ದಕ್ಷಿಣ ಕನ್ನಡ ಜಿಲ್ಲೆಗೂ ಹಬ್ಬಿದ ಮಂಗನಕಾಯಿಲೆಯ ಭೀತಿ
ಮಂಗಳೂರು, ಜನವರಿ 10: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ಮಲೆನಾಡಿನ ಅಂಚಿನಲ್ಲಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲ ಭಾಗಗಳಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದೆ.
ಕಾಡಿನಲ್ಲಿ ಮಂಗಗಳು ಸತ್ತಿರುವುದು ಪತ್ತೆಯಾದರೆ ತಕ್ಷಣ ಅರಣ್ಯ, ಪಶು ಸಂಗೋಪನೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಮಂಗನ ಕಾಯಿಲೆ ಸಂಬಂಧಿಸಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಲೆನಾಡಿನ ತಪ್ಪಲಿನಲ್ಲಿರುವ ಹಳ್ಳಿಗಳಲ್ಲಿ ಇದಕ್ಕಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳೂರಿನ ಎ.ಜೆ. ಆಸ್ಪತ್ರೆ, ಫಾದರ್ ಮುಲ್ಲರ್ ಮತ್ತು ವೆನ್ಲಾಕ್ ನಲ್ಲಿ ತಲಾ ಒಬ್ಬರು ಶಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದು ಮಂಗನ ಕಾಯಿಲೆ ಎನ್ನುವುದು ಇನ್ನು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಸ್ಪಷ್ಟಪಡಿಸಿದ್ದಾರೆ.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಕಾಡಿಗೆ ಹೋಗುವಾಗ ಜಾಗೃತೆವಹಿಸಿ
ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಂಗನ ಕಾಯಿಲೆ ಶಂಕಿತ ರೋಗಿಗಳು ಚಿಕಿತ್ಸೆ ಪಡೆದರೆ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ರವಾನಿಸಲಾಗಿದೆ. ಮಂಗನ ಕಾಯಿಲೆ ಉಣಗು ಹುಳುಗಳಿಂದ ಹರಡುವುದರಿಂದ ಕಾಡಂಚಿನ ಮಂದಿ, ಕಾಡು ಪ್ರವೇಶಿಸುವ ಸಂದರ್ಭದಲ್ಲಿ ಜಾಗೃತೆವಹಿಸುವಂತೆ ತಿಳಿಸಲಾಗಿದೆ. ಎಮ್ಮೆ, ಆಕಳು ಮುಂತಾದ ಸಾಕು ಪ್ರಾಣಿಗಳನ್ನು ಕಾಡಿಗೆ ಬಿಡುವುದನ್ನು, ಜೇನು ಮತ್ತು ಇನ್ನಿತರ ಕಾಡುತ್ಪತ್ತಿಗಳನ್ನು ಸಂಗ್ರಹಿಸುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಸೂಚನೆ ರವಾನಿಸಲಾಗಿದೆ.
ಶಿವಮೊಗ್ಗ : ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ
ಬಿಸಿ ನೀರಿನಲ್ಲಿ ತೊಳೆಯಬೇಕು
ಕಾಡಿಗೆ ಹೋಗುವುದಾದರೆ ಉಣ್ಣಿ ನಿರೋಧಕ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು. ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನಲ್ಲಿ ಸಾಬೂನು ಹಚ್ಚಿ ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು ಎಂದು ಮಾಹಿತಿ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಮಂಗನ ಕಾಯಿಲೆ ಪ್ರಕರಣ
ಮಂಗನ ಕಾಯಿಲೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2004-05ರಲ್ಲಿ 3, 2005-06ರಲ್ಲಿ 17, 2006-07ರಲ್ಲಿ 54, 2014-15ರಲ್ಲಿ 1 ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದೆ. 2005-06, 2006-07 ಹಾಗೂ 2014-15ರಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಆರೋಗ್ಯ ಕೇಂದ್ರ ಸಂಪರ್ಕಿಸಿ
ಮಂಗನ ಕಾಯಿಲೆಯ ಲಕ್ಷಣಗಳೆಂದರೆ 8-10 ದಿನ ಬಿಡದೆ ಕಾಡುವ ವಿಪರೀತ ಜ್ವರ, ತಲೆನೋವು, ಕೈಕಾಲು ನೋವು, ಸೊಂಟ ನೋವು, ವಿಪರೀತ ನಿಶ್ಯಕ್ತಿ, ಅತಿಯಾದ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ. ಜ್ವರ ಬಂದ ಎರಡು ವಾರಗಳ ಬಳಿಕ ಮೂಗು, ಬಾಯಿ ಮತ್ತು ಗುದದ್ವಾರದಿಂದ ರಕ್ತಸ್ರಾವ ಆಗುತ್ತದೆ. ಯಾವುದೇ ಲಕ್ಷಣ ಕಾಣಿಸಿಕೊಂಡರೂ ನಿರ್ಲಕ್ಷ್ಯ ಮಾಡದೇ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.