ಡಿಸಿಗಳ ಜೊತೆ ಮೋದಿ ಮೀಟಿಂಗ್; ಮೂರ್ಖರನ್ನಾಗಿಸುವ ಪ್ರಯತ್ನವೆಂದ ಯು.ಟಿ ಖಾದರ್
ಮಂಗಳವಾರ, ಮೇ 19: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಹಲವು ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯು.ಟಿ ಖಾದರ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಜಿಲ್ಲಾಧಿಕಾರಿಗಳನ್ನು ಕಮಾಂಡರ್ ಇನ್ ಚೀಫ್ ಅಂತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈ ಹಿಂದೇನೆ ಮ್ಯಾಜಿಸ್ಟ್ರೇಟ್ ಪವರ್ ಇದೆ. ಕಮಾಂಡರ್ ಇನ್ ಚೀಫ್ ಮಾಡಿ ಮತ್ತೆ ಯಾವ ಪವರ್ ಕೊಟ್ಟಿದ್ದೀರಾ ಅಂತಾ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಕಮಾಂಡರ್ ಇನ್ ಚೀಫ್ ಎಂದು ಹೇಳಿ ನೀವು ಕೊಟ್ಟ ಪವರ್ ಏನು? ತಹಶೀಲ್ದಾರ್, ಸಹಾಯಕ ಆಯುಕ್ತರು ಕೆಲಸ ಮಾಡದೆ ಇದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೂಡ ಜಿಲ್ಲಾಧಿಕಾರಿಗಳಿಗೆ ಇಲ್ಲ. ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಡಾಕ್ಟರ್ ಕೆಲಸ ಮಾಡದೆ ಇದ್ದರೆ, ಅವರನ್ನು ವರ್ಗಾವಣೆ ಮಾಡುವ ಅಧಿಕಾರ ಕೂಡಾ ಜಿಲ್ಲಾಧಿಕಾರಿಗಳಿಗೆ ಇಲ್ಲ. ಈ ಎಲ್ಲಾ ಪವರ್ ಕೊಡದೆ ಮತ್ತೆ ಏನು ಹೊಸ ಪವರ್ ಕೊಟ್ಟಿದ್ದೀರಾ? ಎಂದು ಯು.ಟಿ ಖಾದರ್ ಕೇಳಿದ್ದಾರೆ.
ಕೇಂದ್ರ ಸರಕಾರಕ್ಕೆ ಇನ್ನೂ ಜನರ ಕಷ್ಟ ಅರ್ಥ ಆಗಿಲ್ಲ. ಕಮಾಂಡರ್ ಇನ್ ಚೀಫ್ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನಮಂತ್ರಿಯವರು ಸೂಚಿಸುತ್ತಾರೆ, ಆದರೆ ನಮ್ಮಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್ ರಚಿಸಿ ಎರಡು ತಿಂಗಳೇ ಕಳೆದಿವೆ. ಇನ್ನೂ ನಮ್ಮ ಪ್ರಧಾನಿಗಳು ಎಷ್ಟು ಹಿಂದೆ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಟೀಕಿಸಿದರು.