ಶತಮಾನದ ಮೊದಲ ಮಹಾಯಾಗಕ್ಕೆ ಮಂಗಳೂರು ಸಾಕ್ಷಿ
ಮಂಗಳೂರು, ಅ 12: ನಾಡಿನೆಲ್ಲಡೆ ನವರಾತ್ರಿ ಹಬ್ಬದ ಸಂಭ್ರಮ. ಈ ಶತಮಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಶಿ ಮಂಡಲ ಪೂಜೆ ಮತ್ತು ನಕ್ಷತ್ರ ಯಾಗಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ದುರ್ಗಾಷ್ಠಮಿಯ ಪುಣ್ಯದಿನವಾದ ಇಂದು (ಶನಿವಾರ ಅ 12) ಈ ಮಹಾಯಾಗದ ಪೂರ್ಣಾಹುತಿ ಕಾರ್ಯಕ್ರಮ ಸಂಪನ್ನಗೊಂಡಿದೆ.
ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇವಾಲಯದ ಆಚಾರ್ಯ ಮಠದ ಆವರಣದಲ್ಲಿ ಶ್ರೀ ನರಸಿಂಹ ಆಚಾರ್ಯರ ನೇತೃತ್ವದಲ್ಲಿ 91ನೇ ಸಾರ್ವಜನಿಕ ಶ್ರೀಶಾರದಾ ಮಹೋತ್ಸವದ ಅಂಗವಾಗಿ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ.
ನೂರು ವೈದಿಕರು ಸೇರಿ ನಡೆಸಿ ಕೊಡುತ್ತಿರುವ ಈ ಮಹಾಯಾಗ ಶುಕ್ರವಾರ ಪ್ರಾತಃ 4.30ಕ್ಕೆ ಆರಂಭವಾಯಿತು. ಅಹರ್ನಿಶಿ ನಡೆಯುತ್ತಿರುವ ಈ ಮಹಾಯಾಗದ ಪೂರ್ಣಾಹುತಿ ಧಾರ್ಮಿಕ ಕಾರ್ಯಕ್ರಮ ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಮುಕ್ತಾಯಗೊಂಡಿದೆ. ಮಧ್ಯಾಹ್ನ 1 ಗಂಟೆಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಶೃಂಗೇರಿಯಲ್ಲಿನ ಶಾರದಾಂಬೆ, ಮೈಸೂರು ಚಾಮುಂಡಿ ಆರಾಧನೆಯನ್ನು ನಾಡಹಬ್ಬ ಎನ್ನುವಂತೆ, ಈ ಎರಡೂ ಶಾರದೋತ್ಸವಕ್ಕೆ ಮಂಗಳೂರು ಶಾರದಾ ಮಹೋತ್ಸವ ಪ್ರೇರಣಾ ಶಕ್ತಿ ಎಂದು ಹೇಳಬಹುದಾಗಿದೆ.
