ಸ್ವರ್ಗದಂತಿರುವ ಮಂಗಳೂರಿನ ನಡುವೊಂದು ನರಕ
ಮಂಗಳೂರು, ಏಪ್ರಿಲ್ 07 : ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಮಂಗಳೂರು. ಶಿಕ್ಷಣ, ಆರೋಗ್ಯ, ಸಾಕ್ಷರತೆ, ಉದ್ಯಮ, ಮೀನುಗಾರಿಕೆ ಹೀಗೆ ಪ್ರತಿಕ್ಷೇತ್ರದಲ್ಲೂ ಮಂಗಳೂರು ಮುಂಚುಣಿಯಲ್ಲಿದೆ. ಸ್ವಚ್ಛತೆ ವಿಚಾರದಲ್ಲಿ ದೇಶದಲ್ಲೇ ಮಾದರಿಯೆನಿಸಿಕೊಂಡು ಬಯಲು ಶೌಚಮುಕ್ತ ನಗರ ಅನ್ನೋ ಪಟ್ಟ ಬೇರೆ ಪಡೆದುಕೊಂಡಿರೋ ನಗರ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಆದರೆ, ಇರಲು ಸೂರು ಮಾತ್ರವಲ್ಲ, ಎಲ್ಲಾ ರೀತಿಯ ಮೂಲಸೌಕರ್ಯಗಳಿಂದ ವಂಚಿತವಾಗಿರೋ ಕಾಲೋನಿಯೊಂದು ಮಂಗಳೂರಿನಲ್ಲಿದೆ ಎಂದರೆ ನೀವು ನಂಬುತ್ತೀರಾ? ಇದನ್ನು ನಂಬಲೇಬೇಕು. ಕಳೆದ 30 ವರ್ಷಗಳಿಂದ ಈ ಕಾಲೋನಿ ವಾಸಿಗಳು ದುಸ್ತರ ಜೀವನ ಸಾಗಿಸುತ್ತಿದ್ದು ಇಲ್ಲಿಯ ಜನರ ನರಕಮಯ ಬದುಕು ಸಾಗಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಈ ಕಾಲೂನಿ ಪ್ರವೇಶಿಸುತ್ತಿದ್ದಂತೆ ಹರಕಲು-ಮುರಕಲು ಜೋಪಡಿ. ಸ್ನಾನಕ್ಕೆ ಸರಿಯಾದ ಶೌಚ ಗೃಹಗಳಿಲ್ಲದ ಮನೆಗಳು ಗೋಚರಿಸುತ್ತವೆ. ಇಲ್ಲಿಯ ನಿವಾಸಿಗಳು ರಾತ್ರಿ ಹಗಲೆನ್ನದೇ ಶೌಚಕ್ಕೆ ಬಯಲನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.
ಇಲ್ಲಿಯ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಮನೆಗಳಿಗೆ ಯಾರೋ ದಾನಿಗಳು ನೀಡಿದ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲಾಗಿದೆ. ಆದರೆ, ಇಲ್ಲಿ ವಿದ್ಯುತ್ ದೀಪಗಳಿಲ್ಲದ ಹಿನ್ನೆಲೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ತೆರಳುವ ಮಕ್ಕಳು ಇಂದಿಗೂ ಕ್ಯಾಂಡಲ್, ಚಿಮಣಿ ದೀಪವನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ.
ಅಂದಹಾಗೆ ಇಂಹದೊಂದು ಮೂಲ ಸೌಕರ್ಯ ವಂಚಿತ ಕಾಲೋನಿ ಇರೋದು ಮಂಗಳೂರಿನ ಪಚ್ಚನಾಡಿ ಎಂಬಲ್ಲಿ. ಇಲ್ಲಿಯ ಡಂಪಿಂಗ್ ಯಾರ್ಡ್ ಮುಂಭಾಗದಲ್ಲಿರುವ ಎಸ್ ಸಿ, ಎಸ್ ಟಿ ಕಾಲೋನಿ ಪಕ್ಕದಲ್ಲಿ ಸುತ್ತಲೂ ಕೊಳಚೆ... ಗಬ್ಬೆದ್ದು ನಾರುವ ಪರಿಸರದ ನಡುವೆಯೇ ವಾಸಿಸುತ್ತಿರುವ ಈ ಜನರಿಗೆ ಇಂತಹ ದುರಂತಮಯ ಜೀವನ ಅನಿವಾರ್ಯವಾಗಿದೆ.
ಪಚ್ಚನಾಡಿಯ ಕಾರ್ಪೋರೇಟರ್ ಅಗಿರುವ ಕವಿತಾ ಸನಿಲ್ ಮೇಯರ್ ಆಗಿದ್ದ ಸಂದರ್ಭದಲ್ಲಿ ಬಯಲು ಶೌಚ ಮುಕ್ತ ನಗರ' ಎಂಬ ಪ್ರಶಸ್ತಿ ಪಾಲಿಕೆಗೆ ಸಿಕ್ಕಿದೆ. ಆದರೆ, ಕಳೆದ 30 ವರ್ಷಗಳಿಂದ ಇಲ್ಲಿಯ 15 ಕುಟುಂಬಗಳು ಇದೇ ಪರಿಸ್ಥಿತಿಯೊಂದಿಗೆ ಜೀವನ ಸಾಗಿಸುತ್ತಿರುವುದು ಮಾತ್ರ ಕಟುಸತ್ಯ.
ನೆಲೆಸಲು ಇಲ್ಲಿನ ಜನರಿಗೆ ಸರಿಯಾದ ಸೂರು ಇಲ್ಲದೇ ಇದ್ದರೂ ಕೂಡ ಕಾರ್ಪೋರೇಟರ್ ಕವಿತಾ ಸನಿಲ್ ನೇತೃತ್ವದಲ್ಲಿ ಇಲ್ಲಿ ಭರ್ಜರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಜನರಿಗೆ ರೇಷನ್ ಕಾರ್ಡ್, ವೋಟರ್ ಐಡಿ ಒದಗಿಸಲಾಗಿದ್ದು, ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಿವಾಸಿಗಳಾದ್ದರಿಂದ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಶಾಸಕ ಮೊಯ್ದೀನ್ ಬಾವಾ ಈ ಜನರಿಗೆ ವ್ಯವಸ್ಥೆ ಬೇರೆ ಮಾಡಿಕೊಟ್ಟಿದ್ದಾರೆ. ಆದರೆ, ಮನೆಯೇ ಇಲ್ಲವೆಂದ ಮೇಲೆ ಹಕ್ಕುಪತ್ರ ಎಲ್ಲಿಂದ? ಎಂಬ ಪ್ರಶ್ನೆ ಮೂಡುತ್ತದೆ. ಪ್ರತೀ ