ಸೈನಿಕರ ಹೆಸರಿನಲ್ಲಿ ನಡೆಯುತ್ತಿದೆ ಬೃಹತ್ ವಂಚನೆ ಜಾಲ
ಮಂಗಳೂರು, ಆಗಸ್ಟ್ 29: ಸೈನಿಕರು ಎಂದು ಹೇಳಿಕೊಂಡು, ವಾಹನ ಮಾರಾಟ ಮಾಡುವ ನೆಪದಲ್ಲಿ ಜನರನ್ನು ನಂಬಿಸಿ ತಂಡವೊಂದು ವಂಚನೆ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.
ಕಾಲ್ ಸೆಂಟರ್ ಮಾದರಿಯಲ್ಲಿ ಈ ತಂಡ ಕಾರ್ಯಾಚರಿಸುತ್ತಿದೆ. ಒಎಲ್ಎಕ್ಸ್ ಸೇರಿದಂತೆ ಇನ್ನಿತರ ಮಾರಾಟ ಜಾಲಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್ ನಂಬರ್ ನಮೂದಿಸಿಕೊಂಡಿರುವ ಈ ಜಾಲ ಗ್ರಾಹಕರನ್ನು ವಂಚಿಸುತ್ತಿರುವುದು ತಿಳಿದುಬಂದಿದೆ.
ಸಿದ್ದಾರ್ಥ್ ಸಾವಿನ ಪ್ರಕರಣದಲ್ಲಿ ನಿಗೂಢ ಪ್ರಶ್ನೆಗಳು; ಉತ್ತರದ ಹುಡುಕಾಟದಲ್ಲಿ ಪೊಲೀಸ್ ತಂಡ
ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾರಾಟಕ್ಕಿರುವ ವಾಹನದ ಬಗ್ಗೆ ವಿಚಾರಿಸುವ ಸಂದರ್ಭ, ಕರೆ ಸ್ವೀಕರಿಸುವ ವ್ಯಕ್ತಿ ತಾನು ಸಿ.ಐ.ಎಸ್.ಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸುತ್ತಾನೆ. ತನಗೆ ಬೇರೆಡೆಗೆ ವರ್ಗಾವಣೆಯಾಗಿರುವ ಕಾರಣಕ್ಕೆ ತನ್ನ ವಾಹನ ಮಾರುತ್ತಿರುವುದಾಗಿ ಹೇಳುತ್ತಾನೆ.
ನಂತರ ಕೇಳಿದ ತಕ್ಷಣವೇ ವಾಹನದ ಆರ್.ಸಿ, ಫೋಟೊ ಜೊತೆಗೆ ಭಾರತ ಸರಕಾರದ ಲಾಂಛನವಿರುವ ನಕಲಿ ಸೈನಿಕ ಗುರುತು ಪತ್ರವನ್ನೂ ಕಳುಹಿಸುತ್ತಾನೆ. ಈ ಗುರುತಿನ ಪತ್ರವನ್ನು ಪರಿಶೀಲಿಸಿದರೆ, ಸೈನಿಕನ ನಕಲಿ ಗುರುತಿನ ಚೀಟಿ ಎಂಬುದು ಗೋಚರಿಸುತ್ತದೆ.
ಸೈನಿಕರು ಮೋಸ ಮಾಡುವವರಲ್ಲ ಎಂಬ ನಂಬಿಕೆಯಿಂದ ಜನರು ಈ ವ್ಯಕ್ತಿಯ ಮಾತನ್ನು ನಂಬುತ್ತಾರೆ. ನಂತರ ಗ್ರಾಹಕನನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ಬರಹೇಳಿ, ಮಾರಾಟ ಮಾಡುವ ವಾಹನವನ್ನು ಅಲ್ಲೇ ನೀಡುವುದಾಗಿ ಭರವಸೆಯನ್ನೂ ನೀಡುತ್ತಾನೆ. ಅಲ್ಲದೆ ವಾಹನ ನೋಡುವ ಮೊದಲು ವಿಮಾನ ನಿಲ್ದಾಣದಿಂದ ಹೊರಬರುವ ಚೆಕ್ಕಿಂಗ್ ಹಣ 2 ರೂಪಾಯಿಯನ್ನು ಗೂಗಲ್ ಪೇ ಮೂಲಕ ಕಳುಹಿಸುವಂತೆ ಒತ್ತಾಯಿಸುತ್ತಾನೆ.
ಸೈನಿಕನ ಗುರುತಿನ ಚೀಟಿ ಕಂಡ ತಕ್ಷಣ ಪ್ರಾಮಾಣಿಕನಾಗಿರಬೇಕು ಎನ್ನುವ ಕಾರಣಕ್ಕೆ ಈ ವಂಚಕರಿಗೆ ಹಣ ವರ್ಗಾಯಿಸುತ್ತಾರೆ. ಅದೇ ಕೊನೆ. ನಂತರ ಆ ನಂಬರ್ ನಾಟ್ ರೀಚಬಲ್ ಆಗಿಬಿಡುತ್ತದೆ. ಈ ರೀತಿ ಈ ತಂಡ ಪ್ರತಿದಿನ ನೂರಾರು ಜನರನ್ನು ವಂಚಿಸುತ್ತಿರುವುದು ತಿಳಿದುಬಂದಿದೆ. ಕಾಲ್ ಸೆಂಟರ್ ಮಾದರಿಯಲ್ಲಿ ಈ ಬೃಹತ್ ಜಾಲ ಕಾರ್ಯಾಚರಿಸುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಿ ಈ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ.