ಮಂಗಳೂರು ಶಿಕ್ಷಣ ತರಬೇತಿ ಕೇಂದ್ರಕ್ಕೆ ನುಗ್ಗಿ ತಲ್ವಾರ್ ಬೀಸಿದ ಹಳೇ ವಿದ್ಯಾರ್ಥಿ
ಮಂಗಳೂರು, ಸೆಪ್ಟೆಂಬರ್ 20: ಮಂಗಳೂರಿನಲ್ಲಿ ಮಟಮಟ ಮಧ್ಯಾಹ್ನವೇ ತಲ್ವಾರ್ ಝಳಪಿಸಿದೆ. ಹಳೆಯ ದ್ವೇಷ ನೆನಪಾಗಿ, ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರಕ್ಕೆ ನುಗ್ಗಿದ ತರಬೇತಿ ಕೇಂದ್ರದ ಹಳೇ ವಿದ್ಯಾರ್ಥಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ಯದ್ವಾತದ್ವಾ ತಲ್ವಾರ್ ಬೀಸಿದ್ದಾನೆ.
ತಲ್ವಾರ್ ಬೀಸಿದ ಬಳಿಕ ತರಬೇತಿ ಕೇಂದ್ರದ ಒಳಗೆಯೇ ಕುರ್ಚಿಯಲ್ಲಿ ಕೂತು, ಬಂದ ಕೆಲಸ ಪೂರೈಸಿದಕ್ಕಾಗಿ ನಿಟ್ಟುಸಿರು ಬಿಟ್ಟಿದ್ದಾನೆ. ಗಿಫ್ಟ್ ಕೊಡುವುದಾಗಿ, ಬ್ಯಾಗ್ನಿಂದ ತಲ್ವಾರ್ ಎತ್ತಿದ ಆಸಾಮಿಯನ್ನು ಪೊಲೀಸರು ಬಂಧನ ಮಾಡಿದ್ದು, ವಿಚಾರಣೆ ವೇಳೆ ಆರೋಪಿಯ ವರ್ತನೆ ನೋಡಿ ಇದ್ಯಾವ ಮೆಂಟಲ್ ಗಿರಾಕಿಯಪ್ಪಾ ಅಂತಾ ಬೆಚ್ಚಿಬಿದ್ದಿದ್ದಾರೆ.
ಮಂಗಳೂರಿನ ಕರಂಗಲ್ಪಾಡಿ ಬಳಿಯ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸಿಬ್ಬಂದಿಗಳು ಕರ್ತವ್ಯದಲ್ಲಿ ನಿರತರಾಗಿದ್ದರು. ಮಧ್ಯಾಹ್ನ ಸುಮಾರು 12.45ರ ಹೊತ್ತಿಗೆ ತರಬೇತಿ ಕೇಂದ್ರದ ಒಳನುಗ್ಗಿದ್ದ ಅಪರಿಚಿತ ವ್ಯಕ್ತಿ, ವೀಣಾ ಎಂಬ ಶಿಕ್ಷಕಿ ಇದ್ದಾರಾ ಅಂತಾ ಕೇಳಿದ್ದಾನೆ. ಅಲ್ಲಿದ್ದ ಇತರ ಸಿಬ್ಬಂದಿ, ಅವರಿಲ್ಲ ಅವರು ರಜೆಯಲ್ಲಿದ್ದಾರೆ ಅಂತಾ ಹೇಳಿದ್ದಾರೆ.
ಈ ವೇಳೆ ಅವರಿಗೇನೋ ಗಿಫ್ಟ್ ಕೊಡುವುದಕ್ಕೆ ಇದೆ ಅಂತಾ ಬ್ಯಾಗ್ನಿಂದ ತಲ್ವಾರ್ ಎತ್ತಿದ ವ್ಯಕ್ತಿ ಅಲ್ಲಿದ್ದ ಮೂವರ ಮೇಲೆ ತಲ್ವಾರ್ ಬೀಸಿದ್ದಾನೆ. ಸ್ಟೆನೋಗ್ರಾಫರ್ ನಿರ್ಮಲಾ(43) ಎಂಬುವವರ ತಲೆ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಪ್ರಥಮ ದರ್ಜೆ ಸಹಾಯಕಿ ರೀನಾ ರಾಯ್(45), ಅಟೆಂಡರ್ ಗುಣವತಿ (58) ಮೇಲೆ ತಲ್ವಾರ್ನಿಂದ ದಾಳಿ ಮಾಡಿದ್ದು, ಆರೋಪಿಯ ದಾಳಿಯಿಂದ ಮಹಿಳೆಯರ ತಲೆ, ಕೈ, ಬೆನ್ನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಆರೋಪಿ ಕತ್ತಿ ಬೀಸಿದ್ದನ್ನು ಕಂಡು ಶಿಕ್ಷಣ ಕೇಂದ್ರದಲ್ಲಿದ್ದ ಇನ್ನೋರ್ವ ಮಹಿಳಾ ಸಿಬ್ಬಂದಿ ಓಡಿ ಹೊರಬಂದಿದ್ದು, ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಪಕ್ಕದಲ್ಲೇ ಮಂಗಳೂರು ಕೇಂದ್ರ ಕಾರಾಗೃಹವಿದ್ದು, ಜೈಲು ಸೆಕ್ಯೂರಿಟಿ ಮತ್ತು