ಹೊಟ್ಟೆಯಲ್ಲಿ ಕತ್ತರಿ, ಈಕೆ ಬದುಕಿದ್ದೇ ಪವಾಡ!
ಮಂಗಳೂರು,ಜೂ.29: ಒಂದಲ್ಲ ಎರಡಲ್ಲ ನಾಲ್ಕು ವರ್ಷಗಳ ಕಾಲ ಮಹಿಳೆಯೊಬ್ಬರು ಹೊಟ್ಟೆಯಲ್ಲಿ ಕತ್ತರಿ ಉಳಿಸಿಕೊಂಡು ಜೀವನ ಸಾಗಿಸಿದ್ದರು. ಹೀಗೊಂದು ವೈದ್ಯಕೀಯ ವಿಸ್ಮಯಕ್ಕೆ ಒಳಗಾಗಿರುವ ಮಹಿಳೆ ಕೊನೆಗೂ ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ.
ಸರ್ಜರಿ ವೇಳೆ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲಿ ಕತ್ತರಿ ಬಿಟ್ಟ ಆರೋಪದ ಹೊತ್ತ ವೈದ್ಯರೇ ಈಗ ಆಪರೇಟ್ ಮಾಡಲು ಸಜ್ಜಾಗಿದ್ದಾರೆ. ಆದರೆ, ಆ ಆಸ್ಪತ್ರೆ ಸಹವಾಸ ಸಾಕು ಎಂದಿರುವ ಮಹಿಳೆ ಬೇರೆ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.
ಮಂಗಳೂರು ನರ್ಸಿಂಗ್ ಹೋಮ್ನಲ್ಲಿ 2010ರಲ್ಲಿ ಕೋಟೆಕಾರ್ ಸಮೀಪದ ಮಾಡೂರಿನ ಮಹಿಳೆ ಹಫ್ಜಾ(35) ಎಂಬುವರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಅಥವಾ ನರ್ಸ್ ಅಜಾಗರೂಕತೆಯಿಂದ ಸರ್ಜರಿಗೆ ಬಳಸುವ ಕತ್ತರಿಯೊಂದನ್ನು ಆಕೆಯ ದೇಹದೊಳಗೆ ಬಿಟ್ಟಿದ್ದರು.
ಹಫ್ಜಾ ಇತ್ತೀಚೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಕತ್ತರಿ ಇರುವುದು ಪತ್ತೆಯಾಗಿದೆ. ಶನಿವಾರ ಸಂಜೆ ಮಹಿಳೆಯ ಕುಟುಂಬದವರು ಶಸ್ತ್ರಚಿಕಿತ್ಸೆ ನೆರವೇರಿಸಿದ ನರ್ಸಿಂಗ್ ಹೋಮ್ಗೆ ತೆರಳಿ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಮೊದಲಿಗೆ 'ಇದು ನಮಗೆ ಗೊತ್ತಿಲ್ಲ, ನಾವು ಏನು ತಪ್ಪೆಸಗಿಲ್ಲ' ಎಂದು ವಾದಿಸಿದ್ದಾರೆ. ಅದರೆ, ಸ್ಕ್ಯಾನ್ ರಿಪೋರ್ಟ್ ನೋಡಿದ ಮೇಲೆ ವಿಧಿ ಇಲ್ಲದೆ ತಪ್ಪು ಒಪ್ಪಿಕೊಂಡಿದ್ದಾರೆ. ಮುಂದೇನಾಯ್ತು ಓದಿ...
ಇದಕ್ಕೆ ಏನು ಪರಿಹಾರ ಎಂಬುದನ್ನು ಹೇಳಿರಲಿಲ್ಲ
ಆದರೆ, ಇದಕ್ಕೆ ಏನು ಪರಿಹಾರ ಎಂಬುದನ್ನು ಮಾತ್ರ ಹೇಳಿರಲಿಲ್ಲ. ನಿನ್ನೆ ರಾತ್ರಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿತ್ತು. ಮಹಿಳೆಯ ಸಂಬಂಧಿಕರು ನರ್ಸಿಂಗ್ ಹೋಮ್ ಪರಿಸರದಲ್ಲಿ ಜಮಾಯಿಸಿ ವೈದ್ಯಕೀಯ ಸಿಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೇಲೆ ಭಾನುವಾರ ಪುನಃ ಮಹಿಳೆಯನ್ನು ಕರೆಸಿಕೊಂಡ ಹಿರಿಯ ವೈದ್ಯೆ ಡಾ. ಪೂರ್ಣಿಮಾ ನಾಯರ್ ಅವರು ತಪ್ಪು ಸರಿಪಡಿಸುವ ಬಗ್ಗೆ ಭರವಸೆ ನೀಡಿ ಮಹಿಳೆಯನ್ನು ಅಡ್ಮೀಟ್ ಮಾಡಿಕೊಂಡಿದ್ದಾರೆ.
