ಗ್ಯಾಲರಿ: ಆಳ್ವಾಸ್ ಕಾಲೇಜಿನಲ್ಲಿ 68ನೇ ಗಣರಾಜ್ಯೋತ್ಸವ
ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ 68ನೇ ಗಣರಾಜ್ಯೋತ್ಸವ ಆಕರ್ಷಕವಾಗಿ ನಡೆಯಿತು. ಇಲ್ಲಿನ ಪುತ್ತಿಗೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಐ.ಎನ್.ರೈ ಧ್ವಜಾರೋಹಣ ನೆರವೇರಿಸಿದರು.
ಮಂಗಳೂರು, ಜನವರಿ 26: ದಕ್ಷಿಣ ಕನ್ನಡದ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ನಡೆಯಿತು. ಭಾರತೀಯ ಭೂ ಸೇನೆಯ ಬ್ರಿಗೇಡಿಯರ್ ಐ. ಎನ್. ರೈ ಧ್ವಜಾರೋಹಣ ನೆರವೇರಿಸಿದರು. ಆಕರ್ಷಕ ಕಾರ್ಯಕ್ರಮದಲ್ಲಿ 30,000 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.[ವಜುಭಾಯಿ ವಾಲಾರಿಂದ ಗಣರಾಜ್ಯೋತ್ಸವಕ್ಕೆ ಚಾಲನೆ]
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಒಂದೇ ಕಡೆಯಲ್ಲಿ ನಿಂತು ಗಣರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭ ಆಕರ್ಷಕ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಐ.ಎನ್ ರೈ ಧ್ವಜಾರೋಹಣ
ಭಾರತೀಯ ಭೂ ಸೇನೆಯ ಮಾಜಿ ಬ್ರಿಗೇಡಿಯರ್ ಐ.ಎನ್. ರೈ ಧ್ವಜಾರೋಗಣ ನೆರವೇರಿಸಿದರು. ಧ್ವಜಾರೋಹಣ ನೆರವೆರಿಸಿ ಮಾತನಾಡಿದ ಅವರು, "ಸ್ವಾಭಿಮಾನ ಹಾಗೂ ಧನಾತ್ಮಕ ಚಿಂತನೆಗಳ ಕೊರತೆಯೇ ನಮ್ಮ ದೇಶದ ಅಭಿವೃದ್ಧಿಯ ಹಿನ್ನೆಡೆಗೆ ಕಾರಣ. ದೇಶದ ಉಜ್ವಲ ಭವಿಷ್ಯ ಯುವ ಶಕ್ತಿಯ ಕೈಯಲ್ಲಿದೆ. ಯುವ ಸಮುದಾಯ ಎಚ್ಚೆತ್ತುಕೊಂಡಲ್ಲಿ ದೇಶ ಉನ್ನತಿಯತ್ತ ಸಾಗಲು ಸಾಧ್ಯ ' ಎಂದು ಹೇಳಿದರು.[LIVE : ರಾಜಪಥದಲ್ಲಿ 68ನೇ ಗಣರಾಜ್ಯೋತ್ಸವ ಸಮಾರಂಭ]
ಶಿಸ್ತು ಬದ್ಧ ವಿದ್ಯಾರ್ಥಿಗಳು
ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆಯೂ ತಮ್ಮ ಬಾಷಣದಲ್ಲಿ ಪ್ರಸ್ತಾಪಿಸಿದ ಐ.ಎನ್.ರೈ "ಗಣರಾಜ್ಯೋತ್ಸವ ಸಂದರ್ಭ ಇಷ್ಟೊಂದು ಸಂಖ್ಯೆಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅದ್ಭುತವಾಗಿ ಆಚರಿಸುವುದು ವಿಶೇಷ" ಎಂದರು.
ಶಿಕ್ಷಣದ ಮಹತ್ವ ಅರಿವಾಗಿದೆ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, "ಬಡತನ, ಅನಕ್ಷರತೆ ಸಮಸ್ಯೆಗಳು ದೇಶವನ್ನು 70 ವರ್ಷಗಳ ಹಿಂದೆ ಬಹಳವಾಗಿ ಕಾಡಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ದೇಶದಲ್ಲಿ ಶಿಕ್ಷಣದ ಮಹತ್ವ ಎಲ್ಲರಿಗೂ ಅರಿವಾಗಿದ್ದು, ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವದಲ್ಲಿ ಈಗ ಭಾರತ ತನ್ನ ವರ್ಚಸ್ಸನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ದಿದೆ," ಎಂದರು.
ಗಣ್ಯರ ಉಪಸ್ಥಿತಿ
ಮುಖ್ಯ ಅತಿಥಿಯಾಗಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಹಾಗೂ ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಕರ್ಷಕ ಪೆರೇಡ್
ಗಣರಾಜ್ಯೋತ್ಸವ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಕಾರಣವಾಯಿತು. 30 ಸಾವಿರ ಜನರು ಒಂದೇ ಬಯಲಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ ಒಂದೇ ಸ್ವರದಲ್ಲಿ ವಂದೇ ಮಾತರಂ ಹಾಡಿಗೆ ದನಿಯಾದರು.
ಸೇನಾ ಕುಟುಂಬ ಭಾಗಿ
ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಾಜಿ ಸೈನಿಕರು ಮತ್ತು ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪುತ್ತಿಗೆಯಲ್ಲಿರುವ ವಿಶಾಲ ಬಯಲು ರಂಗಮಂದಿರದಲ್ಲಿ ಈ 68 ನೇ ಗಣ ರಾಜ್ಯೋತ್ಸವ ಸಂಭ್ರಮ ನಡೆಯಿತು.
ಆಕರ್ಷಕ ಗಣರಾಜ್ಯೋತ್ಸವ
ಆಳ್ವಾಸಿನ ವಿವಿಧ ವಿದ್ಯಾ ಸಂಸ್ಥೆಗಳ 18 ಎನ್ಸಿಸಿ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟವು. 4000ಕ್ಕೂ ಅಧಿಕ ವಿದ್ಯಾರ್ಥಿಗಳು ತ್ರಿವರ್ಣ ಟಿ-ಶರ್ಟ್ಗಳನ್ನು ಧರಿಸಿ ಗಮನಸೆಳೆದರು.
ಬಣ್ಣ ಬಣ್ಣದ ಚಿತ್ತಾರ
ಕಾರ್ಯಕ್ರಮದಲ್ಲಿ 100 ತ್ರಿವರ್ಣದ ಕೊಡೆಗಳು ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಹಿಡಿದು ನಿಂತಿದ್ದು ಗಮನ ಸೆಳೆಯಿತು. ಜತೆಗೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಾರಾಡಿಸುತ್ತಾ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದ್ದವು.
ಮದರ್ ಇಂಡಿಯಾ
ವಿದ್ಯಾರ್ಥಿ ಸಮೂಹದ ನಡುವೆ ತ್ರಿವರ್ಣ ಉಡುಗೆ ತೊಟ್ಟ ವಿದ್ಯಾರ್ಥಿಗಳು 'ಇಂಡಿಯಾ' ಬರಹದಲ್ಲಿ ನಿಂತಿದ್ದು ಆಕರ್ಷಕವೆನಿಸಿತ್ತು. ಗಾಯಕ ರಮೇಶ್ಚಂದ್ರ ಹಾಗೂ ತಂಡ ಕಾರ್ಯಕ್ರಮದಲ್ಲಿ ಸಂಗೀತ ನಿರ್ವಹಣೆಯನ್ನೂ ನೀಡಿತು.