ಸಂಭ್ರಮದೊಂದಿಗೆ ಜರುಗಿದ ತುಳುನಾಡಿನ ಕೊನೆಯ ಜಾತ್ರೆ
ಮಂಗಳೂರು, ಮೇ 15; ಖಂಡಿಗೆ ಜಾತ್ರೆಯೊಂದಿಗೆ ತುಳುನಾಡಿನಲ್ಲಿ ಜಾತ್ರೆಗಳು ಕೊನೆಗೊಳ್ಳುತ್ತದೆ. ಮೀನು ಹಿಡಿಯುವುದು ಈ ಜಾತ್ರೆಯ ವಿಶೇಷವಾಗಿದೆ. ಮೀನು ಹಿಡಿದು ಭಕ್ತರು ದೇವರ ಪ್ರಸಾದ ಎಂದು ಜನರು ಸ್ವೀಕಾರ ಮಾಡುತ್ತಾರೆ. ಈ ಮೂಲಕ ಜಾತ್ರೆಗಳಿಗೆ ತೆರೆ ಬೀಳುತ್ತದೆ.
ಮಂಗಳೂರಿನ ಮೂಲ್ಕಿ ಸಮೀಪದ ಚೇಳ್ಯಾರು ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರೆ ಆರಂಭಗೊಳ್ಳುವುದೇ ಭಕ್ತರು ಮೀನು ಹಿಡಿಯುವ ಮೂಲಕ. ಈ ನದಿಗೆ ದೈವಸ್ಥಾನದ ಪ್ರಸಾದ ಹಾಕಿದ ನಂತರ ಸುಡುಮದ್ದು ಬಿಟ್ಟಾಗ ಭಕ್ತರೆಲ್ಲರೂ ಒಟ್ಟಿಗೆ ನದಿಗಿಳಿಯುತ್ತಾರೆ. ಮಕ್ಕಳು, ಮದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ.
ಉಡುಪಿ; 1.81 ಲಕ್ಷಕ್ಕೆ ಮಾರಾಟವಾದ ಒಂದೇ ಮೀನು!
ದೈವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಾರೆ. ಆದರೆ ಅವರೆಲ್ಲ ಮೀನುಗಾರರು ಅಲ್ಲ. ಬದಲಾಗಿ ಅವರೆಲ್ಲ ಆ ದೈವಸ್ಥಾನದ ಭಕ್ತರು. ತಾವು ಹಿಡಿದ ಮೀನುಗಳನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ. ಆ ಮೀನುಗಳನ್ನು ತಿಂದರೆ ರೋಗರುಜಿನಗಳು ಬರುವುದಿಲ್ಲ ಅನ್ನುವ ನಂಬಿಕೆಯೂ ಇದೆ.
ಮಂಗಳೂರು ವಿಶೇಷ; ಪೊಳಲಿ ಜಾತ್ರೆ ಚೆಂಡಾಟಕ್ಕೂ ಧಾರ್ಮಿಕ ನಂಬಿಕೆ ನಂಟು
ಸುಂದರವಾದ ಪ್ರಕೃತಿಯ ಮಧ್ಯೆ ಇರುವ ನಂದಿನಿ ನದಿಯಲ್ಲಿ ಮೀನು ಹಿಡಿಯುತ್ತಿರುವವರು ಮೀನುಗಾರರಲ್ಲ. ಆದರೆ ವರ್ಷಕ್ಕೊಂದು ಬಾರಿ ಇವರೆಲ್ಲರೂ ಮೀನುಗಾರರಿಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಮೀನು ಹಿಡಿಯುತ್ತಾರೆ. ಹೀಗೆ ಮೀನು ಹಿಡಿಯುವುದೇ ಈ ಜಾತ್ರೆಯ ವಿಶೇಷವಾಗಿದೆ.
ವಿಡಿಯೋ; ಶಿವಮೊಗ್ಗದ ಕೂಡ್ಲಿಯಲ್ಲಿ ವೈಭವದ ಜಾತ್ರೆ, ಪುಣ್ಯಸ್ನಾನ
ನಂದಿನಿ ನದಿಯಲ್ಲಿ ಮೀನಿನ ಬೇಟೆ
ಮೂಲ್ಕಿ ಸಮೀಪದ ಚೇಳ್ಯಾರು ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರೆ ಆರಂಭಗೊಳ್ಳುವುದೇ ಭಕ್ತರು ಮೀನು ಹಿಡಿಯುವ ಮೂಲಕ. ತಾವೇ ತಂದಿರುವ ವಿವಿಧ ರೀತಿಯ ಬಲೆಗಳನ್ನು ಹಾಕಿ ಮೀನುಗಳನ್ನು ಹಿಡಿಯುತ್ತಾರೆ ಭಕ್ತರು. "ದೈವದ ಅನುಗ್ರಹದಿಂದ ಆವತ್ತು ಹೆಚ್ಚಿನ ಮೀನುಗಳು ಇರುತ್ತದೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವ ಮೀನು ಸಿಗದೇ ಇರುವುದಿಲ್ಲ" ಎನ್ನುತ್ತಾರೆ ಕ್ಷೇತ್ರದ ಧರ್ಮದರ್ಶಿಗಳಾದ ಆದಿತ್ಯ ಮುಕ್ಕಾಲ್ದಿ.