2010ರಲ್ಲಿ ನಡೆದಿದ್ದ ವೈದ್ಯಕೀಯ ಪ್ರಮಾದ
2010ರ ಫ್ರೆಬವರಿ ತಿಂಗಳಿನಲ್ಲಿ ಮಂಗಳೂರು ನರ್ಸಿಂಗ್ ಹೋಮ್ ನಲ್ಲಿ hysterectomy(ಗರ್ಭಕೋಶ ತೆಗೆಯುವ ಚಿಕಿತ್ಸೆ) ನಡೆಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆಯಾದ ಕೆಲ ದಿನಗಳ ನಂತರ ಆಕೆಗೆ ಕೈಕಾಲು ನೋವು, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ವೈದ್ಯೆ ಡಾ. ಪೂರ್ಣಿಮಾ ನಾಯರ್ ಅವರಲ್ಲಿ ವಿಚಾರಿಸಿದಾಗ, ಇದು ಕೆಲ ಮಾತ್ರೆಗಳನ್ನು ಕೊಟ್ಟು ಸರ್ಜರಿ ನಂತರ ಈ ರೀತಿ ಆಗುವುದು ಮಾಮೂಲಿ ಸರಿ ಹೋಗುತ್ತೆ ಎಂದು ಹೇಳಿ ಕಳಿಸಿದ್ದಾರೆ. ಆದರೆ, ನೋವು ಕಡಿಮೆಯಾಗಲೇ ಇಲ್ಲ.
ನಾಲ್ಕು ವರ್ಷ ನೋವಿನಲ್ಲೇ ಜೀವನ
ನಾಲ್ಕು ವರ್ಷ ನೋವಿನಲ್ಲೇ ಜೀವನ ಕಳೆದ ಹಫ್ಜಾ ಅವರು ಕೊನೆಗೆ ಬೇರೆ ಡಾಕ್ಟರ್ ಹತ್ತಿರ ಹೋಗುತ್ತಾರೆ. ಚರ್ಮ ರೋಗ ತಜ್ಞರಾದ ಸೋಮಯಾಜಿ ಬಿಲ್ಡಿಂಗ್ ನಲ್ಲಿರುವ ಡಾ. ಕಲ್ಪನಾ ಕಾಮತ್ ಬಳಿ ತೋರಿಸುತ್ತಾರೆ. ಅಲ್ಲಿ ಎಕ್ಸ್ ರೇ, ಸ್ಕ್ಯಾನ್ ಮಾಡಿದ ಮೇಲೆ ಪೆಲ್ವಿಕ್ ಪ್ರದೇಶದಲ್ಲಿ ಕತ್ತರಿ ಇರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಲು ನಿನ್ನೆ ರಾತ್ರಿ ಡಾ.ಪೂರ್ಣಿಮಾ ಬಳಿ ಹೋಗಿ ಪ್ರಶ್ನಿಸಿದ್ದಾರೆ.
ಮುಂದೇನು ಎಂಬ ಪ್ರಶ್ನೆಯಲ್ಲಿ ನೊಂದ ಮಹಿಳೆ
ಈಗ ಪ್ರಕರಣ ಕದ್ರಿ ಪೊಲೀಸ್ ಠಾಣೆಯಲ್ಲಿ ಡಾ.ಪೂರ್ಣಿಮಾ ಹಾಗೂ ಅಂದು ಶಸ್ತ್ರಚಿಕಿತ್ಸೆ ನಡೆಸಿದ್ದ ಡಾ. ರೋಹಿತ್ ಗಟ್ಟಿ ಅವರ ಮೇಲೆ ಎಫ್ ಐಆರ್ ದಾಖಲಾಗಿದೆ. ಆದರೆ, ಈಗ ಹಪ್ಜಾ ಅವರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸುವುದು ಮುಂದಿನ ಕ್ರಮ ಕೈಗೊಳ್ಳುವುದರ ಬಗ್ಗೆ ಹೇಳಬಹುದು ಎಂದು ಕದ್ರಿ ಠಾಣಾಧಿಕಾರಿ ಹೇಳಿದ್ದಾರೆ.
ಡಾ.ಪೂರ್ಣಿಮಾ ಅವರು ತಪ್ಪು ಆಗಿರುವುದನ್ನು ಒಪ್ಪಿಕೊಂಡರೂ ಯಾವ ವೈದ್ಯರ ನಿರ್ಲಕ್ಷ್ಯ ಅಥವಾ ನರ್ಸ್ ಮಾಡಿದ ತಪ್ಪೇ ಎಂಬುದನ್ನು ಹೇಳಿಲ್ಲ. ವಿಷಯ ಆರೋಗ್ಯ ಸಚಿವ ಯು.ಟಿ ಖಾದರ್ ತನಕ ಮುಟ್ಟಿದ್ದು, ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿರುವ ಸುದ್ದಿ ಸಿಕ್ಕಿದೆ.