ಅನಿವಾಸಿ ಭಾರತೀಯ ಉದ್ಯಮಿ ಸೈಯದ್ ಅಬ್ದುಲ್ ಖಾದರ್ ನಿಧನ
ಮಂಗಳೂರು, ಜುಲೈ 25: ಶಿರೂರು ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸೈಯದ್ ಅಬ್ದುಲ್ ಖಾದರ್ ಬಾಶು (54) ಸೋಮವಾರ ರಾತ್ರಿ ಹೃದಯಾಘಾತದಿಂದ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ದುಬೈಯ ಖ್ಯಾತ ಉದ್ಯಮಿಯಾಗಿ ಜನಪ್ರಿಯರಾಗಿದ್ದ ಬಾಶು, ತಮ್ಮ ಹುಟ್ಟೂರಾದ ಶಿರೂರಿನಲ್ಲಿ ಪ್ರತಿಷ್ಟಿತ ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಿದವರು. ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ರಾತ್ರಿ ತಂಗಿದ್ದ ಅವರು ಹಠಾತ್ ಹೃದಯಾಘಾತದಿಂದ ನಿಧನರಾಗಿರುವುದು ಮಂಗಳವಾರ ಬೆಳಗ್ಗೆ ತಿಳಿದುಬಂದಿದೆ.
ಇವರು ದುಬೈ ಹಾಗೂ ಕರಾವಳಿ ಕರ್ನಾಟಕದ ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳ ಪೋಷಕರಾಗಿದ್ದರು. ಜಾತಿ-ಮತ, ಧರ್ಮಗಳ ಭೇದವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು ಸೈಯದ್ ಅಬ್ದುಲ್ ಖಾದರ್.
ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಕೆಲವು ದಿನಗಳ ಹಿಂದೆ ಬಿಲ್ಡರ್ ಅಬ್ದುಲ್ ರವೂಫ್ ಪುತ್ತಿಗೆಯವರ ಪುತ್ರ ಫತೇ ಮುಹಮ್ಮದ್ ಪುತ್ತಿಗೆ ಹಾಗೂ 'ಗ್ರೀನ್ ವ್ಯಾಲಿ' ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯದ್ ಅಬ್ದುಲ್ ಖಾದರ್ ಬಾಶು ಅವರ ಪುತ್ರಿ ರಯ್ಯಾನ್ ಸೈಯದ್ ವಿವಾಹ ಸಮಾರಂಭ ನಡೆದಿತ್ತು. ಸಮಾರಂಭದಲ್ಲಿ ಕ್ರಿಕೆಟ್ ಆಟಗಾರ ಹರಭಜನ್ ಸಿಂಗ್ ಪಾಲ್ಗೊಂಡು ಆಕರ್ಷಣೆಯಾಗಿದ್ದರು.