ಲೇ ಪಂಗಾ! ಮಾಜಿ ರಾಷ್ಟ್ರೀಯ ಆಟಗಾರನಿಂದ ಉಚಿತ ಕಬಡ್ಡಿ ತರಬೇತಿ
ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ತಮ್ಮ 'ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ'ಯ ನೆರಳಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯನ್ನೂ ನಡೆಸಿ ಯಶಸ್ಸು ಗಳಿಸಿದ್ದರು. ಇದೀಗ ಕಬಡ್ಡಿ ತರಬೇತಿ ಶಿಬಿರ ಆರಂಭಿಸಿದ್ದಾರೆ.
ಮಂಗಳೂರು, ಏಪ್ರಿಲ್ 19: ಭವಿಷ್ಯದ ಕಬಡ್ಡಿ ಆಟಗಾರರನ್ನು ಸಮಾಜಕ್ಕೆ ಅರ್ಪಿಸುವ ನಿಟ್ಟಿನಲ್ಲಿ ಮಾಜಿ ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ರಿಂದ ಉಚಿತ ಕಬಡ್ಡಿ ತರಬೇತಿ ಶಿಬಿರ ಆರಂಭಿಸಿದ್ದಾರೆ.
ತಮ್ಮ "ಕಾಪಿಕಾಡು ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ" ವತಿಯಿಂದ 40 ದಿವಸಗಳ ಉಚಿತ ಕಬಡ್ಡಿ ತರಬೇತಿ ಶಿಬಿರವನ್ನು ತೊಕ್ಕೊಟ್ಟು ಚೆಂಬುಗುಡ್ಡೆಯ ಮಹಾಂಕಾಳಿ ದೈವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ಗೋಪಿನಾಥ್ ಆರಂಭಿಸಿದ್ದಾರೆ.[ದ. ಕೊರಿಯಾದ ಸೌಂದರ್ಯ ಸ್ಪರ್ಧೆಗೆ ಕರಾವಳಿ ಬೆಡಗಿ ನಿಮಿಕಾ]
ರಾಷ್ಟ್ರೀಯ ಮಟ್ಟದ ಮಾಜಿ ಕಬಡ್ಡಿ ಆಟಗಾರರಾದ ಗೋಪಿನಾಥ್ ಕಾಪಿಕಾಡ್, ದೇಶದ ವಿವಿಧೆಡೆಗಳಲ್ಲಿ ನಡೆದ ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಿ ಸಾಕಷ್ಟು ಸಾಧನೆಗೈದವರು. ಕಳೆದ ವರ್ಷ ತನ್ನ ಊರಿನ ಆರಾಧ್ಯ ದೇವತೆ ತಾಯಿ ಉಮಾಮಹೇಶ್ವರಿಯ ಹೆಸರನ್ನೇ ಮುಂದಿಟ್ಟು ಕಬಡ್ಡಿ ಅಕಾಡೆಮಿಯೊಂದನ್ನೂ ಆರಂಭಿಸಿದ್ದರು.
ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ನೆರಳಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯನ್ನೂ ನಡೆಸಿ ಯಶಸ್ಸು ಗಳಿಸಿದ್ದರು. ಇದೀಗ ಕಬಡ್ಡಿ ತರಬೇತಿ ಶಿಬಿರ ಆರಂಭಿಸಿದ್ದಾರೆ.
ಸುಸಜ್ಜಿತ ಕೋರ್ಟ್ ನಲ್ಲಿ ತರಬೇತಿ
ಗೋಪಿನಾಥರು ಇದೀಗ ತನ್ನ ಊರಿನ ಮಕ್ಕಳು ಮಣ್ಣಿನ ಕ್ರೀಡೆ ಕಬಡ್ಡಿಯತ್ತ ಮುಖ ಮಾಡಿ ಭವಿಷ್ಯದ ಕಬಡ್ಡಿ ಸ್ಟಾರ್ ಗಳಾಗಬೇಕು ಎಂಬ ನಿಟ್ಟಿನನಲ್ಲೀ ಈ ತರಬೇತಿ ಶಿಬಿರ ಆರಂಭಿಸಿದ್ದಾರೆ. ದಿನನಿತ್ಯ ಸಂಜೆ 4 ಗಂಟೆಯಿಂದ 6.30 ತನಕ 12ರಿಂದ 16ನೇ ವಯಸ್ಸಿನ ಮಕ್ಕಳಿಗೆ ಚೆಂಬುಗುಡ್ಡೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ಮಣ್ಣಿನ ಕೋರ್ಟಲ್ಲಿ ಕಬಡ್ಡಿ ಕ್ರೀಡೆಯ ಬಗ್ಗೆ ತರಬೇತಿಯನ್ನು ಅವರು ನೀಡಲಿದ್ದಾರೆ.
