ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವದಲ್ಲಿ ಅದ್ಧೂರಿ ತೆನೆ ಹಬ್ಬ ಆಚರಣೆ
ಮಂಗಳೂರು, ಸೆಪ್ಟೆಂಬರ್ 7: ವೇದ ಕಾಲದಿಂದಲೇ ಗಣೇಶನ ಆರಾಧನೆ ನಡೆಯುತ್ತಿದ್ದು, ಸಾರ್ವಜನಿಕವಾಗಿ ಗಣೇಶನನ್ನು ಪೂಜಿಸುವುದರಿಂದ ಸಮಾಜದಲ್ಲಿ ಏಕತೆ ಸಾಧ್ಯ ಎಂದು ಮಂಗಳೂರಿನ ಹೃದ್ರೋಗ ತಜ್ಞ ಡಾ.ಎ.ವಿಶೆಟ್ಟಿ ಅಭಿಪ್ರಾಯಪಟ್ಟರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಓಂಕಾರನಗರದಲ್ಲಿ 3 ದಿನ ನಡೆಯುವ 13ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆದ ತೆನೆಹಬ್ಬದಲ್ಲಿ ಸಾಂಕೇತಿಕವಾಗಿ ತೆನೆ ವಿತರಿಸಿ ಮಾತನಾಡಿ, ಸನಾತನವಾದ ಹಿಂದೂ ಧರ್ಮ ಶ್ರೇಷ್ಠವಾದದ್ದು. ಹಿಂದೂಗಳು ಕ್ಷಮಾಗುಣ ಸಂಪನ್ನರು ಎಂದು ಅವರು ಹೇಳಿದರು.[ಬಂಟರ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ]
ಉದ್ಯಮಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎಮ್. ದೇವಾನಂದ ಶೆಟ್ಟಿ ಗಣೇಶೋತ್ಸವ ಉದ್ಘಾಟಿಸಿ, ಶುಭ ಹಾರೈಸಿದರು. ಧ್ವಜಾರೋಹಣ ನೆರವೇರಿಸಿದ ಕರ್ನಲ್ ರಮೇಶ್ ಶೆಟ್ಟಿ ಮಾತನಾಡಿ, ದೇಶಸೇವೆ ಸರ್ವ ಶ್ರೇಷ್ಠವಾದುದು. ಅಪೂರ್ವ ನಾಯಕತ್ವದ ಗುಣ ಹೊಂದಿರುವ ಬಂಟರು ಶ್ರದ್ಧಾ-ಭಕ್ತಿಯಿಂದ ಗಣೇಶೋತ್ಸವ ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು.
ವತ್ಸಲಾ ಆರ್.ಶೆಟ್ಟಿ, ಚಂದ್ರಲೇಖ ಎ.ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರು ಗುತ್ತು, ಕೋಶಾಧಿಕಾರಿ ಕೃಷ್ಣರಾಜ ಸುಲಾಯ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಕೃಷ್ಣ ಪ್ರಸಾದ್ ರೈ, ಡಾ.ಆಶಾಜ್ಯೋತಿ ರೈ, ಬಾಲಕೃಷ್ಣ ಶೆಟ್ಟಿ ಬೆಳ್ಳಿ ಬೆಟ್ಟು ಗುತ್ತು, ರವಿರಾಜ ಶೆಟ್ಟಿ ನಿಟ್ಟೆ ಗುತ್ತು, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನಮೋಹನ ಶೆಟ್ಟಿ ಇದ್ದರು.[ಫೆ.6, 7ರಂದು ರಾಷ್ಟ್ರೀಯ ಬಂಟ ಮಹಾಸಮ್ಮೇಳನ]
ಸಿದ್ಧಿವಿನಾಯಕ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಅಜಿತ್ ಕುಮಾರ್ ರೈ, ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್, ಸಮಿತಿ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಕೊಳಂಬೆ ಮತ್ತಿತರರು ಭಾಗವಹಿಸಿದ್ದರು.