ಮೀನುಗಳು ಸಹ ಮೇಲಕ್ಕೆ ಬರುತ್ತವೆ
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನದಿಗಿಳಿಯೋದರಿಂದ ನೀರು ತಲ್ಲಣಗೊಂಡು ಮೀನುಗಳೂ ಮೇಲಕ್ಕೆ ಬರುತ್ತದೆ. ನದಿಯ ಸುತ್ತಲೂ ಎಲ್ಲರು ಬಲೆ ಬೀಸುವುದರಿಂದಾಗಿ ಮೀನುಗಳಿಗೆ ಓಡಿ ತಪ್ಪಿಸಿಕೊಳ್ಳಲಾಗಲ್ಲ. ಇಲ್ಲಿ ಯಾರೂ ಬೇಕಾದರೂ ತಮಗೆ ಬೇಕಾದಷ್ಟು ಮೀನುಗಳನ್ನು ಹಿಡಿಯಬಹುದು. ಹೀಗೆ ಸಿಕ್ಕಿದ ಮೀನುಗಳನ್ನು ಭಕ್ತರು ಮನೆಗೆ ಕೊಂಡೊಯ್ದು ದೇವರ ಪ್ರಸಾದವಾಗಿ ಸ್ವೀಕರಿಸುತ್ತಾರೆ.
ಭಕ್ತರು ಮೀನು ಖರೀದಿ ಮಾಡುತ್ತಾರೆ
ಹಿಂದೆಲ್ಲ ಭಕ್ತರು ತಾವು ಹಿಡಿದ ಮೀನನ್ನು ಇತರರಿಗೆ ಹಂಚಿ ತಿನ್ನುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮೀನು ಹಿಡಿದವರು ಮಾರಾಟ ಮಾಡುವ ಮೂಲಕ ಇತರ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುತ್ತಾರೆ. ಎಷ್ಟೇ ಹಣವಾದರೂ ಇಲ್ಲಿಗೆ ಬರುವ ಭಕ್ತರು ಭಕ್ತಿಯಿಂದ ಈ ಮೀನುಗಳನ್ನು ಖರೀದಿಸುತ್ತಾರೆ. ಮನೆಗೆ ಕೊಂಡೊಯ್ದು ದೇವರ ಪ್ರಸಾದವಾದ ಮೀನಿನ ಭೋಜನ ಮಾಡುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ದೇವರು ಪ್ರಸನ್ನಗೊಳ್ಳುತ್ತಾರೆ. ಜೊತೆಗೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರೋದಿಲ್ಲ ಅನ್ನೋದು ಭಕ್ತರ ನಂಬಿಕೆ.
ತುಳುನಾಡಿನ ಜಾತ್ರೆ ಮುಕ್ತಾಯ
ಮುಂಜಾನೆಯಿಂದ ಮೀನಿನ ಬೇಟೆಯಲ್ಲಿರುವ ಭಕ್ತರು ಸೂರ್ಯ ನೆತ್ತಿ ಮೇಲೆ ಬಂದಾಗ ಬಲೆಗೆ ಬಿದ್ದ ಮೀನನ್ನೆಲ್ಲಾ ಹಿಡಿದುಕೊಂಡು ತಮ್ಮ ತಮ್ಮ ಮನೆಗಳಿಗೆ ಹೋಗುತ್ತಾರೆ. ತುಳುನಾಡಿನಲ್ಲಿ ಎರ್ಮಾಳಿನಿಂದ ಜಾತ್ರೆಗಳು ಆರಂಭಗೊಂಡರೆ, ಈ ಖಂಡಿಗೆ ಜಾತ್ರೆಯೊಂದಿಗೆ ತುಳುನಾಡಿನಲ್ಲಿ ಜಾತ್ರೆಗಳು ಕೊನೆಗೊಳ್ಳುತ್ತದೆ. ಈ ಶ್ರದ್ಧಾ ಭಕ್ತಿಯ ಮೀನು ಹಿಡಿಯುವ ಉತ್ಸವದೊಂದಿಗೆ ತುಳುನಾಡಿನ ಎಲ್ಲಾ ಜಾತ್ರೆಗಳಿಗೆ ತೆರೆ ಬೀಳುತ್ತದೆ.