ಮೂಡುಬಿದಿರೆಯಲ್ಲಿ ಮದುವೆಗೆ ಬಂದಿದ್ದ ನಾಲ್ವರು ನದಿಯಲ್ಲಿ ಮುಳುಗಿ ಸಾವು
ಮಂಗಳೂರು, ನವೆಂಬರ್ 24: ಮದುವೆ ಸಮಾರಂಭಕ್ಕೆಂದು ಬಂದಿದ್ದವರು ಈಜಲೆಂದು ನದಿಗೆ ಇಳಿದಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದಿದೆ.
ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯ ಶಾಂಭವಿ ನದಿಯಲ್ಲಿ ಮಂಗಳವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕಡಂದಲೆ ಶ್ರೀಧರ ಆಚಾರ್ಯ ಎಂಬುವರ ಮನೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಮೂವರು ಯುವಕರು ಹಾಗೂ ಯುವತಿಯೊಬ್ಬರು ಬಂದಿದ್ದರು.
ಮಂಗಳವಾರ ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಇವರೆಲ್ಲ ತೆರಳಿದ್ದಾರೆ. ಈ ಸಮಯ ನದಿ ನೀರಿನಲ್ಲಿ ಮುಳುಗಿ ನಾಲ್ವರೂ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಉಡುಪಿ ನಾಡದೋಣಿ ದುರಂತ: ಎಲ್ಲ ನಾಲ್ವರು ಮೀನುಗಾರರ ಶವ ಪತ್ತೆ
ಘಟನೆಯಲ್ಲಿ ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18), ಹರ್ಷಿತಾ (20), ವೇಣೂರಿನ ಸುಭಾಷ್ (19) ಹಾಗೂ ಬಜ್ಪೆ ಪೆರಾರದ ರವಿ (30) ಎಂಬುವರು ಮೃತಪಟ್ಟಿದ್ದಾರೆ. ಮದುವೆಗೆ ಬಂದಿದ್ದವರು ಮಸಣ ಸೇರಿದ್ದಾರೆ. ನಾಲ್ವರ ಮೃತದೇಹವನ್ನು ನದಿಯಿಂದ ಹೊರಗೆ ತೆಗೆಯಲಾಗಿದೆ.