ಮಂಗಳೂರಿನಲ್ಲಿ ಮೀನಿನ ಅಭಾವ, ಗಗನಕ್ಕೇರಿದ ಮೀನಿನ ಬೆಲೆ
ಮಂಗಳೂರು ಜೂನ್ 25: ಕರಾವಳಿಯಲ್ಲಿ ಮಳೆಗಾಲದ ಮೀನುಗಾರಿಕಾ ರಜೆ ಜಾರಿಯಲ್ಲಿದೆ. ಯಾಂತ್ರಿಕ ಮೀನುಗಾರಿಕೆ ನಿಷೇಧ ಹಿನ್ನೆಲೆ, ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳಬೇಕಿತ್ತು. ಆದರೆ ನಾಡದೋಣಿ ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಪರಿಣಾಮ, ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವ ಹೊರ ರಾಜ್ಯದ ಮೀನಿನ ಬೆಲೆ ಗಗನಕ್ಕೆ ಏರಿದೆ.
ಕರಾವಳಿಯಲ್ಲಿ ಉತ್ತಮ ಮಳೆಯಾಗಿ, ಸಮುದ್ರದಲ್ಲಿ ತೂಫಾನ್ ಬಂದರೆ ನಾಡದೋಣಿ ಮೀನುಗಾರರಿಗೆ ಹಬ್ಬ. ಏಕೆಂದರೆ ಸಮುದ್ರದಲ್ಲಿ ತೂಫಾನ್ ಬಂದರೆ ಮೀನುಗಾರರಿಗೆ ಹೇರಳ ಮೀನು ಸಿಗುತ್ತದೆ. ಆದರೆ ಈ ಬಾರಿ ಇದುವರೆಗೂ ಸರಿಯಾಗಿ ಪೂರ್ಣ ಪ್ರಮಾಣದಲ್ಲಿ ಮಳೆಯಾಗದ ಕಾರಣ ಸಮುದ್ರದಲ್ಲಿ ತೂಫಾನ್ ಎದ್ದಿಲ್ಲ. ಈ ಪರಿಣಾಮ ನಾಡದೋಣಿಗಳು ಕಡಲಿಗಿಳಿದಿಲ್ಲ.
ಕರಾವಳಿಯಲ್ಲಿ ಇನ್ನೂ ಕಡಲಿಗಿಳಿಯದ ನಾಡದೋಣಿಗಳು
ನಾಡ ದೋಣಿಗಳು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದ ಕಾರಣ ಮಾರುಕಟ್ಟೆಯಲ್ಲಿ ಮೀನಿನ ಅಭಾವ ಸೃಷ್ಟಿಯಾಗಿದೆ. ಈ ನಡುವೆ ಮೀನು ವ್ಯಾಪಾರಿಗಳು ಹೊರರಾಜ್ಯದಿಂದ ಮೀನುಗಳನ್ನು ತರಿಸಿ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಮಂಗಳೂರು ಬಂದರಿನಲ್ಲಿ ಆಂಧ್ರಪ್ರದೇಶ ಮತ್ತು ಚೆನ್ನೈಯಿಂದ ಬಂಗುಡೆ, ಬೂತಾಯಿ, ಮಡಂಗು, ರೆಬ್ಟಾಯಿ ಮೀನು ಸರಬರಾಜು ಆಗುತ್ತಿದೆ. ಅವುಗಳ ಬೆಲೆಯೂ ಗಗನಕ್ಕೆ ಏರಿದೆ. ಬಂಗುಡೆ ಕೆಜಿಗೆ 180 ರೂಪಾಯಿ, ಬೂತಾಯಿ 110 ರೂಪಾಯಿಗೆ ಮಾರಾಟವಾಗುತ್ತಿದೆ.
ಫ್ರೀಜರ್ ನಲ್ಲಿಟ್ಟ ಪ್ಯಾಕೆಟ್ ಮೀನಿಗೂ ಭಾರೀ ಬೇಡಿಕೆ ಇದೆ. ಬಂಗುಡೆ ಕೆಜಿಗೆ 200 ರೂಪಾಯಿ, ಡಿಸ್ಕೋ ಮೀನು 150 ರೂಪಾಯಿ, ಕಲ್ಲೂರು 200 ರೂಪಾಯಿ, ದೊಡ್ಡ ಸಿಗಡಿ ಮೀನಿಗೆ ಪ್ಯಾಕೆಟಿಗೆ 350 ರೂಪಾಯಿ, ಸಣ್ಣ ಪ್ಯಾಕೆಟ್ ಗೆ 250 ರೂಪಾಯಿ ಬೆಲೆ ಇದೆ.