ಅಭೂತಪೂರ್ವ ಪ್ರತಿಕ್ರಿಯೆ
ಕಬಡ್ಡಿ ತರಬೇತಿ ಶಿಬಿರಕ್ಕೆ ಅಭೂತಪೂರ್ವ ಪ್ರತಿಕ್ರಿಯೆಯು ದೊರೆತಿದೆ. ರಾಷ್ಟ್ರೀಯ ಮಾಜಿ ಆಟಗಾರನ ಗರಡಿಯಲ್ಲಿ ಪಳಗಿ ಉತ್ತಮ ಕಬಡ್ಡಿ ಆಟಗಾರರಾಗಿ ಸೈ ಎನಿಸಿಕೊಳ್ಳಲು ಊರಿನವರಲ್ಲದೆ ದೂರದ ಊರಿನ ಮಕ್ಕಳು ಕ್ರೀಡಾ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.[ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಕಾರ್ಮಿಕರಿಗೆ ಸಿಹಿ ಸುದ್ದಿ!]
ಗೋಪಿನಾಥ್ ಹೇಳುವುದೇನು?
ದೇಶದ ಹೆಮ್ಮೆಯ ಮಣ್ಣಿನ ಕ್ರೀಡೆ ಕಬಡ್ಡಿಯ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಲ್ಲಿ ಅಭಿಮಾನ ಮತ್ತು ಆಸಕ್ತಿ ಹುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರಿಗಾಗಿಯೇ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಕ್ರೀಡೆಯಲ್ಲಿ ತೊಡಗಿದ್ದಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆ ಕಾಣುವುದಲ್ಲದೆ, ದುರಭ್ಯಾಸಗಳಿಂದಲೂ ದೂರವಾಗುತ್ತಾರೆ ಎನ್ನುತ್ತಾರೆ ಗೋಪಿನಾಥ್.
ತರಬೇತಿ ಬಗ್ಗೆ ಹೆಮ್ಮೆಯಿದೆ
ಮನೆಯಲ್ಲಿ ತಂದೆ, ತಾಯಿ ಹೊರತು ಪಡಿಸಿ ಅಜ್ಜ, ಅಜ್ಜಿ, ಮಾವನವರು ಕಬಡ್ಡಿ ಪ್ರೇಮಿಗಳಾಗಿದ್ದಾರೆ. ಕಬಡ್ಡಿಯಲ್ಲಿ ಇಂದು ಬೆಳೆಯಲು ಪ್ರೋ ಕಬಡ್ಡಿಗಳಂತಹ ಎಷ್ಟೋ ವೇದಿಕೆಗಳು ಇವೆ. ಮಮತಾ ಪೂಜಾರಿ, ಸೈನಾ ನೆಹ್ವಾಲ್ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಮಿಂಚಿದಂತೆ ನಾನು ಕಬಡ್ಡಿಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕೆಂಬ ಕನಸು ಕಟ್ಟಿದ್ದು, ರಾಷ್ಟ್ರೀಯ ಮಟ್ಟದ ಆಟಗಾರ ಗೋಪಿನಾಥರಲ್ಲಿ ತರಬೇತಿ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯೆನಿಸುತ್ತಿದೆ ಎನ್ನುತ್ತಾರೆ ಶಿಬಿರಾರ್ಥಿ ಕಷಿಶ್.[ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಂಪತಿ ಕುದ್ರೋಳಿಗೆ ಭೇಟಿ]
ಕಬಡ್ಡಿಯತ್ತ ಹೆಚ್ಚುತ್ತಿರುವ ಒಲವು
ದೇಶದಲ್ಲಿ ಪ್ರೊ ಕಬಡ್ಡಿ ಆರಂಭವಾದ ನಂತರ ಕಬಡ್ಡಿಯತ್ತ ಒಲವು ಹೆಚ್ಚಾಗಿದೆ. ಪ್ರೊ ಕಬಡ್ಡಿ ಆರಂಭವಾಗುವವರೆಗೆ ಕಬಡ್ಡಿಗೆ ವಾಣಿಜ್ಯ ಆಯಾಮಗಳಿಲ್ಲದ ಹಿನ್ನಲೆಯಲ್ಲಿ ಕಬಡ್ಡಿಯನ್ನು ವೃತ್ತಿಯಾಗಿ ಸ್ವೀಕರಿಸಲು ಆಟಗಾರರು ಹಿಂಜರಿಯುತ್ತಿದ್ದರು. ಆದರೆ ಇಂದು ಕಬಡ್ಡಿ ಉದ್ಯಮವಾಗಿ ಬೆಳೆದಿದ್ದು ವೃತ್ತಿಯಾಗಿ ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸದ್ಯ ತರಬೇತಿ ಶಿಬಿರ ಆರಂಭವಾಗಿದ್ದು ಗೋಪಿನಾಥ್ ಗರಡಿಯಲ್ಲಿ ಅಧ್ಭುತ ಕಬಡ್ಡಿ ಪ್ರತಿಭೆಗಳು ಉಸಯಿಸಲಿ ಎಂದು ಹಾರೈಸೋಣ.