ಮಂಗಳೂರಿನಲ್ಲಿ ಡೆಂಗ್ಯೂ ತಡೆಗೆ ಸಾಗಿದೆ ವ್ಯಾಪಕ ಜಾಗೃತಿ ಅಭಿಯಾನ
ಮಂಗಳೂರು, ಜುಲೈ 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಆತಂಕ ಸೃಷ್ಟಿಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಮತ್ತೆ 24 ಮಂದಿ ಜ್ವರ ಬಾಧಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 22 ಮಂದಿಯಲ್ಲಿ ಡೆಂಗ್ಯೂ ಜ್ವರ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಡೆಂಗ್ಯೂ ಬಾಧಿತರ ಸಂಖ್ಯೆ 426ಕ್ಕೆ ಏರಿದೆ.
ಹೀಗಾಗಿ ಮಂಗಳೂರಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ ರೋಗ ನಿಯಂತ್ರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆಂದೋಲನ ಹಮ್ಮಿಕೊಂಡಿದೆ.
ಡೆಂಗ್ಯೂ; ಚಿಕಿತ್ಸೆ ಫಲಿಸದೆ ಮಂಗಳೂರಿನಲ್ಲಿ ಪತ್ರಕರ್ತ ಸಾವು
ಡೆಂಗ್ಯೂ ಜ್ವರ ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ ಪ್ರದೇಶಗಳನ್ನು 'ಗ್ರಿಡ್ 1' ಪ್ರದೇಶ ಎಂದು ಪರಿಗಣಿಸಿ ವ್ಯವಸ್ಥಿತವಾಗಿ ಇಂತಹ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಗಿದೆ. ಈ ಕಾರ್ಯದಲ್ಲಿ 250ಕ್ಕೂ ಅಧಿಕ ಸಿಬ್ಬಂದಿ, ಸ್ವಯಂ ಸೇವಕರು, ಅಧಿಕಾರಿಗಳು ಭಾಗವಹಿಸಿದ್ದರು. ಮಂಗಳೂರು ನಗರದ ಗುಜ್ಜರಕೆರೆ, ಜೆಪ್ಪು, ಬೋಳಾರ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಒಟ್ಟು 71 ಸೊಳ್ಳೆ ತಾಣಗಳನ್ನು ನಿರ್ಮೂಲನೆ ಮಾಡಲಾಯಿತು.
ಸಾಂಕ್ರಾಮಿಕ ರೋಗಗಳ ಕಡಿವಾಣಕ್ಕೆ ಜಿಲ್ಲಾಡಳಿತ ಸಜ್ಜುಗೊಂಡಿದೆ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಈ ಎಲ್ಲ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದು, ಪ್ರತಿ ದಿನ ಸಂಜೆ ಈ ಸಂಬಂಧ ಸಭೆ ನಡೆಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ 441 ಡೆಂಗ್ಯೂ ಪ್ರಕರಣ; 5 ತಂಡಗಳಿಂದ ಕ್ಷಿಪ್ರ ಕಾರ್ಯಾಚರಣೆ
ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಂಡಗಳು ಡೆಂಗ್ಯೂ ಬಾಧಿತ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಳಿಪಡ್ಪು ಪ್ರದೇಶಗಳಿಗೆ ಭೇಟಿ ನೀಡಿ ರೋಗ ನಿಯಂತ್ರಣ, ಸೊಳ್ಳೆ ಉತ್ಪತ್ತಿ ತಾಣಗಳಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಿದೆ. ಅಲ್ಲದೆ, ಹಲವು ದಿನಗಳಿಂದ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದವರಿಗೆ ಸ್ಥಳದಲ್ಲೇ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 85 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.