ಶತಾಯುಶಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ ಮಾಸ್ತರ್ ಇನ್ನಿಲ್ಲ
ಕಾಸರಗೋಡು/ಮಂಗಳೂರು, ಮಾರ್ಚ್ 28: ಶತಾಯುಶಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇರಾಜೆ ಕೆ.ಪಿ.ಮದನ ಮಾಸ್ತರ್ (100) ಅವರು ಮಂಗಳವಾರ ಕಾಸರಗೋಡಿನ ಪೆರ್ಲದಲ್ಲಿನ ಸೇರಾಜೆ ನಿವಾಸದಲ್ಲಿ ನಿಧನರಾಗಿದ್ದಾರೆ.
ನೂರರ ಹರೆಯದಲ್ಲೂ ಸದಾ ಚಟುವಟಿಕೆಯಿಂದ ಇರುತ್ತಿದ್ದ ಮದನ ಮಾಸ್ತರ್ ಕೆಲವು ದಿನಗಳಿಂದ ಅಸ್ವಸ್ಥಗೊಂಡಿದ್ದರು. ಶಿಕ್ಷಕ ಹಾಗೂ ಸೇನೆಯಲ್ಲಿ ಕಾರ್ಯನಿವರ್ಹಿಸಿದ್ದ ಮಾಸ್ತರ್ ಅವರು ರಾಜಿ ಪಂಚಾಯಿತಿಯ ಮದ್ಯಸ್ಥಿಕೆದಾರರಾಗಿ ಗಡಿನಾಡಿನಲ್ಲಿ ಜನಪ್ರಿಯತೆ ಪಡೆದಿದ್ದರು.
ಅಷ್ಟೇ ಅಲ್ಲದೇ ಪ್ರಗತಿಪರ ಕೃಷಿಕರಾಗಿದ್ದ ಇವರು ಸ್ಥಳೀಯವಾಗಿ ಜೇನು ಸಾಕಾಣಿಕೆಯನ್ನು ಜನಪ್ರಿಯಗೊಳಿಸಿದ್ದರು. ಭೂಸುಧಾರಣೆ ಕಾನೂನು ಅನುಷ್ಠಾನಕ್ಕೆ ಸ್ವಯಂ ಪ್ರೇರಿತರಾಗಿ ದುಡಿದಿದ್ದ ಮದನ ಮಾಸ್ತರ್ ಅವರು ಗಡಿನಾಡಿನಲ್ಲಿ ನೂರಾರು ಹಿಡುವಳಿದಾರರಿಗೆ ಜಮೀನು ಒದಗಿಸಿಕೊಡುವಲ್ಲಿ ಶ್ರಮಿಸಿದ್ದರು.
ಖಾದಿ ಉಡುಪನ್ನಷ್ಟೇ ಧರಿಸುತ್ತಿದ್ದ ಮದನ ಮಾಸ್ತರ್ ಅವರನ್ನು ಕ ಳೆದ ಗಾಂಧಿ ಜಯಂತಿಯ ದಿನದಂದು ದ.ಕ.ಜಿಲ್ಲಾಡಳಿತವು ಮಂಗಳೂರು ಗಾಂಧಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಗಿತ್ತು.