'ಮಂಗಳೂರು ನಿಜ ಸ್ವರ್ಗ, ಐ ಲವ್ ಮಂಗಳೂರು'
ಮಂಗಳೂರು, ಆಗಸ್ಟ್ 25: 'ಮಂಗಳೂರು ನರಕ ಎಂದು ನಾನು ಎಲ್ಲಿಯೂ ಹೇಳಿಲ್ಲ, ಮಂಗಳೂರು ನಿಜಕ್ಕೂ ಸ್ವರ್ಗ, ಐ ಲವ್ ಮಂಗಳೂರು, ಇಲ್ಲೇ ನನ್ನ ರಾಜಕಾರಣದ ಜೀವನ ಆರಂಭವಾದದ್ದು,' ಹೀಗೆಂದು ಹೇಳಿದ್ದು ಮಾಜಿ ಸಂಸದೆ, ಚಿತ್ರನಟಿ ರಮ್ಯಾ.
ಕದ್ರಿಯಲ್ಲಿ ಆಯೋಜನೆಗೊಂಡಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಮ್ಯಾ ಮಂಗಳೂರಲ್ಲಿ ಹೇಳಿಕೆ ನೀಡಿದ್ದಾರೆ. ಪ್ರತಿ ದೇಶದಲ್ಲಿ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಎಲ್ಲರೂ ಶಾಂತಿ ಮತ್ತು ಸಮನ್ವಯದಿಂದಲೇ ಬದುಕುವುದು ಮುಖ್ಯ ಎಂದು ರಮ್ಯಾ ಹೇಳಿದ್ದಾರೆ.[ಮಾಜಿ ಸಂಸದೆ ರಮ್ಯಾ ಕಾರಿಗೆ ಹಿಂದೂ ಸಂಘಟನೆಗಳಿಂದ ಮುತ್ತಿಗೆ]
ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿದ್ದರಿಂದ ಪ್ರತಿಭಟನೆ ಎದುರಿಸಬೇಕಾಯಿತು. ನನಗೆ ಇಲ್ಲಿ ಅಸಂಖ್ಯ ಅಭಿಮಾನಿಗಳಿದ್ದಾರೆ. ಹಲವರು ನನ್ನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ.[ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ]
ಪಾಕಿಸ್ತಾನ ನರಕವಲ್ಲ ಎಂದು ಹೇಳಿಕೆ ನೀಡಿದ್ದ ರಮ್ಯಾ ಬಳಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದಾಗ ರಮ್ಯಾ ನರಕ ಎಲ್ಲಿಲ್ಲ? ಮಂಗಳೂರಿನಲ್ಲೂ ಇದೆ ಎಂದು ಹೇಳಿದ್ದು ವಿವಾದ ಎಬ್ಬಿಸಿತ್ತು.
ಗುರುವಾರ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಮ್ಯಾ ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ಬಿಸಿ ಎದಿರಿಸಬೇಕಾಯಿತು. ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ತೆರಳುತ್ತಿದ್ದ ರಮ್ಯಾ ಅವರಿದ್ದ ಕಾರಿಗೆ ಮುತ್ತಿಗೆ ಹಾಕಲಾಯಿತು. ರಸ್ತೆ ಮೇಲೆ ಮಲಗಿದ ಪ್ರತಿಭಟನಾಕಾರರು ಕಾರನ್ನು ಕೆಲಕಾಲ ತಡೆದರು. ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಶಾಂತಿ ಸೌಹಾರ್ದತೆಗಾಗಿ ನಾನು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಿರುಚಿ ಹಾಕಿವೆ. ಈ ಅಪವರದಿಗೆ ಕಿವಿ ಕೊಡದಿರಿ.🙏😊
— Divya Spandana/Ramya (@divyaspandana) August 24, 2016