ಉಡಿಸಲು ಒಂದು ದಿನದ ಸೀರೆಯನ್ನು ಹರಕೆಯ ರೂಪದಲ್ಲಿ ನೀಡುತ್ತಿದ್ದಾರೆ. ಅದರಂತೆ ಈ ಬಾರಿಯೂ 8ಮೀ. ಹರವಿನ ಬನಾರಸ್ ಸೀರೆಯನ್ನು ನೀಡಲಿದ್ದಾರೆ. ವಿಶೇಷವೆಂದರೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಪದ ನೂರುಲ್ಲಾ ಅಮೀರ್ ಎಂಬ ಮುಸ್ಲಿಂ ನೇಕಾರರ ಕುಟುಂಬವೊಂದು ಈ ಸೀರೆಯನ್ನು ಒಂದೂವರೆ ತಿಂಗಳ ಶ್ರಮದಿಂದ ಕೈಯಿಂದಲೇ ನೇಯ್ಗೆ ಮಾಡಿ ತಯಾರಿಸಿದೆ. ಅಲ್ಲದೆ ಒಂದು ವಾರದ ನಾಲ್ವರ ಶ್ರಮದಲ್ಲಿ ಸೀರೆಗೆ ಸಂಪೂರ್ಣ ಕಸೂತಿಯನ್ನು ಹೆಣೆಯಲಾಗಿದೆ.
8 ಲಕ್ಷ ರೂ ಮೌಲ್ಯದ ಸೀರೆ
ಕಡು ಹಸಿರು ಬಣ್ಣದ ಈ ಸೀರೆಯಲ್ಲಿ ಸರಿಸುಮಾರು 2,600 ಬಂಗಾರದ ಹೂವಿದೆ. ಅಲ್ಲದೆ ಬೆಳ್ಳಿಗೆ ಬಂಗಾರದ ಕೋಟಿಂಗ್ ಇರುವ ಜರಿಯಿಂದಲೇ ಕಸೂತಿ ಹೆಣೆಯಲಾಗಿದೆ. ಸೀರೆಯು ಒಟ್ಟು 11 ಪವನ್ ಚಿನ್ನ ಹಾಗೂ 700 ಗ್ರಾಂ ಬೆಳ್ಳಿಯನ್ನು ಹೊಂದಿದೆ. ಹಿಂದೆ 60-70 ಸಾವಿರ ರೂ. ಬೆಲೆಯ ಸೀರೆಯನ್ನು ನೀಡುತ್ತಿದ್ದ ಕುಲ್ಯಾಡಿಕರ್ಸ್ ಸಹೋದರರು ಈ ಬಾರಿ ತಾಯಿ ಶಾರದೆಗೆ ಬರೋಬ್ಬರಿ 8 ಲಕ್ಷ ರೂ. ಬೆಲೆಯ ಸೀರೆಯನ್ನು ನೀಡಲಿದ್ದಾರೆ.
ಈಗಾಗಲೇ ಈ ಸೀರೆ ಮಂಗಳೂರು ತಲುಪಿದ್ದು, ನವರಾತ್ರಿಯ ಆರನೇ ದಿನ ಶಾರದಾ ಮಾತೆಗೆ ಉಡಿಸಲಾಗುತ್ತದೆ. ನೂರನೇ ವರ್ಷದ ಶಾರಾದಾ ಮಹೋತ್ಸವವನ್ನು ಬಹಳ ಅದ್ಧೂರಿಯಾಗಿ ಮಾಡಲು ಶಾರಾದಾ ಮಹೋತ್ಸವ ಸಮಿತಿ ನಿರ್ಧಾರ ಮಾಡಿದೆ. ಇತ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲೂ ದಸರಾ ಹಬ್ಬದ ಅಂತಿಮ ಸಿದ್ಧತೆ ಭರದಿಂದ ಸಾಗಿದ್ದು, ಮಂಗಳೂರು ದಸರಾ ಸಂಭ್ರಮದಲ್ಲಿ ಮುಳುಗಲಿದೆ.
ಒಟ್ಟಿನಲ್ಲಿ ವೆಂಕಟರಮಣ ದೇವಸ್ಥಾನದ ಶಾರಾದಾ ಮಹೋತ್ಸವದಲ್ಲಿ ಮುಸ್ಲಿಂ ಕುಟಂಬದ ಕೈಸ್ಪರ್ಶದ ಚಾಕಚಕ್ಯತೆಯಿಂದ ಹೆಣೆಯಲಾಗಿರುವ ಈ ಸೀರೆ ಶಾರದಾ ಮಾತೆಯ ಅಲಂಕಾರವಾಗಿ ಉಡಿಸಲಾಗುತ್ತಿರುವುದು ಕರಾವಳಿಯಲ್ಲಿ ಇನ್ನೂ ಹಿಂದೂ - ಮುಸ್ಲಿಂ ಸೌಹಾರ್ದತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾದಂತಿದೆ.