ಬ್ಯಾರಿ ಆಂದೋಲನದ ರೂವಾರಿ ಅಬ್ದುಲ್ ರಹೀಮ್ ಮಂಗಳೂರಿನಲ್ಲಿ ನಿಧನ
ಮಂಗಳೂರು, ಫೆಬ್ರವರಿ 15: ಕರಾವಳಿಯ ಬ್ಯಾರಿ ಭಾಷೆಯ ಖ್ಯಾತ ಲೇಖಕ ಅಬ್ದುಲ್ ರಹೀಂ ಟಿ.ಕೆ.(65) ಇಂದು ಶುಕ್ರವಾರ ಮಂಗಳೂರಿನಲ್ಲಿ ನಿಧನರಾದರು. ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹೀಂ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಬ್ಯಾರಿ ಆಂದೋಲನದ ರೂವಾರಿ ಎಂದೇ ಹೇಳಲಾಗುತ್ತಿದ್ದ ಅಬ್ದುಲ್ ರಹೀಮ್ ಖ್ಯಾತ ಉದ್ಯಮಿ, ಕವಿ, ಲೇಖಕ, ಅನುವಾದಕರಾಗಿ ಗುರುತಿಸಿಕೊಂಡಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
2ನೇ ಮಹಾಯುದ್ಧದಲ್ಲಿ ಹೋರಾಡಿದ್ದ ಸುಬೇದಾರ್ ರುಕ್ಮಯ್ಯ ಬಂಗೇರಾ ನಿಧನ
ಟೀಕೇಸ್ ಕಾನ್ಸೆಪ್ಟ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಇವರು ಓರ್ವ ಹವ್ಯಾಸಿ ಕವಿ ಮತ್ತು ಲೇಖಕರಾಗಿದ್ದರು. ಸಮಾಜದ ಬಗ್ಗೆ ಕಳಕಳಿ ಇರುವ ಭಾವಜೀವಿಯಾಗಿದ್ದ ಇವರು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿದ್ದರು. ಬ್ಯಾರಿ ಭಾಷಾ ಆಂದೋಲನದಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
1998ರಲ್ಲಿ ಮಂಗಳೂರು ಪುರಭವನದಲ್ಲಿ ನೆರವೇರಿದ ಐತಿಹಾಸಿಕ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿದ್ದ ಅಬ್ದುಲ್ ರಹೀಮ್ ಆನಂತರ ಸ್ಥಾಪನೆಯಾದ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದವರು.
ಇವರ ಅವಧಿಯಲ್ಲಿ 1999ರಲ್ಲಿ ಬಂಟ್ವಾಳದ ನೇರಳ ಕಟ್ಟೆಯಲ್ಲಿ ಜರುಗಿದ 2ನೇ ಮತ್ತು 2001ರಲ್ಲಿ ಉಡುಪಿಯಲ್ಲಿ ನೆರವೇರಿದ 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ದೊರಕಿಸಿ ಕೊಡುವಲ್ಲಿ ಇವರ ಪ್ರಯತ್ನ ಅಪಾರ.
ಅಬ್ದುಲ್ ರಹೀಂ ಅವರು ಬ್ಯಾರಿ ಭಾಷೆಗೆ ಅನುವಾದಿಸಿದ ಮಮತಾ ಜಿ. ಸಾಗರ್ ಅವರ ಇಂಗ್ಲಿಷ್ - ಕನ್ನಡ ಕವನ ಫಾರ್ ಯು , 'ಹೈಡ್ ಅಂಡ್ ಸೀಕ್' ಎಂಬ ಇಂಗ್ಲಿಷ್ ಕವನ ಸಂಕಲನದಲ್ಲಿ ಪ್ರಕಟವಾಗಿ ಅಂತರ್ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ. ಆನಂತರ ಪ್ರಕಟಗೊಂಡ ಇವರ ಚೊಚ್ಚಲ ಬ್ಯಾರಿ ಕವನ ಸಂಕಲನ 'ಮಲ್ಲಿಗೆ ಬಲ್ಲಿ' ಬ್ಯಾರಿ ಸಾಹಿತ್ಯ ಲೋಕಕ್ಕೆ ಒಂದು ಅಫೂರ್ವ ಕೊಡುಗೆಯಾಗಿದೆ.
ತುಳುಭಾಷೆ, ಸಂಸ್ಕೃತಿಯ ಸಂಶೋಧಕ ಪ್ರೊ.ಪೀಟರ್ ಜೆ ಕ್ಲಾಸ್ ಇನ್ನಿಲ್ಲ
ಜಗತ್ಪ್ರಸಿದ್ಧ ಇಂಗ್ಲಿಷ್ ಲೇಖಕ 'ಪಾವ್ಲೊ ಕೊಯ್ಲೊ' ಅವರ 'ದಿ ಅಲ್ ಕೆಮಿಸ್ಟ್' ಇಂಗ್ಲಿಷ್ ಕಾದಂಬರಿಯನ್ನು ಮೂಲ ಲೇಖಕರ ಅಧಿಕೃತ ಅನುಮತಿಯನ್ನು ಪಡೆದು, 'ರಸವಾದಿ' ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಇವರು ಬರೆದ ವೈಚಾರಿಕ ಲೇಖನ, ವಿಮರ್ಶೆ, ಕತೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.