ಪಚ್ಚಡನಾಡಿಯಲ್ಲಿ ಕುಸಿಯುತ್ತಿದೆ ಕಸದ ರಾಶಿ, ಹೆಚ್ಚುತ್ತಿದೆ ಆತಂಕ
ಮಂಗಳೂರು, ಆಗಸ್ಟ್ 8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಕಳೆದ 2 ದಿನಗಳಿಂದ ಮಂಗಳೂರಿನಲ್ಲಿ ಅಬ್ಬರಿಸಿದ್ದ ಮಳೆರಾಯ ಈಗ ಕೊಂಚ ತಣ್ಣಗಾಗಿದ್ದಾನೆ. ಆದರೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಂಗಳೂರು ಹೊರವಲಯದ ಪಚ್ಚಡನಾಡಿ ಎಂಬಲ್ಲಿನ ಡಂಪಿಂಗ್ ಯಾರ್ಡ್ ನಿಂದ ಬೃಹತ್ ಪ್ರಮಾಣದಲ್ಲಿ ಕಸದ ರಾಶಿ ಇಳಿಜಾರಲ್ಲಿ ಕುಸಿಯುತ್ತಿದ್ದು ಇಲ್ಲಿಯ ಜನರ ಬದುಕು ಕಸದ ರಾಶಿಯಲ್ಲಿ ಸಮಾಧಿಯಾಗುವ ಆತಂಕ ಎದುರಾಗಿದೆ.
ಪಚ್ಚನಾಡಿಯ ತ್ಯಾಜ್ಯ ಡಂಪಿಂಗ್ ಯಾರ್ಡ್ ನಲ್ಲಿ ಮಳೆಯಿಂದಾಗಿ ಬೃಹತ್ ಕಸದ ರಾಶಿ ಕೆಳಭಾಗಕ್ಕೆ ಜಾರುತ್ತಿದೆ. ಕುಸಿದಿರುವ ತ್ಯಾಜ್ಯವು ಡಂಪಿಂಗ್ ಯಾರ್ಡ್ ಕೆಳಭಾಗದಲ್ಲಿರುವ ಮಂದಾರ ಪರಿಸರದ ಒಂದು ಕಿ.ಮೀ.ನಷ್ಟು ವಿಸ್ತಾರದಲ್ಲಿ ವ್ಯಾಪಿಸಿದ್ದು, ಸುಮಾರು 4 ಎಕರೆಯಷ್ಟು ಕೃಷಿ ಭೂಮಿಯನ್ನು ಕಸದ ರಾಶಿ ಆವರಿಸಿಕೊಂಡಿದೆ.
ತುಂಬಿ ಹರಿಯುತ್ತಿರುವ ನದಿಗಳು; ದಕ್ಷಿಣ ಕನ್ನಡಕ್ಕೆ ಬರಲು ಹಿಂದೇಟಾಕುತ್ತಿರುವ ಭಕ್ತರು
ಎರಡು ನಾಗಬನ, ಎರಡು ದೈವಸ್ಥಾನ ಮತ್ತು ಒಂದು ಹಳೆಯ ಮನೆ ತ್ಯಾಜ್ಯ ರಾಶಿಯಲ್ಲಿ ಸಂಪೂರ್ಣ ಮುಳುಗಿದ್ದು, 10ರಷ್ಟು ಮನೆಗಳು, ದೈವಸ್ಥಾನಗಳು ಅಪಾಯದಲ್ಲಿವೆ. ಬೃಹತ್ ಬೆಟ್ಟದಂತಿರುವ ತ್ಯಾಜ್ಯ ರಾಶಿ ಮಳೆ ಬಂದಂತೆ ಕೆಳಗೆ ಜಾರುತ್ತಲೇ ಇದೆ. ಮಳೆ ಜೋರಾದರೆ ತ್ಯಾಜ್ಯದ ರಾಶಿ ಮತ್ತಷ್ಟು ಮನೆ, ತೋಟಗಳನ್ನು ಆಪೋಷನ ಪಡೆಯುವ ಸಾಧ್ಯತೆಯಿದ್ದು, ಜನತೆ ಆತಂಕದಲ್ಲಿದ್ದಾರೆ.
ಸ್ಥಳೀಯ ಸುಮಾರು 50ರಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಂದಾರ-ಕಂಜಿರಾಡಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ರಸ್ತೆಯ ಸುಮಾರು 50 ಮೀಟರ್ ಭಾಗದಲ್ಲಿ ತ್ಯಾಜ್ಯವೇ ಹರಡಿದೆ.
ದಕ್ಷಿಣ ಕನ್ನಡದಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ, ಎರಡು ದಿನ ರೆಡ್ ಅಲರ್ಟ್
ಮಳೆ ಬಂದಂತೆ ತ್ಯಾಜ್ಯ ರಾಶಿ ಇನ್ನೂ ಮುಂದುವರಿಯುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡತೊಡಗಿದೆ. ಮಳೆ ನಿಲ್ಲುವವರೆಗೆ ತ್ಯಾಜ್ಯ ತೆರವು ಮಾಡುವಂತಿಲ್ಲ. ತ್ಯಾಜ್ಯ ವಿಲೇವಾರಿಗೆ ಮುಂದಾದರೆ ಸಾಗಿಸಿ ತೆರವು ಮಾಡಲು ಇಲ್ಲಿ ಸಮರ್ಪಕ ರಸ್ತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸ್ಥಳೀಯ ಜನರು ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದ್ದು ತಕ್ಷಣ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.