ಸುಳ್ಳು ಮೊಕದ್ದಮೆ ಆರೋಪ:ದೂರುದಾರ ರಾಘವೇಂದ್ರ ವಿರುದ್ಧ ಕಾಶಿ ಮಠದ ಭಕ್ತರಿಂದ ಖಂಡನೆ
ಮಂಗಳೂರು, ಮೇ 14:ಶ್ರೀ ಕಾಶಿ ಮಠದ ಸಂಯಮೀಂದ್ರ ತೀರ್ಥ ಸ್ವಾಮೀಜಿ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕಾಶಿ ಮಠದ 21ನೇ ಪೀಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಆರೋಪದ ದೂರು ದಾಖಲಾಗಿರುವ ವಿಚಾರ ಶ್ರೀ ಮಠದ ಗಮನಕ್ಕೆ ಬಂದಿರುತ್ತದೆ. ಇದು ಸ್ವಾಮೀಜಿಯವರ ಘನತೆಗೆ ಚ್ಯುತಿ ತರುವುದಕ್ಕೆ ಮತ್ತು ಅವಮಾನ ಮಾಡುವ ದುರುದ್ದೇಶದಿಂದ ದಾಖಲಾದ ಪ್ರಕರಣ ಎಂದು ಆರೋಪಿಸಲಾಗಿದೆ.
ಮಂಗಳೂರು: ಕಾಶಿ ಮಠದ ಮಠಾಧೀಶರ ವಿರುದ್ಧ ವಂಚನೆ ಪ್ರಕರಣ
ಶ್ರೀ ಮಠ ಹಾಗೂ ಭಕ್ತ ಸಮೂಹವು ಇದನ್ನು ತೀಕ್ಷ್ಣವಾಗಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಎಲ್ಲಾ ರೀತಿಯ ಹೋರಾಟವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಠದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಶ್ರೀ ಮಠ ಹಾಗೂ ಸಂಯಮೀಂದ್ರ ಸ್ವಾಮೀಜಿಯವರ ವಿರುದ್ಧ ನಡೆಸುತ್ತಿರುವ ಈ ಷಡ್ಯಂತ್ರದ ಬಗ್ಗೆ ಯಾರೂ ಕೂಡ ಯಾವುದೇ ಗೊಂದಲಕ್ಕೀಡಾಗಬೇಕಾಗಿಲ್ಲ. ಈ ಸಂಬಂಧ ಎಲ್ಲಾ ರೀತಿಯ ಪೂರಕ ದಾಖಲೆಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೂರುದಾರ ರಾಘವೇಂದ್ರ ಯಾರು?
1994ರಲ್ಲಿ 20ನೇ ಕಾಶಿ ಮಠಾಧೀಶರಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥರು ಈ ಪ್ರಕರಣದ ದೂರುದಾರ ರಾಘವೇಂದ್ರ ಅವರಿಗೆ ಕೆಲವು ಅಧಿಕಾರ, ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವಹಿಸಿದ್ದರು. ಅದನ್ನು ಅಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಶ್ರೀ ಮಠದ ಹಣವನ್ನು ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಿ 1999ರಲ್ಲಿ ಸಂಪೂರ್ಣವಾಗಿ ಶ್ರೀ ಮಠದಿಂದ ಬಿಡುಗಡೆಗೊಳಿಸಲಾಯಿತು.
ತಾನು ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಶ್ರೀ ಕಾಶಿ ಮಠಕ್ಕೆ ಸೇರಿದ 10 ಲಕ್ಷ ರೂ. ಠೇವಣಿಯನ್ನು ಕರ್ನಾಟಕ ಬ್ಯಾಂಕ್ ಸುರತ್ಕಲ್ ಶಾಖೆಯಲ್ಲಿ ದಿ.10, 1999ರಲ್ಲಿ ಠೇವಣಿ ಇಟ್ಟಿದ್ದು, ಈ ಮೊತ್ತವನ್ನು ಕಾನೂನು ಬಾಹಿರವಾಗಿ ತಮ್ಮ ಸ್ವಂತ ಹೆಸರಿನಲ್ಲಿ ಠೇವಣಿ ಇಟ್ಟ ಸಂದರ್ಭದಲ್ಲಿ ಆದಾಯ ಇಲಾಖೆ, ದೂರುದಾರರಿಗೆ ನೋಟಿಸ್ ಜಾರಿ ಮಾಡಿ ಠೇವಣಿ ಜಪ್ತಿ ಮಾಡಿತ್ತು.
ಆದಾಯದ ಮೂಲವನ್ನು ಪ್ರಶ್ನೆ ಮಾಡಿದ ಪ್ರಕಾರ ಈ ಸಂದರ್ಭದಲ್ಲಿ ಮಠದ ಲೆಕ್ಕ ಪರಿಶೋಧಕರು ಆಕ್ಷೇಪಪಡಿಸಿದ್ದು, ಸ್ವತಃ ದೂರುದಾರರಾದ ರಾಘವೇಂದ್ರ ಇದು ಕಾಶಿ ಮಠದ ಹಣವೆಂದು ಮತ್ತು ಕಾಶಿ ಮಠದ ಬ್ಯಾಲೆನ್ಸ್ ಶೀಟ್ ನಲ್ಲಿ ನಮೂದು ಆಗಿರುವುದೆಂದು ಹೇಳಿಕೆ ನೀಡಿ ಸ್ಪಷ್ಟೀಕರಣ ಕೂಡ ಕೊಟ್ಟಿರುತ್ತಾರೆ.
ಈ ಎಲ್ಲಾ ಅಂಶಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ, ಕಾನೂನು ಸಲಹೆ ಪಡೆದು ಇತ್ತೀಚೆಗೆ ಕರ್ನಾಟಕ ಬ್ಯಾಂಕ್ ಅಧಿಕಾರಿಗಳು ನವೀಕರಣಗೊಳಿಸಿರುವುದು ವಾಸ್ತವಿಕ ಸಂಗತಿ. ದೂರುದಾರ ರಾಘವೇಂದ್ರ ತಾನು ಕಾಶಿ ಮಠದ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಂಡು ನಕಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿಕೊಂಡು ಕಾಶಿ ಮಠದ ಹೆಸರು, ಲಾಂಛನ ಹಾಗೂ ಆಸ್ತಿ-ಪಾಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವುದು ಶ್ರೀ ಮಠದ ಗಮನಕ್ಕೆ ಬಂದಿದ್ದು, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಿ ದಾವೆ ದಾಖಲಿಸಿ ರಾಘವೇಂದ್ರ ಅವರ ವಿರುದ್ಧ ಪ್ರತಿಬಂಧಕ ಆಜ್ಞೆಯನ್ನು ಪಡೆಯಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ರೀತಿ ನಾನಾ ಕಡೆಗಳಲ್ಲಿ ತಾನು ಕಾಶಿ ಮಠದ ಮಠಾಧೀಶ ಎಂದು ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ದೂರು ಅರ್ಜಿ ಸಲ್ಲಿಸುತ್ತಿರುವುದು ಅತ್ಯಂತ ಖಂಡನೀಯ. ಈ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ, ಕಾನೂನು ರೀತಿಯಲ್ಲಿ ಹೋರಾಟ ಕೈಗೊಳ್ಳಲಾಗಿರುವುದು ಎಂದು ಜಿ.ಎಸ್.ಬಿ. ಟೆಂಪಲ್ ಅಸೋಸಿಯೇಶನ್ ಅಧ್ಯಕ್ಷರು, ಲೆಕ್ಕಪರಿಶೋಧಕರಾದ ಜಗನ್ನಾಥ್ ಕಾಮತ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.