ಗೋವುಗಳ ಅಕ್ರಮ ಸಾಗಾಟದ ವಿರುದ್ಧ ಫತ್ವಾಗೆ ಆಗ್ರಹ
ಮಂಗಳೂರು, ಜೂನ್ 12: ಗೋವುಗಳ ಅಕ್ರಮ ಸಾಗಾಟಗಾರರ ವಿರುದ್ಧ ಮುಸ್ಲಿಂ ಸಂಘಟನೆಗಳು ತಿರುಗಿಬಿದ್ದಿವೆ. ಜಾನುವಾರುಗಳ ಅಕ್ರಮ ಸಾಗಾಟದ ವಿರುದ್ಧ ಫತ್ವಾ ಹೊರಡಿಸುವಂತೆ ಮುಸ್ಲಿಂ ಧಾರ್ಮಿಕ ಗುರುಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಆಗ್ರಹಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದರೆ, ಮುಸ್ಲಿಂ ಸಮುದಾಯ ಬೆಂಬಲಿಸಲಿದೆ ಎಂದಿರುವ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಗೋಮಾಂಸ ಭಕ್ಷಣೆ ಮುಸ್ಲಿಂ ಸಮುದಾಯದ ಕಡ್ಡಾಯ ಆಹಾರ ಪದ್ಧತಿ ಅಲ್ಲ, ಅಕ್ರಮವಾಗಿ ಗೋ ಸಾಗಾಟ, ಮಾರಾಟಕ್ಕೆ ಮುಸ್ಲಿಮರ ವಿರೋಧವಿದೆ ಎಂದು ತಿಳಿಸಿದ್ದಾರೆ.
ಗೋವುಗಳ ಅಕ್ರಮ ಸಾಗಾಟಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ
ಅಕ್ರಮ ಸಾಗಾಟದ ಜಾನುವಾರು ಮಾಂಸ ಬಳಕೆ ಮಾಡದಂತೆ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಜಾನುವಾರು ಅಕ್ರಮ ಸಾಗಾಟ ಮಾಡದಿರುವಂತೆ ಫತ್ವಾ ಹೊರಡಿಸಲು ಧಾರ್ಮಿಕ ಗುರುಗಳಲ್ಲಿ ಮನವಿ ಮಾಡಲು ಮುಸ್ಲಿಂ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಇಸ್ಲಾಮ್ ಧರ್ಮದಲ್ಲಿ ಅಕ್ರಮ ಹಾಗೂ ಕಳ್ಳತನಕ್ಕೆ ಅವಕಾಶ ಇಲ್ಲ. ಆದ್ದರಿಂದ ಯಾವುದೇ ಪ್ರಾಣಿಗಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಿಸಿ, ಹತ್ಯೆ ಮಾಡುವುದು ಧರ್ಮ ವಿರೋಧಿ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಬೇಕಲ್ ಅವರ ಹೇಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಮೊದಲು ಬೆಂಬಲ ಸೂಚಿಸಿತ್ತು. ಈಗ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಗೋವುಗಳ ಅಕ್ರಮ ಸಾಗಾಟಗಾರರ ವಿರುದ್ಧ ದನಿ ಎತ್ತಿದೆ.