ಮಂಗಳೂರು: ಕಡಲ ಮಕ್ಕಳಿಂದ ವಿಶೇಷ ಸಮುದ್ರ ಪೂಜೆ
ಮಂಗಳೂರು, ಆಗಸ್ಟ್ 7 : ಮಳೆಗಾಲ ಆರಂಭವಾದರೆ ಸಾಕು ಪಶ್ಚಿಮ ಕರಾವಳಿಯಲ್ಲಿರುವ ಅರಬ್ಬೀ ಸಮುದ್ರ ಆರ್ಭಟಿಸಲು ಪ್ರಾರಂಭಿಸುತ್ತದೆ. ಇದೇ ಕಡಲನ್ನು ನಂಬಿ ಬದುಕುವ ಲಕ್ಷಾಂತರ ಮಂದಿ ಕರಾವಳಿ ಮೀನುಗಾರರಿಗೆ ಅನ್ನದಾತ ಎಂದರೆ ತಪ್ಪಾಗಲಾರದು.
ಆದ್ದರಿಂದ ಸಮುದ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಸಂಸಾರದ ರಥ ನಡೆಸಲು ಅನಾದಿ ಕಾಲದಿಂದಲೂ ನಡೆದು ಬಂದ ಕಡಲಿನ ಒಡಲನ್ನು ತಂಪಾಗಿರಿಸುವ ನಂಬಿಕೆ ಕರಾವಳಿಯಲ್ಲಿ ಇಂದಿಗೂ ಜೀವಂತವಾಗಿದೆ.
ಆಗಸ್ಟ್ 1ರಿಂದ ಕುಡ್ಲದಲ್ಲಿ ಮೀನು ಬೇಟೆ ಪುನರಾರಂಭ
ಅದರಂತೆ ಈ ವರ್ಷವೂ ಕೂಡ ಮಂಗಳೂರಿನ ತಣ್ಣಿರು ಬಾವಿ ಕಡಲ ಕಿನಾರೆಯಲ್ಲಿ ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾದ ವತಿಯಿಂದ ಪರಂಪರೆಯಂತೆ ಪೂಜೆ ಸಮುದ್ರ ಪೂಜೆ ನೆರವೇರಿಸಲಾಯಿತು.
ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಯಿಗೆ ಬಜಾರ್, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡು ಹೊಯಿಗೆ, ಮೊಗವೀರ ಪಟ್ಣ ಸಭೆಗಳ ಒಳಪಟ್ಟ ಮೋಗವೀರರು ಕದ್ರಿಯ ಸುವರ್ಣ ಕದಳೀ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಿದರು.
ಇಂದು ಚಂದ್ರ ಗ್ರಹಣದ ಕಾರಣ ಪೂಜಾ ವಿಧಿವಿದಾನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು. ಸಂಪ್ರದಾಯದಂತೆ ನೆರವೇರುತಿದ್ದ ವೈಭವದ ಮೆರವಣಿಗೆ ಕೈಬಿಟ್ಟು ನೇರವಾಗಿ ಸಮುದ್ರ ಪೂಜೆ ನೆರವೇರಿಸಲಾಯಿತು. ಬಳಿಕ ಹೊಸ ಉಲ್ಲಾಸ ಮತ್ತು ಆತ್ಮವಿಶ್ವಾಸದೊಂದಿಗೆ ಮೀನುಗಾರಿಕೆಗೆ ಕಡಲ ಮಕ್ಕಳು ತೆರಳಿರು.
ತಲತಲಾಂತರಗಳಿಂದ ಬಂದ ಸಂಪ್ರದಾಯ
ಮೀನುಗಾರಿಕೆಗಾಗಿ ಪ್ರತಿದಿನ ಕಡಲಿಗಿಳಿವುದು ಇಲ್ಲಿನ ಮೊಗವೀರರ ಕಾಯಕ. ಮೊಗವೀರರ ಸಮುದಾಯಗಳಲ್ಲಿ ಸಮುದ್ರ ಪೂಜೆಗೆ ಮೊದಲ ಸ್ಥಾನ. ಪ್ರತಿ ವರ್ಷ ಕಡಲಿಗೆ ನಮಿಸುವುದು ತಲತಲಾಂತರಗಳಿಂದ ಬಂದ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಕರಾವಳಿ ಪ್ರದೇಶದಲ್ಲಿದ್ದ ಮೀನುಗಾರರಿಗೆ ಫ್ರೆಂಚರು ಗುಂಪು ಗುಂಪಾಗಿ ಮೀನುಗಾರಿಕೆ ನಡೆಸುವ ಸಾಮೂಹಿಕ ಮೀನುಗಾರಿಕೆಯನ್ನು ಮೊದಲು ಪರಿಚಯಿಸಿದರು. ಈ ಕಾಯಕವನ್ನು ಅಂದಿನಿಂದ ಇಂದಿನ ವರೆಗೆ ಇಲ್ಲಿನ ಮೊಗವೀರ ಸಮುದಾಯ ಮೀನುಗಾರಿಕೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದೆ. ಮೊಗವೀರರು ಶ್ರಮಜೀವಿಗಳು ಜೀವ ಕೈಯಲ್ಲಿ ಹಿಡಿದು ಕಡಲಿಗೆ ಧುಮುಕುವ ಈ ಕಡಲ ಮಕ್ಕಳು ಕಡಲಿನ ಆಳೆತ್ತರದ ಅಲೆಗಳೊಂದಿಗೆ ಹೋರಾಡಿ ಬಲೆ ಬೀಸಿ ಹಿಡಿದ ಮೀನುಗಳೊಂದಿಗೆ ತಡಿ ಸೇರುವ ನಂಬಿಕೆ ಅವರಿಗೆ ಇರುವುದಿಲ್ಲ. ಆದರೂ ಹಿಂದಿರುಗುವ ವಿಶ್ವಾಸದೊಂದಿಗೆ ಪ್ರತಿದಿನ ಕಡಲಿಗಿಳಿವುದು ಮೊಗವೀರರ ಕಾಯಕ .
