ಜಾರ್ಜ್ ಫರ್ನಾಂಡಿಸ್ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಹೇಳಿದ್ದೇನು?
ಮಂಗಳೂರು, ಜನವರಿ 29: ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ. ಧರ್ಮಸ್ಥಳದಲ್ಲಿ ಮಾತನಾಡಿದ ಅವರು, ಜಾರ್ಜ್ ಹಾಗೂ ತಮ್ಮ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರು.
ಇಂದಿರಾ ಗಾಂಧಿಗೆ ಸೆಡ್ಡು ಹೊಡೆದಿದ್ದ ಕಾರ್ಮಿಕ ನಾಯಕ ಜಾರ್ಜ್
ಜಾರ್ಜ್ ಫರ್ನಾಂಡಿಸ್ ನಿಧನದಿಂದ ದೇಶವು ಓರ್ವ ಅಪ್ರತಿಮ ದೇಶಭಕ್ತನನ್ನು ಕಳೆದುಕೊಂಡಿದೆ. ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದಿಢೀರನೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಅವರು, ನನ್ನ ಮುಂದೆ ಬಂದು, ಐ ಯಾಮ್ ಜಾರ್ಜ್ ಫರ್ನಾಂಡಿಸ್ ಎಂದು ಪರಿಚಯಿಸಿಕೊಂಡಿದ್ದರು. ನನ್ನೊಂದಿಗೆ ಮಾತುಕತೆ ನಡೆಸಿದ ಬಳಿಕ ಧರ್ಮಸ್ಥಳದಿಂದ ವಾಪಸು ಹೋಗಿದ್ದರು.
ಕೇಂದ್ರದಲ್ಲಿ ಮಂತ್ರಿಯಾದ ಬಳಿಕ ಮತ್ತೆ ನನಗೆ ಫೋನ್ ಮಾಡಿ, ನಾನು ಧರ್ಮಸ್ಥಳಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದರು ಎಂದು ಹೆಗ್ಗಡೆ ಅವರು ನೆನಪಿಸಿಕೊಂಡರು. ದಿಢೀರನೆ ಬರುವ ಸಾಧಾರಣ ವ್ಯಕ್ತಿತ್ವದ ಮನುಷ್ಯ ಜಾರ್ಜ್ ಎಂದು ಹೇಳಿದ ಅವರು, ಕಾರ್ಮಿಕರಿಗಾಗಿ, ದೇಶಕ್ಕಾಗಿ ದುಡಿದ ಅಪ್ರತಿಮ ದೇಶಭಕ್ತ ಜಾರ್ಜ್ ಫರ್ನಾಂಡೀಸ್. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.