ಮಂಗಳೂರು: ಮಾಜಿ ಶಾಸಕರನ್ನೇ ಯಾಮಾರಿಸಿದ ಚಾಲಾಕಿ ಖದೀಮರು
ಮಂಗಳೂರು, ಜುಲೈ 06: ಬುದ್ಧಿವಂತ ,ಸುಶಿಕ್ಷಿತ ರಾಜಕೀಯ ನಾಯಕರೊಬ್ಬರನ್ನು ಚಾಲಾಕಿ ಖದೀಮರು ಯಾಮಾರಿಸಿ ಹಣ ಲಪಡಾಯಿಸಿದ ಅತ್ಯಂತ ಕುತೂಹಲ ಪ್ರಸಂಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೊ ಅವರನ್ನು ಚಾಲಾಕಿ ಖದೀಮರು ವಂಚಿಸಿದ ಘಟನೆ ನಡೆದಿದೆ.
ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಮೊಬೈಲ್ ಕರೆ ಮಾಡಿದ ಚಾಲಾಕಿ ಖದೀಮರು ಲೋಬೊ ಅವರಿಂದ ಎ ಟಿ ಎಂ ಕಾರ್ಡ್ ನ ವಿವರ ಪಡೆದು ಹಣ ಲಪಡಾಯಿಸಿದ್ದಾರೆ. ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆಮಾಡಿರುವುದಾಗಿ ಪರಿಚಯಿಸಿಕೊಂಡ ಖದೀಮರು , ನೀವು ಎ ಟಿ ಎಂ ಕಾರ್ಡ್ ನ ಕೀ ವಿವರ ನೀಡಿಲ್ಲ ಈ ಕಾರಣ ನಿಮ್ಮ ಎ ಟಿ ಎಂ ಕಾರ್ಡ್ ನ್ನು ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ದೂರವಾಣಿ ಕರೆಯನ್ನು ನಂಬಿದ ಮಾಜಿ ಶಾಸಕ ಜೆ ಆರ್ ಲೋಬೊ ತಮ್ಮ ಉಳಿತಾಯ ಖಾತೆಯ ಎ ಟಿ ಎಂ ಕಾರ್ಡ್ ನ , ಓ ಟಿ ಪಿ ನಂಬರ್ ಅನ್ನು ಕರೆಮಾಡಿದ ಖದೀಮರಿಗೆ ನೀಡಿದ್ದಾರೆ. ಈ ಪರಿಣಾಮ ಕ್ಷಣ ಮಾತ್ರದಲ್ಲಿ ಲೋಬೊ ಅವರ ಖಾತೆಯಿಂದ 50 ಸಾವಿರ ರೂಪಾಯಿ ಯನ್ನು ಖದೀಮರು ಎಗರಿಸಿದ್ದಾರೆ. ಮೂದಲು 25 ಸಾವಿರ ರೂಪಾಯಿ ನಂತರ 19,999 ಹಾಗು 5 ಸಾವಿರ ದಂತೆ ಲೋಬೊ ಅವರ ಖಾತೆಯಿಂದ ಹಣ ತೆಗೆಯಲಾಗಿದೆ.
ವಂಚನೆ ಗೊಳಗಾಗಿರುವುದನ್ನು ಅರಿತ ಮಾಜಿ ಶಾಸಕ ಜೆ ಆರ್ ಲೋಬೊ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐ ಟಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖದೀಮರು ಆನ್ ಲೈನ್ ಖರೀದಿ ಮಾಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೂಡಾ ಆಗಿರುವ ಮಾಜಿ ಶಾಸಕ ಜೆ.ಆರ್.ಲೋಬೊ ಅವರನ್ನೇ ಖದೀಮರು ಯಾಮಾರಿಸಿರುವ ರೀತಿ ಬಗ್ಗೆ ಚರ್ಚೆ ಆರಂಭವಾಗಿದೆ. ಬ್ಯಾಂಕ್ ನ ಹೆಸರು ಹೇಳಿ ದೂರವಾಣಿ ಕರೆ ಮಾಡಿ ವಂಚಿಸುವ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ಪೊಲೀಸ್ ಇಲಾಖೆ ಮಾತ್ರ ವಲ್ಲ ಬ್ಯಾಂಕ್ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಮಾಜಿ ಶಾಸಕ ಜೆ ಆರ್ ಲೋಬೊ ವಂಚನೆಗೆ ಒಳಗಾಗಿದ್ದಾದರೂ ಹೇಗೆ ಎಂಬುದು ಮಾತ್ರ ಕುತೂಹಲದ ಸಂಗತಿ.