ಜನರನ್ನು ಆಕರ್ಷಿಸಿದ ಕದ್ರಿ ಉದ್ಯಾನವನದ ಫಲಪುಷ್ಪ ಪ್ರದರ್ಶನ
ಮಂಗಳೂರು, ಜನವರಿ 27: ಗಣರಾಜ್ಯೋತ್ಸವದ ಅಂಗವಾಗಿ ಕದ್ರಿ ಉದ್ಯಾನವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರಕಿದೆ. ಪಾರ್ಕ್ನ ಎಡಭಾಗದ ಒಂದು ಬದಿಯಲ್ಲಿ ಪುಷ್ಪ ಪ್ರದರ್ಶನದ ಅಂಗವಾಗಿ ಹೂವುಗಳ ಜೋಡಣೆ ಜನರನ್ನು ಕೈಬೀಸಿ ಕರೆಯುತ್ತಿದ್ದರೆ, ಇನ್ನೊಂದೆಡೆ ವಿವಿಧ ತರಕಾರಿಗಳು ಜನರ ಆಕರ್ಷಣೆಯ ಕೇಂದ್ರವಾಗಿದೆ.
ಫಲಪುಷ್ಪ ಪ್ರದರ್ಶನಕ್ಕೆಂದೇ ಜೀನ್ಯ, ಚೆಂಡು ಹೂವು ಸಹಿತ ವಿವಿಧ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ, ಹೂವಿನಿಂದ ತುಂಬಿರುವ ಗಿಡಗಳನ್ನು ತಂದು ಇಲ್ಲಿ ನೆಡಲಾಗಿದೆ. ಗುಚ್ಛದ ಮಾದರಿಯಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ.
ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ
ಈ ಪರಿಸರದಲ್ಲಿ ಬಿದಿರಿನ ಹಿಂಡು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ. ಅಂಥೂರಿಯಂ, ಆರ್ಕಿಡ್ ಗಿಡಗಳೂ ಗಮನ ಸೆಳೆಯುತ್ತಿವೆ.ವಿವಿಧ ತಾಲೂಕು, ಇಲಾಖೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ತರಕಾರಿ ಸಸಿ, ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ. ಬಣ್ಣ ಬಣ್ಣದ ಕಾನೇರ್ಷನ್ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಿದ ಸಮುದ್ರದಲ್ಲಿ ತೇಲುವ ಹಡಗು ಈ ಬಾರಿಯ ಪ್ರದರ್ಶನದ ವೈಶಿಷ್ಟ್ಯ.
'ಸಮುದ್ರದಲ್ಲಿ ತೇಲುವ ಹಡಗು', ಕಾರು ಮತ್ತು ಕೋನ್ ಐಸ್ಕ್ರೀಂ ಹೂವಿನ ಮಾದರಿಗಳು ಜನರನ್ನು ಆಕರ್ಷಿಸುತ್ತಿವೆ. ಸಮುದ್ರದಲ್ಲಿ ತೇಲುವ ಹಡಗಿಗೆ 25 ಸಾವಿರ ಕಾನೇರ್ಷನ್, 5 ಸಾವಿರ ಗುಲಾಬಿ ಹಾಗೂ 300ಬಂಡಲ್ ಬ್ಲೂ ಮತ್ತು ವೈಟ್ ಡೈಸಿ ಹೂವುಗಳನ್ನು ಬಳಸಲಾಗಿದೆ. ಹೂವಿನ ಕಾರನ್ನು ಸಂಪೂರ್ಣವಾಗಿ 18ಸಾವಿರ ಸೇವಂತಿ ಹೂವುಗಳಿಂದ ಸಿದ್ಧಪಡಿಸಲಾಗಿದೆ.ಇನ್ನೊಂದೆಡೆ ಹೂವಿನ ಟೀ ಪಾಟ್ ಗೆ 22 ಸಾವಿರ ಸೇವಂತಿಗೆ ಹೂವುಗಳನ್ನು ಬಳಸಲಾಗಿದೆ.
ಗಾಂಧಿಯ ಜೀವನ ಗಾಥೆ ಸಾರುವ ಲಾಲ್ಬಾಗ್ ಪುಷ್ಪ ಪ್ರದರ್ಶನ
ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಕ ಹೂಗಳ ಟೋಪಿಯಾರಿ ಹಾಗೂ ವಿವಿಧ ಹಣ್ಣು ಮತ್ತು ತರಕಾರಿಗಳ, ಅಂಥೂರಿಯಂ, ಆರ್ಕಿಡ್ ಗಿಡಗಳ ಪ್ರದರ್ಶನದ ಜತೆಗೆ ಪಾಲಕ್, ಕ್ಯಾಬೇಜ್, ಮೂಲಂಗಿ,ಬಸಳೆ, ಮುಸುಕಿನ ಜೋಳ, ಅಲಸಂಡೆ, ಬೀನ್ಸ್, ಹಾಲು ಬೆಂಡೆ, ಹೀರೆ, ಸೋರೆ, ಹಾಗಲಕಾಯಿ, ಕುಂಬಳಕಾಯಿ, ಪಡವಲಕಾಯಿ, ಚೀನಿಕಾಯಿಗಳು ಬಳ್ಳಿಯಲ್ಲಿ ಫಲ ಬಿಟ್ಟಿವೆ.ಪ್ರದರ್ಶನ ಮಳಿಗೆಗಳ ಮಧ್ಯದಲ್ಲಿ ವಿವಿಧ ತರಕಾರಿ, ಹೂವಿನ ಗಿಡಗಳು ಹಾಗೂ ಭತ್ತದ ಫಸಲಿನ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗಿದೆ.