ಬೈಕಂಪಾಡಿ ಮೇಲ್ಸೇತುವೆ ನವೆಂಬರ್ ನಲ್ಲಿ ಪೂರ್ಣ
ಮಂಗಳೂರು, ಜೂ.27 : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಹಾಗೂ 75ರಲ್ಲಿ ಬಿ.ಸಿ. ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆಗಳು ಕಾಮಗಾರಿ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಗುರುವಾರ ದಕ್ಷಿಣ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀನದಲ್ಲಿರುವ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಪಟ್ಟಂತೆ ಸರ್ಕಿಟ್ ಹೌಸ್ ನಲ್ಲಿ ಸಭೆ ನಡೆಯಿತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜಕೀಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಫ್ಲೈಓವರ್ ತಳಭಾಗದ ಗೂಡಂಗಡಿ ತೆರವು]
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಹಾಗೂ 75ರಲ್ಲಿ ಬಿ.ಸಿ. ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ್ ಮಿಶ್ರಾ ಅವರು, ಎರಡೂ ಸೇತುವೆಗಳ ಕಾಮಗಾರಿ ನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.
ನವೆಂಬರ್ ನಲ್ಲಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ ಹಾಗೂ 75ರಲ್ಲಿ ಬಿ.ಸಿ. ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗಳು ನವೆಂಬರ್ ನಲ್ಲಿ ಅಂತ್ಯಗೊಳ್ಳಲಿದ್ದು, ಸಂಚಾರಕ್ಕೆ ಮುಕ್ತಗೊಳ್ಳಲಿವೆ. ಬೈಕಂಪಾಡಿಯಲ್ಲಿ ಕೆಲವು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದ ಕಾಮಗಾರಿ ಸದ್ಯ ವೇಗವಾಗಿ ನಡೆಯುತ್ತಿದೆ. ಬಿ.ಸಿ. ರೋಡ್ ನಲ್ಲಿಯೂ ಕಾಮಗಾರಿ ಭರದಿಂದ ಸಾಗುತ್ತಿದ್ದು ನವೆಂಬರ್ ವೇಳೆಗೆ ಅಂತ್ಯಗೊಳ್ಳಲಿದೆ ಎಂದು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಸೂಚನೆ
ಸಭೆಯಲ್ಲಿ ದೇವದಾಸ ಶೆಟ್ಟಿ ಎಂಬುವವರು ಬಿ.ಸಿ. ರೋಡ್ ನಲ್ಲಿನ ಸರ್ವಿಸ್ ರಸ್ತೆ, ಚರಂಡಿ, ರಸ್ತೆಯಲ್ಲಿ ನೀರು ನಿಲ್ಲುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಸ್ ನಿಲುಗಡೆಗೆ ಕ್ರಮ
ಮೇಲ್ಕಾರ್ ಜಂಕ್ಷನ್ ನಲ್ಲಿ ಬಸ್ಸುಗಳ ಅಸಮರ್ಪಕ ನಿಲುಗಡೆಯಿಂದಾಗುವ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಬಿ.ಸಿ.ರೋಡಿನಲ್ಲಿ ಬಸ್ಸುಗಳನ್ನು ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸುವ ಬದಲು ಕೆಎಸ್ಆರ್ ಟಿಸಿ ನಿಲ್ದಾಣದಲ್ಲಿ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸರಿಗೆ ಸಂಸದರಿಗೆ ಸೂಚಿಸಿದರು.
ಭೂ ಸಾರಿಗೆ ಸಚಿವ ಗಡ್ಕರಿ ಭೇಟಿ
ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಸಲ್ಲಿಸಲಾಗಿರುವ ಪ್ರಸ್ತಾಪ, ಎದುರಿಸುತ್ತಿರುವ ಸಮಸ್ಯೆ, ಹೊಸ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಲು ಜುಲೈ 7 ಅಥವಾ 8ರಂದು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ಸಂಸದರು ಹೇಳಿದರು.