ಬಂಟ್ವಾಳದಲ್ಲಿ ವಿದ್ಯುತ್ ತಂತಿ ತುಳಿದು ತಂದೆ, ಮಗಳ ಸಾವು
ಮಂಗಳೂರು, ಜೂನ್ 12: ವಿದ್ಯುತ್ ತಗುಲಿ ತಂದೆ ಮತ್ತು ಮಗಳು ಸಾವನ್ನಪ್ಪಿದ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ತೋಟದಲ್ಲಿ ಮುರಿದು ಬಿದ್ದಿದ್ದ ತಂತಿಯನ್ನು ಆಕಸ್ಮಿಕವಾಗಿ ತುಳಿದ ತಂದೆ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಜರಿ ವ್ಯಾಪಾರಿಗಳಿಂದ 83 ಕೋಟಿ ರೂಪಾಯಿ ಜಿಎಸ್ ಟಿ ವಂಚನೆ!
ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಬಾರಕಿನಡಿ ಎಂಬಲ್ಲಿ ಘಟನೆ ನಡೆದಿದ್ದು, ಮೃತರನ್ನು ಬಾರಕಿನಡಿ ನಿವಾಸಿಗಳಾದ ಗೋಪಾಲಕೃಷ್ಣ ಶೆಟ್ಟಿ (63) ಹಾಗು ಮಗಳು ದಿವ್ಯಾಶ್ರಿ (20) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಗೋಪಾಲಕೃಷ್ಣ ಶೆಟ್ಟಿ ತಮ್ಮ ಮಗಳೊಂದಿಗೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದರು. ಆ ವೇಳೆ ತೋಟದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ವಿದ್ಯುತ್ ಪ್ರವಹಿಸಿದ ಪರಿಣಾಮ ಇಬ್ಬರೂ ಸ್ಥಳಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಹಳೆಯದಾದ ತಂತಿಗಳನ್ನು ಮೆಸ್ಕಾಂ ಇಲಾಖೆ ಬದಲಿಸದೇ ಇರುವುದು ಈ ಘಟನೆಗೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ತಹಶೀಲ್ದಾರ್ ರಶ್ಮಿ ಎಸ್ ಆರ್ ಸೇರಿದಂತೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.