ಡೆಂಗ್ಯೂ ಆಯ್ತು, ಈಗ ಮಂಗಳೂರಿನಲ್ಲಿ ಫೈಲೇರಿಯಾ ಭೀತಿ
ಮಂಗಳೂರು ಆಗಸ್ಟ್ 3: ಡೆಂಗ್ಯೂ ಹಾವಳಿಯಿಂದ ತತ್ತರಿಸಿದ್ದ ಮಂಗಳೂರಿನಲ್ಲಿ ಈಗ ಫೈಲೇರಿಯಾ ಭೀತಿ ಶುರುವಾಗಿದೆ. ಡೆಂಗ್ಯೂದಿಂದ ತತ್ತರಿಸಿದ್ದ ನಗದರ ಗುಜ್ಜರಕೆರೆ ನಿವಾಸಿಗಳಿಗೀಗ ಫೈಲೇರಿಯಾ ಭೀತಿ ಎದುರಾಗಿದ್ದು, ಕೆರೆಯಲ್ಲಿ ಉತ್ಪತ್ತಿಯಾಗುತ್ತಿರುವ ಕ್ಯುಲೆಕ್ಸ್ ಸೊಳ್ಳೆ ಮನುಷ್ಯನಿಗೆ ಹಲವು ಬಾರಿ ಕಚ್ಚಿದರೆ ಫೈಲೇರಿಯಾ ರೋಗ ಬರುತ್ತೆ ಎಂಬ ಆತಂಕ ಕಾಡತೊಡಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸದ್ಯಕ್ಕೆ ಡೆಂಗ್ಯೂಯಿಂದ ರಿಲ್ಯಾಕ್ಸ್
ನಗರದ ಗುಜ್ಜರಕೆರೆಯ ಸುತ್ತಲೂ ಇರುವ ಪ್ರದೇಶದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾದಾಗ ಗುಜ್ಜರಕೆರೆಯಲ್ಲಿ ತುಂಬಿರುವ ತ್ಯಾಜ್ಯ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಆದರೆ ಗುಜ್ಜರಕೆರೆಯಿಂದ ಡೆಂಗ್ಯು ಹರಡಿದ್ದಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಮಂಗಳೂರಿನ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಜಿಲ್ಲಾಧಿಕಾರಿ ಜೊತೆಗೆ ನಡೆಸಿದ ಸಭೆಯ ವೇಳೆ ವಿಚಾರ ಸ್ಪಷ್ಟವಾಗಿದೆ. ಗುಜ್ಜರಕೆರೆಯಲ್ಲಿನ ನೀರನ್ನು ಪರಿಶೀಲಿಸಿದಾಗ ಅಲ್ಲಿ ಡೆಂಗ್ಯು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆ ಇಲ್ಲ ಎಂದು ಗಮನಕ್ಕೆ ಬಂದಿದೆ. ಆದರೆ ಫೈಲೇರಿಯಾ ರೋಗಕ್ಕೆ ಕಾರಣವಾಗುವ ಕ್ಯುಲೆಕ್ಸ್ ಸೊಳ್ಳೆ ಅಲ್ಲಿ ಸೃಷ್ಟಿಯಾಗಿದೆ. ಆ ಸೊಳ್ಳೆ ಒಂದು ವ್ಯಕ್ತಿಗೆ ಹಲವು ಬಾರಿ ಕಚ್ಚಿದರೆ ಫೈಲೇರಿಯಾ ಬರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.