ಮೂಡಬಿದಿರೆ ಕಲಾತ್ಮಕತೆ ಮೆಚ್ಚಿದ ಮನಮೋಹನ್ ಸಿಂಗ್ ಪುತ್ರಿ
ಮೂಡಬಿದಿರೆ, ಅಕ್ಟೋಬರ್, 20: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪುತ್ರಿಯಾದ ದೆಹಲಿ ವಿವಿಯ ಇತಿಹಾಸ ವಿಭಾಗ ಮುಖ್ಯಸ್ಥೆ ಪ್ರೊ.ಯುಪಿಂದರ್ ಸಿಂಗ್ ಹಾಗೂ ಅವರ ಅಳಿಯ ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನ ತತ್ವಶಾಸ್ತ್ರ ಪ್ರಾಧ್ಯಾಪಕ ಡಾ.ವಿಜಯ್ ತಂಕಾ ಅಕ್ಟೋಬರ್ 20ರ ಮಂಗಳವಾರದಂದು ಮೂಡಬಿದಿರೆಗೆ ಆಗಮಿಸಿ ಅದರ ಕಲಾತ್ಮಕತೆ ಶ್ಲಾಘಿಸಿದರು.
ಮೂಡುಬಿದಿರೆಯ ಜೈನ ಬಸದಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯುಪಿಂದರ್ ಸಿಂಗ್ ಅವರು 'ಜೈನ ಕಾಶಿಯಾದ ಮೂಡುಬಿದಿರೆಗೆ ಬರಬೇಕೆನ್ನುವುದು ಹಲವು ದಿನಗಳ ದೊಡ್ಡ ಕನಸಾಗಿತ್ತು. ಸಾವಿರ ಕಂಬ ಬಸದಿ ಕಲಾತ್ಮಕತೆ ಕಂಡು ಖುಷಿಯಾಗಿದೆ. ಇಲ್ಲಿನ ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ಹಿನ್ನೆಲೆಯ ಕೆತ್ತನೆಗಳು ಅಧ್ಯಯನ ಯೋಗ್ಯವಾಗಿದೆ' ಎಂದು ಡಾ.ಮನಮೋಹನ್ ಸಿಂಗ್ ಪುತ್ರಿಯಾದ ದೆಹಲಿ ವಿವಿಯ ಇತಿಹಾಸ ವಿಭಾಗ ಮುಖ್ಯಸ್ಥೆ ಪ್ರೊ.ಯುಪಿಂದರ್ ಸಿಂಗ್ ಹೇಳಿದರು.[ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದೃಶ್ಯಕಲೆಯಲ್ಲಿ ಪದವಿ, ಉದ್ಯೋಗ]
ಜೈನ ಬಸದಿಯಲ್ಲಿರುವ ಹಿಂದೂ ದೇವತೆಗಳ ಕೆತ್ತನೆಯಿಂದ ಪುಳಕಿತರಾದ ಅವರು ಇಲ್ಲಿನ ಸಾಮರಸ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮೂಡುಬಿದಿರೆಯ ಸೀಯಾಳಾಭಿಷೇಕ ಪ್ರಿಯ ಶ್ರೀ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಮತ್ತು ಮೊಕ್ತೇಸರರು ಹಾಜರಿದ್ದು ಯುಪಿಂದರ್ ಸಿಂಗ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಭೈರಪ್ಪ ಅವರು ಉಪಸ್ಥಿತರಿದ್ದರು