ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿನ ಪ್ರಕರಣ; ಪೊಲೀಸರಿಗೆ ಎಫ್ ಎಸ್ ಎಲ್ ವರದಿ
ಮಂಗಳೂರು, ಆಗಸ್ಟ್ 23: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿಯು ತನಿಖಾ ತಂಡದ ಕೈಸೇರಿದೆ. ವೈದ್ಯರು ಎಫ್ಎಸ್ಎಲ್ ವರದಿ ಅಧ್ಯಯನ ಮಾಡಿದ ನಂತರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ನೀಡಲಿದ್ದಾರೆ.
ಈ ಪ್ರಕರಣದ ತನಿಖಾಧಿಕಾರಿ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ ಅವರಿಗೆ ತಲುಪಿರುವುದಾಗಿ ತಿಳಿದುಬಂದಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿದ ತಜ್ಞರ ಕೈಗೆ ಈ ವರದಿಯನ್ನು ಹಸ್ತಾಂತರಿಸಲಾಗಿದೆ. ವೈದ್ಯರು ನೀಡುವ ಅಂತಿಮ ವರದಿಯನ್ನು ಆಧರಿಸಿ ತನಿಖಾಧಿಕಾರಿ ಮುಂದುವರಿಯಲಿದ್ದಾರೆ.
ಸಿದ್ದಾರ್ಥ ಸಾವು; ಕಂಕನಾಡಿ ಪೊಲೀಸರಿಂದ ಐಟಿ ಇಲಾಖೆ ಮುಖ್ಯಸ್ಥರ ವಿಚಾರಣೆ?
ಕಳೆದ ಜುಲೈ 29ರಂದು ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಶವ ಎರಡು ದಿನಗಳ ಬಳಿಕ ಮಂಗಳೂರು ಹೊರವಲಯದ ಹೊಯ್ಗೆ ಬಜಾರ್ ಎಂಬಲ್ಲಿ ಪತ್ತೆಯಾಗಿತ್ತು.
ಸಿದ್ದಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪರೀಕ್ಷಾ ವರದಿಯನ್ನು ಹೆಚ್ಚಿನ ಪರೀಕ್ಷೆಗೆ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಮಧ್ಯೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕರಣದ ತನಿಖಾಧಿಕಾರಿಗೆ ಸಲ್ಲಿಕೆಯಾಗಿದ್ದು, ಅದರಲ್ಲಿ ನೀರಿಗೆ ಬಿದ್ದು ಉಸಿರುಗಟ್ಟಿ ಸಾವು ಎಂದು ಉಲ್ಲೇಖಿಸಲಾಗಿತ್ತು.