ಅಡಿಕೆ ಬೆಂಬಲ ಬೆಲೆ ಅವಧಿ ಮತ್ತೆ ವಿಸ್ತರಣೆ : ಸಚಿವೆ ನಿರ್ಮಲಾ
ಮಂಗಳೂರು, ಜನವರಿ 12 : ಡಿಸೆಂಬರ್ 31ಕ್ಕೆ ಮುಕ್ತಾಯಗೊಂಡಿದ್ದ ಅಡಿಕೆಯ ಬೆಂಬಲ ಬೆಲೆ ಅವಧಿಯನ್ನು ಮತ್ತೆ ವಿಸ್ತರಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ 31ಕ್ಕೆ ಅಡಿಕೆಯ ಬೆಂಬಲ ಬೆಲೆಯ ಅವಧಿ ಮುಕ್ತಾಯಗೊಂಡಿತ್ತು. ರಾಜ್ಯ ಸರ್ಕಾರ ಗಮನ ಹರಿಸದ ಹಿನ್ನೆಲೆಯಲ್ಲಿ ಹೀಗಾಗಿದೆ.
ಬೆಂಬಲ ಬೆಲೆಯ ಅವಧಿಯನ್ನು ವಿಸ್ತರಿಸುವಂತೆ ಅಡಿಕೆ ಬೆಳೆಗಾರರು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಬೆಂಬಲ ಬೆಲೆ ಅವಧಿಯನ್ನು ವಿಸ್ತರಿಸಲಾಗುವುದು. ಆ ಅವಧಿ ಎಂದಿನವರೆಗೆ ಎನ್ನುವುದನ್ನು ಮುಂದೆ ತಿಳಿಸಲಾಗುವುದು ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಅಡಿಕೆಯನ್ನು 'ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ'ಯಡಿ ಖರೀದಿಸಲು ಕೇಂದ್ರ ಸರ್ಕಾರ ಡಿಸೆಂಬರ್ 8ರಂದು ಹಸಿರು ನಿಶಾನೆ ತೋರಿತ್ತು.
ಮಧ್ಯವರ್ತಿಗಳಿಗೆ ಅವಕಾಶ ನೀಡದೇ ರಾಜ್ಯದ ಅಡಿಕೆ ಮಾರಾಟ ಸಹಕಾರ ಸಂಘಗಳ ಮೂಲಕ ಖರೀದಿಸಲು ಅವಕಾಶ ಕಲ್ಪಿಸಿತ್ತು. ರಾಜ್ಯ ಸರ್ಕಾರಕ್ಕೆ ಖರೀದಿಯ ಮೇಲುಸ್ತುವಾರಿ ನೀಡಲಾಗಿತ್ತು.
ಕೆಂಪು ಅಡಿಕೆಗೆ ಕ್ವಿಂಟಲ್ ಗೆ 27 ಸಾವಿರ ರು ಹಾಗೂ ಚಾಲಿ ಅಡಿಕೆಗೆ 25,100 ರು ಬೆಂಬಲ ಬೆಲೆ ನಿಗದಿ ಮಾಡಿತ್ತು. ಅಡಿಕೆ ಖರೀದಿಗೆ ಡಿಸೆಂಬರ್ 31ರವರೆಗೆ ಮಾತ್ರ ಸಮಯ ನೀಡಿತ್ತು.
ಖರೀದಿ ಮಿತಿ 40 ಸಾವಿರ ಟನ್ಗೆ ನಿಗದಿ ಮಾಡಿತ್ತು. ಬೆಂಬಲ ಬೆಲೆ ಯೋಜನೆ ಅಡಿ ಅಡಿಕೆ ಖರೀದಿ ಪ್ರಮಾಣಕ್ಕೆ ಮಿತಿ ಹಾಕಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್ ಅಡಿಕೆ ಉತ್ಪಾದಿಸಲಾಗುತ್ತಿದೆ. ಆದರೆ, ಖರೀದಿಸಲು ಸೂಚಿಸಿರುವ ಪ್ರಮಾಣ ರಾಜ್ಯದಲ್ಲಿ ಬೆಳೆಯುವ ಅಡಿಕೆ ಶೇ.10ರಷ್ಟು ಮಾತ್ರ.