ಕೊಡಗು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಕಳಗಿ ಕೊಲೆ ಆರೋಪಿ ಹತ್ಯೆ
ಮಂಗಳೂರು, ಅಕ್ಟೋಬರ್ 8; ಇಲ್ಲಿಗೆ ಸಮೀಪದ ಸುಳ್ಯದ ಶಾಂತಿ ನಗರದಲ್ಲಿ ವಾಸಿಸುತ್ತಿದ್ದ ಮರಳು ವ್ಯಾಪಾರಿ, ಮೂಲತಃ ಸಂಪಾಜೆ ಕಲ್ಲುಗುಂಡಿಯ ನಿವಾಸಿ ಸಂಪತ್ ಎಂಬಾತನನ್ನು ಇಂದು ಮುಂಜಾನೆ ಮುಸುಕುಧಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಇಂದು ಹತ್ಯೆಗೀಡಾದ ಸಂಪತ್ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಂಪಾಜೆಯ ಬಾಲಚಂದ್ರ ಕಳಗಿ ಎಂಬುವವರ ಕೊಲೆಯ ಮುಖ್ಯ ಆರೋಪಿ ಆಗಿದ್ದ. ಸಂಪತ್ ಕೆಲ ತಿಂಗಳ ಹಿಂದೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಕಲ್ಲು ಮತ್ತು ಮರಳು ವ್ಯಾಪಾರಸ್ಥನಾಗಿದ್ದ ಆತ ಎಂದಿನಂತೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬುವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ನಿನ್ನೆಯೂ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ.
ಮಡಿಕೇರಿ ಬಿಜೆಪಿ ನಾಯಕನ ಸಾವಿಗೆ ಸ್ಫೋಟಕ ತಿರುವು!
ಇಂದು ಮುಂಜಾನೆ 6.30ಕ್ಕೆ ಕಾರಲ್ಲಿ ಹೊರಟು ಬರುತ್ತಿದ್ದಾಗ ಐದಾರು ಮಂದಿ ಮುಸುಕುಧಾರಿಗಳು ಆತನ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜಿಗೆ ಹೊಡೆದಿದ್ದಾರೆ. ಅಪಾಯವನ್ನು ಅರಿತ ಸಂಪತ್ ಕಾರಿನಿಂದಿಳಿದು ತನ್ನ ಮನೆ ಕಡೆಗೆ ಓಡಿದ್ದಾನೆ. ಆ ವೇಳೆಗೆ ಮುಸುಕುಧಾರಿಗಳು ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದಾರೆ.
ಗುಂಡೇಟು ತಿಂದ ಆತ ತಾನಿರುವ ಮನೆಗೆ ಹೋಗದೆ ಪಕ್ಕದಲ್ಲಿರುವ ಇನ್ನೊಂದು ಮನೆಗೆ ಹೊಕ್ಕಿದನು. ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಮುಸುಕುಧಾರಿಗಳು ಮನೆಯೊಳಗೆ ಹೊಕ್ಕು ಮತ್ತೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಸಂಪತ್ ಮೃತಪಟ್ಟಿದ್ದಾನೆ. ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್. ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಗಡಿ ಭಾಗ ಸಂಪಾಜೆಯ ಜನಾನುರಾಗಿ ನಾಯಕನಾಗಿದ್ದ ಬಾಲಚಂದ್ರ ಕಳಗಿ (42) ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಗಡಿ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ವಿರೋಧಿಸುತ್ತಿದ್ದರು. ಆರೋಪಿ ಸಂಪತ್ ತನ್ನ ಅಕ್ರಮ ಮರಳುಗಾರಿಕೆಗೆ ಇವರು ಅಡ್ಡಿಯಾಗಿದ್ದಾರೆ ಎಂದು ದ್ವೇಷ ಸಾಧಿಸುತ್ತಿದ್ದ. ನಂತರ 2019ರ ಮಾರ್ಚ್ 19ನೇ ತಾರೀಕಿನಂದು ಕಳಗಿ ಅವರು ಮಡಿಕೇರಿಯಿಂದ ಸಂಪಾಜೆಯ ಮನೆಗೆ ರಾತ್ರಿ ಕಾರಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ಕಳಗಿ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು.
ನಂತರ ಪೊಲೀಸರು ಸಂಪತ್ (35) ಆತನ ಸಹಚರರಾದ ಹರಿ ಪ್ರಸಾದ್ (36) ಮತ್ತು ಲಾರಿ ಚಾಲಕ ಜಯನ್ (24) ಎಂಬುವವರನ್ನು ಬಂಧಿಸಿದ್ದರು.