ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್
ಮಂಗಳೂರು, ಜನವರಿ 20: ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮದನ್ ಖಾಕಿ ಸಮವಸ್ತ್ರ ಕಳಚಿ ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಮದನ್ ಈಗಾಗಲೇ ಚುನಾವಣೆಯ ಪ್ರಚಾರ ಆರಂಭಿಸಿದ್ದಾರೆ.
ಮದನ್ ರಾಜಕೀಯ ಪ್ರವೇಶಿಸುತ್ತಿರುವ ನಿರ್ಧಾರವನ್ನು ಸ್ವಾಗತಿಸಿರುವ ಯುವ ಸಮುದಾಯ ಮದನ್ ಪರ ಪ್ರಚಾರ ಆರಂಭಿಸಿದೆ.
ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣಿಯಾಗಲು ಹೊರಟ ಮಂಗಳೂರಿನ ಮದನ್
ಮೂಲತಃ ಕೊಡಗಿನವರಾದ ಮದನ್ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಬಂದರು ಹಾಗು ನಂತರ ಬಜಪೆ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಮದನ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಯುವ ಜನಾಂಗದ ಕಣ್ಮಣಿ
ಮಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸದಾ ಸಾಮಾಜಿಕ ಕಳಕಳಿಯ ಕೆಲಸ ಮಾಡಿದ್ದ ಮದನ್ ಅವರನ್ನು ಇಷ್ಟಪಡುವ ಯುವಕರ ದಂಡೇ ಮಂಗಳೂರಿನಲ್ಲಿದೆ. ರಾಮಕೃಷ್ಣ ಮಿಷನ್ ಆರಂಭಿಸಿದ್ದ ಸ್ವಚ್ಛ ಮಂಗಳೂರು ಆಂದೋಲನದಲ್ಲಿ ಮದನ್ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಯುವ ಮನಸ್ಸುಗಳೊಂದಿಗೆ ಬೆರೆಯುತ್ತಿದ್ದ ಮದನ್ ಯುವ ಸಮೂಹದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ.
ಐ ಸಪೋರ್ಟ್ ಮದನ್
ಯುವಕರ ತಂಡಗಳು ಈಗಾಗಲೇ ಮಂಗಳೂರಿನಲ್ಲಿ ಮದನ್ ಪರ ಪ್ರಚಾರ ಆರಂಭಿಸಿವೆ. ವ್ಯವಸ್ಥೆಯ ಬದಲಾವಣೆಗಾಗಿ ಮದನ್ ಅವರನ್ನು ಬೆಂಬಲಿಸಿ ಎಂದು ಕರೆ ನೀಡಲಾಗುತ್ತಿದೆ. ಸ್ವಸ್ಥ ಮಂಗಳೂರಿಗಾಗಿ "ಐ ಸಪೋರ್ಟ್ ಮದನ್" ಎಂದು ಬರೆದಿರುವ ಫ್ಲೆಕ್ಸ್ ಗಳನ್ನು ಹೊತ್ತ ವಾಹನಗಳು ಮಂಗಳೂರಿನಲ್ಲಿ ಓಡಾಡುತ್ತಿವೆ.
ಬಿಜೆಪಿಯಿಂದ ಕಣಕ್ಕಿಳಿಯುವ ಇರಾದೆ
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಇರಾದೆಯನ್ನು ಮದನ್ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರೊಂದಿಗೆ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗಿದೆ.
ಲೋಬೋ - ಮದನ್ ಫೈಟ್?
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಕಾಂಗ್ರೆಸಿನ ಜೆ.ಆರ್. ಲೋಬೋ ಕೂಡ ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಲೋಬೋ ನಿವೃತ್ತಿ ಬಳಿಕ ಕಳೆದ ಬಾರಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದರು. ಈ ಬಾರಿಯೂ ಕಾಂಗ್ರೆಸ್ ನಿಂದ ಲೋಬೋ ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಬಿಜೆಪಿಯಲ್ಲಿ ಮದನ್ ಅಭ್ಯರ್ಥಿಯಾದರೆ ಚುನಾವಣೆಯ ಅಖಾಡದಲ್ಲಿ ಅಧಿಕಾರಿಗಳಿಬ್ಬರ ನಡುವಿನ ಫೈಟ್ ಕುತೂಹಲ ಕೆರಳಿಸಲಿದೆ.
ಬಿಜೆಪಿ ಟಿಕೆಟ್ ಸಿಗದಿದ್ದರೂ ಸ್ಪರ್ಧೆ
ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲು ಮದನ್ ಸಿದ್ದರಾಗಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಮದನ್ ಸ್ಪಷ್ಟ ಪಡಿಸಿದ್ದಾರೆ.