ಕೊರೊನಾ ವ್ಯಾಕ್ಸಿನ್ ಪಡೆದು ಟ್ರೋಲ್ ಆದ ಮಾಜಿ ಸಚಿವ ಯು.ಟಿ ಖಾದರ್
ಮಂಗಳೂರು, ಮೇ 18: ಕೋವಿಡ್ ಲಸಿಕೆಗೆ ದೇಶದಲ್ಲಿ ಭಾರೀ ಬೇಡಿಕೆ ಬಂದಿದ್ದು, ಜನರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲೂ ಆಗದೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಈ ನಡುವೆ ಲಸಿಕೆಗೆ ಮೊದಲು ವಿರೋಧ ವ್ಯಕ್ತಪಡಿಸಿದವರೆಲ್ಲ ಈಗ ಲಸಿಕೆಗಾಗಿ ಒತ್ತಡ ಹಾಕುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಮಾಜಿ ಸಚಿವ ಯು.ಟಿ ಖಾದರ್ ಕೂಡಾ ಮೊದಲು ಲಸಿಕೆಗೆ ವಿರೋಧಿಸಿ, ಈಗ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗರ ಬಾಯಿಗೆ ಆಹಾರವಾಗಿದ್ದಾರೆ.
ಮಾಜಿ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಖಾದರ್ ತಮ್ಮ ಮನೆಯಲ್ಲಿಯೇ ಲಸಿಕೆ ಪಡೆದುಕೊಂಡಿದ್ದರು. ಖಾದರ್ ಲಸಿಕೆ ಪಡೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನೆಟ್ಟಿಗರು ಮಾಜಿ ಸಚಿವ ಯು.ಟಿ ಖಾದರ್ ಮೇಲೆ ಪ್ರಶ್ನೆಗಳ ಛೂಬಾಣ ಬಿಟ್ಟಿದ್ದು, ವ್ಯಂಗ್ಯವಾಡುತ್ತಿದ್ದಾರೆ.
ದೇಶದಲ್ಲಿ ಲಸಿಕೆ ಪ್ರಕ್ರಿಯೆ ಆರಂಭವಾದಾಗ ಯು.ಟಿ ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಸರ್ಕಾರ ಜನರನ್ನು ಬಲವಂತವಾಗಿ ಲಸಿಕೆ ಪಡೆಯುವಂತೆ ಮಾಡುತ್ತಿದೆ. ಜನ ಭಯದಿಂದ ಲಸಿಕೆ ಪಡೆಯುವ ರೀತಿಯ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ.
ಮೊದಲ ಲಸಿಕೆಯನ್ನು ಆಸ್ಪತ್ರೆಗಳ "ಡಿ' ಗ್ರೂಪ್ ನೌಕರರಿಗೆ ನೀಡಿ ಅವರ ಜೀವದ ಮೇಲೆ ಚೆಲ್ಲಾಟವಾಡುತ್ತಿದೆ ಎಂಬಿತ್ಯಾದಿ ಟೀಕಾಸ್ತ್ರವನ್ನೇ ಸರ್ಕಾರದ ಮೇಲೆ ಖಾದರ್ ಸುರಿದಿದ್ದರು. ಅಂದಿನ ಯು.ಟಿ ಖಾದರ್ ಹೇಳಿಕೆ ಸುದ್ದಿ ವರದಿಯನ್ನು ಈಗ ಬಿಜೆಪಿಗರು ಈಟಿಯಾಗಿ ಬಳಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಟು ವಾಕ್ಯಗಳಿಂದ ಚುಚ್ಚಿದ್ದಾರೆ.
ಖಾದರ್ ಸುದ್ದಿಗೋಷ್ಠಿಯ ವರದಿಯ ಚಿತ್ರವನ್ನು ಹಾಕಿ, ಅಂದಿನ ಹೇಳಿಕೆಯನ್ನು ಮತ್ತು ಖಾದರ್ ನಗುನಗುತ್ತಾ ಲಸಿಕೆ ಪಡೆದಿರುವ ಫೋಟೋವನ್ನು ಹಾಕಿ ಕಥೆ ಹೇಳುವ ಎರಡು ಚಿತ್ರಗಳು ಅಂತಾ ಗೇಲಿ ಮಾಡಿದ್ದಾರೆ.