ಮಂಗಳೂರು ಶಾರದೆಯ ಬಗ್ಗೆ
ಮಂಗಳೂರು ಶಾರದೆ
ಮಂಗಳೂರು ರಥಬೀದಿಯಲ್ಲಿರುವ ವೆಂಕಟರಮಣ ದೇವಾಲಯದ ಶಾರದಾ ಮೂರ್ತಿಯು ಸುಮಾರು ಆರು ಅಡಿಯಷ್ಟು ಎತ್ತರವಿದ್ದು. ನವರಾತ್ರಿಯ ಮೂಲಾ ನಕ್ಷತ್ರದ ದಿನದಂದು ಪ್ರತಿಷ್ಠೆಯಾಗುತ್ತದೆ. ಶ್ರವಣ ನಕ್ಷತ್ರದ ಅಂತ್ಯದಲ್ಲಿ ವಿಸರ್ಜನಾ ಮಹೋತ್ಸವ ವಿಧಿ ವಿಧಾನಗಳೊಂದಿಗೆ ಪೂರ್ಣಗೊಳ್ಳುತ್ತದೆ. (ಚಿತ್ರ: ಮಂಜು ನೀರೇಶ್ವಾಲ್ಯ)
ಕಳೆದ ಶಾರದಾ ಪೂಜೆ
ಕಳೆದ ವರ್ಷ ನಡೆದ 90ನೇ ವರ್ಷಾಚರಣೆಯ ಸಂದರ್ಭದಲ್ಲಿ ಶ್ರೀಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಆಗಮನ ಹಾಗೂ ಶ್ರೀಮಾತೆಗೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಕಿರೀಟ ಸಮರ್ಪಿಸಲಾಯಿತು. ನೂರಾರು ಮಕ್ಕಳಿಗೆ ವಿದ್ಯಾರಂಭ ಸಂಸ್ಕಾರ ನಡೆಸಲಾಗಿತ್ತು. (ಚಿತ್ರ: ಮಂಜು ನೀರೇಶ್ವಾಲ್ಯ)
ಸಾಂಸ್ಕ್ರುತಿಕ ಕಲಾಮಂಟಪ
ಇಲ್ಲಿನ ಸಾಂಸ್ಕ್ರುತಿಕ ಕಲಾಮಂಟಪದಲ್ಲಿ ಸಂಗೀತ, ನೃತ್ಯ, ನಾಟಕ, ವಿವಿಧ ಕಲಾ ಪ್ರದರ್ಶನವನ್ನು ಮಹೋತ್ಸವದ ಆಯೋಜಕರು ನಡೆಸುತ್ತಾ ಬಂದಿದ್ದಾರೆ. ಸಣ್ಣ ಸಣ್ಣ ಕಲಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಸ್ಪೂರ್ತಿಯ ಕೇಂದ್ರವಾಗಿದೆ. (ಚಿತ್ರ: ಮಂಜು ನೀರೇಶ್ವಾಲ್ಯ)
ಶೋಭಾ ಯಾತ್ರೆ
ಇದೇ ಬರುವ ಅಕ್ಟೋಬರ್ 15ರ ಮಂಗಳವಾರ ಸಂಜೆ ಐದು ಗಂಟೆಗೆ ಶ್ರೀಶಾರದಾ ಮಾತೆಯ ವಿಸರ್ಜನಾ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಅರ್ಪಿಸಿದ ಪುಷ್ಫ, ಚಿನ್ನ, ವಜ್ರಗಳಿಂದ ಅಲಂಕೃತಗೊಂಡ ಮಾತೆ, ಚೆಂಡೆವಾದನ, ಭಜನೆ ಸೇವೆ, ಸೇವೆ ರೂಪದ ವೇಷದಾರಿಗಳು, ವಾದ್ಯವೃಂದದ ಜೊತೆ ಶೋಭಾ ಯಾತ್ರೆ ಸಂಪನ್ನಗೊಳ್ಳಲಿದೆ. ಶ್ರೀಮಹಾಮಾಯಾ ತೀರ್ಥದಲ್ಲಿ ಶ್ರೀಮಾತೆಯ ವಿಗ್ರಹದ ಜಲಸ್ತಂಭನ ನಡೆಯುತ್ತದೆ. (ಚಿತ್ರ: ಮಂಜು ನೀರೇಶ್ವಾಲ್ಯ)
ರಜತ ವೀಣೆ
ಶ್ರೀ ಶಾರದಾ ಮಹೋತ್ಸವದ 91ನೇ ವರ್ಷದ ಸವಿನೆನಪಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ವೀಣೆಯನ್ನು ಅಕ್ಟೋಬರ್ ಹತ್ತರಂದು ಸಮರ್ಪಿಸಲಾಗಿದೆ. (ಚಿತ್ರ: ಮಂಜು ನೀರೇಶ್ವಾಲ್ಯ)