ಮೋಗವಿರರಿಂದ ಸಮುದ್ರ ಪೂಜೆ
ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲು ಪ್ರಕ್ಷುಬ್ಧ ವಾಗುತ್ತದೆ. ಕಡಲ ರೌದ್ರ ನರ್ತನ ಆರಂಭಗೊಳ್ಳುತ್ತಿದ್ದಂತೆ ಕಡಲ ಮಕ್ಕಳ ಮೀನುಗಾರಿಕೆ ರಜೆ ಆರಂಭವಾಗುತ್ತದೆ. ಹಿಂದೆ 3 ತಿಂಗಳ ಮೀನುಗಾರಿಕೆ ರಜೆ ಇತ್ತು. ಆದರೆ, ಈಗ 45 ದಿನಗಳ ಮೀನುಗಾರಿಕಾ ರಜೆ ನೀಡಲಾಗಿದೆ. ಮೀನುಗಾರಿಕಾ ರಜೆ ಮುಗಿದ ಬಳಿಕ ಪ್ರಕ್ಷುಬ್ಧಗೊಂಡಿರುವ ಸಮುದ್ರ ರಾಜನನ್ನು ಶಾಂತಗೊಳಿಸಲು ಸಮುದ್ರ ಪೂಜೆ ಮಾಡಲಾಗುತ್ತದೆ. ಈ ಸಮುದ್ರ ಪೂಜೆಯಲ್ಲಿ ಎಲ್ಲಾ ಮೊಗವೀರ ಬಾಂಧವರು ಪಾಲ್ಗೊಳ್ಳುತ್ತಾರೆ.
ಕದ್ರಿ ದೇವಾಲಯದಿಂದ ಮೆರವಣಿಗೆ
ಪ್ರಮುಂಜಾನೆ ಸೂರ್ಯೋದಯದ ನಂತರ ಮೊಗವೀರ ಪಟ್ಟಣದ ಹಿರಿಯರು ಸುವರ್ಣ ಕದಳೀ ಮಠಕ್ಕೆ ತೆರಳಿ ಮಠದ ಮಠಾಧಿಪತಿಯವರನ್ನು ಸಮುದ್ರ ಪೂಜೆಗೆ ಆಹ್ವಾನಿಸುತ್ತಾರೆ. ಕದ್ರಿ ದೇವಾಲಯದಿಂದ ಮೆರವಣಿಗೆಯಲ್ಲಿ ಸ್ವಾಮೀಜಿಯವರನ್ನು ಕರೆತಂದು ಬೊಕ್ಕ ಪಟ್ಟಣದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ದೋಣಿಯ ಮೂಲಕ ಶೋಭಾಯಾತ್ರೆ ನಡೆದು ಸ್ವಾಮೀಜಿ ಅವರನ್ನು ಪೂಜೆ ನಡೆಯುವ ತಣ್ಣೀರುಬಾವಿ ಸಮುದ್ರ ಕಿನಾರೆಗೆ ಕರೆತರಲಾಗುತ್ತದೆ.
ಕಡಲ ಮಕ್ಕಳ ಸಂಭ್ರಮ
ಕಡಲ ಮಕ್ಕಳಿಗೆ ನೂಲ ಹುಣ್ಣಿಮೆ ಬಂತೆಂದರೆ ಸಾಕು ಸಮುದ್ರ ಪೂಜೆಯ ದಿನ ಸಂಭ್ರಮವೋ ಸಂಭ್ರಮ. ಕಡಲನ್ನು ನಂಬಿ ಬದುಕುವವರು ಈ ಮೀನುಗಾರರು .. ಮಳೆಗಾಲದಲ್ಲಿ ರೌದ್ರಾವತಾರ ತಾಳುವ ಸಮುದ್ರ ರಾಜನನ್ನು ತಣಿಸಲು ಸಾವಿರಾರು ಕುಟುಂಬಗಳು ಇಂದಿನ ದಿನ ಸಮುದ್ರ ರಾಜನ ಒಡಲನ್ನು ತಣಿಸಲು ಹಾಲು ತೆಂಗಿನ ಕಾಯಿಯನ್ನು ಅರ್ಪಿಸುತ್ತಾರೆ. ಮೀನುಗಾರಿಕಾ ಋತು ಆರಂಭವಾಗುವ ಮೊದಲು ಸಮುದ್ರ ರಾಜನಿಗೆ ಸಲ್ಲಿಸುವ ಈ ಪೂಜೆಯಲ್ಲಿ ಕಡಲಲ್ಲಿ ಮತ್ಸ್ಯ ಸಂಪತ್ತನ್ನು ಹೆಚ್ಚಿಸಿ ಎಂದು ಪ್ರಾರ್ಥಿಸುತ್ತಾರೆ.