ಚಂದ್ರಯಾನ2 ಯೋಜನೆ ವೈಫಲ್ಯದ ಕಾರಣ ಬಿಚ್ಚಿಟ್ಟ ಖಾದರ್
ಮಂಗಳೂರು, ಸೆ. 08: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ 95% ಪೂರ್ಣಗೊಂಡು ಯಶಸ್ಸಿನ ಹಾದಿಯಲ್ಲಿ ಸ್ವಲ್ಪದರಲ್ಲಿ ಎಡವಿದ್ದರ ಬಗ್ಗೆ ಥರಾವರಿ ಪ್ರತಿಕ್ರಿಯೆಗಳು ಬರುತ್ತಿವೆ.
Recommended Video
ಚಂದ್ರಯಾನ2 ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದರ ಬಗ್ಗೆ ವಿಶ್ಲೇಷಣೆ ಮುಂದುವರೆದಿದೆ. ಈ ನಡುವೆ ಮಾಜಿ ಸಚಿವ ಯು.ಟಿ ಖಾದರ್ ಅವರು ನೀಡಿರುವ ಪ್ರತಿಕ್ರಿಯೆ ಹುಬ್ಬೇರಿಸುವಂತೆ ಮಾಡಿದೆ.
"ಚಂದ್ರಯಾನ 2 ವೈಫಲ್ಯದ ಹಿಂದೆ ರಷ್ಯಾ ಕೈವಾಡವಿರಬಹುದು. ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು" ಎಂದು ಯು.ಟಿ ಖಾದರ್ ಹೇಳಿದ್ದಾರೆ. ಚಂದ್ರಯಾನ2 ಬಗ್ಗೆ ಮಾತನಾಡಿ, ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ವೈಫಲ್ಯಗಳು ಸಹಜ, ಚಂದ್ರಯಾನ2 ಮುಂಬರುವ ಅನೇಕ ಯೋಜನೆಗಳಿಗೆ ಆರಂಭದ ಮೆಟ್ಟಿಲಾಗಲಿದೆ. ಇನ್ನಷ್ಟು ಉತ್ತಮ ಫಲಿತಾಂಶ ನೀಡಲು ಇಸ್ರೋ ವಿಜ್ಞಾನಿಗಳನ್ನು ಪ್ರೇರೇಪಿಸಲಿ" ಎಂದಿದ್ದಾರೆ.
ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ
ರಷ್ಯಾಗೆ ಹೊಟ್ಟೆಕಿಚ್ಚು: "ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಪ್ರಗತಿ ಬಗ್ಗೆ ರಷ್ಯಾಗೆ ಮುಂಚಿನಿಂದಲೂ ಹೊಟ್ಟೆಕಿಚ್ಚಿದೆ. ಚಂದ್ರಯಾನ 2 ವೈಫಲ್ಯಕ್ಕೆ ಇದು ಕೂಡಾ ಕಾರಣ ಇರಬಹುದು, ಚಂದ್ರನ ಮೇಲೆ ಇಳಿಯಬೇಕಿದ್ದ ಲ್ಯಾಂಡರ್(ವಿಕ್ರಮ್) ಖರೀದಿಗೆ ಸಂಬಂಧಿಸಿದಂತೆ 2007 ರಲ್ಲಿ ರಷ್ಯಾ ಹಾಗೂ ಭಾರತ ಒಪ್ಪಂದ ಮಾಡಿಕೊಂಡಿದ್ದವು, ಈ ಒಪ್ಪಂದದ ಅನ್ವಯ ಭಾರತಕ್ಕೆ ಕೊಡಬೇಕಿದ್ದ ಲ್ಯಾಂಡರ್ ಬದಲಿಗೆ ಬೇರೆ ಲ್ಯಾಂಡರ್ ಕೊಟ್ಟಿದೆ. ಇದೇ ಲ್ಯಾಂಡರ್ ಬಳಕೆಯಿಂದ ಚಂದ್ರಯಾನ-2 ಯೋಜನೆ ಕೊನೆ ಕ್ಷಣದಲ್ಲಿ ವಿಫಲವಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಸರಿಯಾದ ಲ್ಯಾಂಡರ್ ಕೊಡದೇ ಮೋಸ ಮಾಡಿದ ರಷ್ಯಾಕ್ಕೆ 7 ಸಾವಿರ ದಶಲಕ್ಷ ಡಾಲರ್ ಸಾಲ ನೀಡುವುದಾಗಿ ಮೋದಿ ಘೋಷಣೆ ಮಾಡಿದ್ದಾರೆ. ಮೋದಿಗೆ ರಷ್ಯಾ ಮೇಲಿನ ಒಲವು ಕಡಿಮೆಯಾಗಿಲ್ಲ" ಎಂದು ಖಾದರ್ ಹೇಳಿದರು.