ನಾಳೆಯಿಂದ ಜುಲೈವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ
ಮಂಗಳೂರು, ಮೇ 31 : ಈ ವರ್ಷದ ಮೀನುಗಾರಿಕೆ ಋತು ಇಂದು ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೀನುಗಾರಿಕೆಗೆಂದು ಕಡಲಿಗಿಳಿದಿದ್ದ ಬೋಟುಗಳು ದಡ ಸೇರುತ್ತಿವೆ. ಮಂಗಳೂರು ಮೀನುಗಾರಿಕಾ ಧಕ್ಕೆಯಿಂದ ಕಾರ್ಯಾಚರಿಸುತ್ತಿದ್ದ ಸುಮಾರು 800ರಷ್ಟು ಬೋಟುಗಳು ಈಗಾಗಲೇ ಧಕ್ಕೆಗೆ ವಾಪಾಸಾಗಿದ್ದು, ಸುಮಾರು 200ರಷ್ಟು ಬೋಟುಗಳು ಇಂದು ಸಂಜೆ ವೇಳೆಗೆ ವಾಪಾಸಾಗಲಿವೆ.
ಈ ವರ್ಷದ ಮೀನುಗಾರಿಕೆ ಋತುವಿನಲ್ಲಿ ಒಟ್ಟು 3,166 ಕೋಟಿ ರೂಪಾಯಿ ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮೀನುಗಾರಿಕೆ ಪ್ರಮಾಣ ಮತ್ತು ಮೌಲ್ಯ ಎರಡೂ ದೃಷ್ಟಿಯಿಂದ ಕುಸಿತ ಕಂಡು ಬಂದಿದೆ. ಈ ಸಾಲಿನಲ್ಲಿ ಸುಮಾರು 70 ಕೋಟಿ ರೂಪಾಯಿಯಷ್ಟು ಕಡಿಮೆಯಾಗಿದೆ. ಕಳೆದ ಋತುವಿನಲ್ಲಿ 3,236.99 ಕೋಟಿ ರೂಪಾಯಿ ಮೌಲ್ಯದ 2,92,061 ಟನ್ ಮೀನು ಹಿಡಿಯಲಾಗಿತ್ತು.
ಕರಾವಳಿಯಲ್ಲಿ ಅವಧಿಗೂ ಮುನ್ನವೇ ದಡ ಸೇರಿದ ಮೀನುಗಾರಿಕಾ ದೋಣಿಗಳು!
ಮೀನುಗಾರಿಕೆ ರಜೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾಂತ್ರೀಕೃತ ಮತ್ತು ಸಾಂಪ್ರದಾಯಿಕ ದೋಣಿಗಳ ಮುಖಾಂತರ ನಡೆಸುವ ಮೀನುಗಾರಿಕೆ ಚಟುವಟಿಕೆಯನ್ನು ನಾಳೆ ಜೂನ್ 1ರಿಂದ ಜುಲೈ 31ರವರೆಗೆ ನಿಷೇಧಿಸಲು ಸರಕಾರ ಆದೇಶ ಹೊರಡಿಸಿದೆ. ಈ ಋತುವಿನಲ್ಲಿ ಬಂಗುಡೆ, ಬೂತಾಯಿ, ಕೊಡ್ಡಾಯಿ, ಅಂಜಲ್ ದೊರೆತಿರುವುದು ಕಡಿಮೆ. ಕಪ್ಪು ಬಣ್ಣದ ಕ್ಲಾಟಿ ಮೀನು ಸಿಕ್ಕಿದ್ದೇ ಹೆಚ್ಚು. ಜತೆಗೆ ಮದ್ಮಾಲ್, ಅರೆಣೆ ಸಿಕ್ಕಿವೆ ಎಂದಿದ್ದಾರೆ ಮೀನುಗಾರರು.