ಕೊರೊನಾದಿಂದ ಹೊರಬಂದ ದ.ಕ.ಜಿಲ್ಲೆಯ ಮೊದಲ ಸೋಂಕಿತ
ಮಂಗಳೂರು, ಏಪ್ರಿಲ್ 06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಮೊದಲ ಕೊರೊನಾ ಪ್ರಕರಣ, ಭಟ್ಕಳ ಮೂಲದ ಯುವಕ ಗುಣಮುಖನಾಗಿದ್ದು, ಇಂದು ಆತನನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಭಟ್ಕಳ ಮೂಲದ 22 ವರ್ಷದ ಈ ಯುವಕ, ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ 19ರಂದು ಬಂದಿಳಿದಿದ್ದ. ಈ ವೇಳೆ ಪರೀಕ್ಷಿಸಿದಾಗ ಜ್ವರದ ಲಕ್ಷಣ ಕಂಡು ದಿದ್ದರಿಂದ ವಿಮಾನ ನಿಲ್ದಾಣದಿಂದ ಈತನನ್ನು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 22ರಂದು ಈತನ ಗಂಟಲಿನ ದ್ರವದ ಪ್ರಯೋಗಾಲಯದ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ದಾಖಲಾದಂತಾಗಿತ್ತು.
ಕೊರೊನಾ ಹೋರಾಟಕ್ಕೆ ಪಾಕೆಟ್ ಮನಿ ನೀಡಿದ ಮಂಗಳೂರಿನ ಪುಟಾಣಿ
ಇದೀಗ ಯುವಕ ಗುಣಮುಖನಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಪ್ರಯತ್ನವು ಫಲ ನೀಡಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಯುವಕ ಡಿಸ್ಚಾರ್ಜ್ ಆಗುವುದರೊಂದಿಗೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬೈರಿ ತಿಳಿಸಿದ್ದಾರೆ. ಇತರ ಎಲ್ಲ ರೋಗಿಗಳು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೆನ್ಲಾಕ್ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚು ವೈದ್ಯರು ಮತ್ತು 30ಕ್ಕೂ ಹೆಚ್ಚು ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.