ಇತರ ಪೊಲೀಸರು ಆರೋಪಿಯನ್ನು ಹಿಡಿಯುವ ಸಲುವಾಗಿ ತರಬೇತಿ ಕೇಂದ್ರಕ್ಕೆ ನುಗ್ಗಿದಾಗ, ಮಹಿಳೆಯರು ರಕ್ತದ ಮಡುವಿನಲ್ಲಿದ್ದರೆ, ಆರೋಪಿ ಮಹಿಳೆಯರು ಎದುರು ಕುರ್ಚಿಯಲ್ಲಿ ಕೂತು ನಿಟ್ಟುಸಿರು ಬಿಡುತ್ತಿದ್ದ. ತನ್ನ ಕೆಲಸವಾಯಿತು ಅಂತಾ ಹೇಳಿದ್ದಾನೆ. ತಕ್ಷಣ ಆತನನ್ನು ಹಿಡಿದ ಜೈಲು ಸಿಬ್ಬಂದಿ ಆತನನ್ನು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರತ್ಯಕ್ಷದರ್ಶಿ ಸುಜಾತ, ಮಧ್ಯಾಹ್ನದ ಹೊತ್ತು ನಮ್ಮ ಕಚೇರಿಗೆ ಆ ವ್ಯಕ್ತಿ ನುಗ್ಗಿದ್ದ. ಸಾಮಾನ್ಯರಂತೇ ಬಂದು ಶಿಕ್ಷಕಿಯ ಹೆಸರನ್ನು ಕೇಳಿದ. ಅವರು ರಜೆಯಲ್ಲಿದ್ದಾರೆ ಎಂಬುದಾಗಿ ಇತರರು ಹೇಳಿದಾಗ, ಅವರಿಗೊಂದು ಗಿಫ್ಟ್ ಕೊಡುವುದಕ್ಕೆ ಇದೆ ಅಂತಾ ಬ್ಯಾಗ್ನಿಂದ ತಲ್ವಾರ್ ಎತ್ತಿದ್ದಾನೆ. ನೋಡ ನೋಡುತ್ತಿದ್ದಂತೆಯೇ ತಲ್ವಾರ್ನಿಂದ ದಾಳಿ ಮಾಡಿದ್ದಾನೆ. ಮೂವರ ಮೇಲೆ ದಾಳಿ ಮಾಡಿದ್ದು, ನಮ್ಮ ಕಡೆಯೂ ತಲ್ವಾರ್ ಬೀಸಿದ್ದಾನೆ. ಈ ಸಂಧರ್ಭದಲ್ಲಿ ಪೊಲೀಸರು ಬಂದು ಆತನನನ್ನು ಹಿಡಿದಿದ್ದಾರೆ. ಇಲ್ಲದಿದ್ದರೆ ನಮಗೂ ದಾಳಿ ಮಾಡುತ್ತಿದ್ದ ಅಂತಾ ಸುಜಾತ ಹೇಳಿದ್ದಾರೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಪೊಲೀಸ್ ಉಪ ಆಯುಕ್ತ ಹರಿರಾಂ ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡಿದಾಗ ಬೆಚ್ಚಿಬಿದ್ದಿದ್ದಾರೆ. ಆರೋಪಿ ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ 31 ವರ್ಷದ ನವೀನ್ ಅಂತಾ ಗುರುತಿಸಲಾಗಿದೆ. ಕುಂದಾಪುರ ನ್ಯಾಯಾಲಯದಲ್ಲಿ ಅಟೆಂಡರ್ ಆಗಿದ್ದ ನವೀನ್, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಳೆಯ ವಿದ್ಯಾರ್ಥಿಯಾಗಿದ್ದ ಅಂತಾ ತಿಳಿದುಬಂದಿದೆ.
ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದ ದ್ವೇಷವನ್ನು ತೀರಿಸಿಕೊಳ್ಳಲು ಮಚ್ಚು ಹಿಡಿದು ಒಳನುಗ್ಗಿದ್ದಾನೆ. ವೀಣಾ ಎಂಬ ಶಿಕ್ಷಕಿಯನ್ನು ಹುಡುಕಿಕೊಂಡು ಬಂದಿದ್ದು, ವೀಣಾ ಸಿಗದಿದ್ದಾಗ ಅದೇ ಸಿಟ್ಟಿನಿಂದ ಮೂವರ ಮೇಲೆ ದಾಳಿ ಮಾಡಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ನವೀನ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಪೊಲೀಸರ ಮತ್ತಷ್ಟು ವಿಚಾರಣೆ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.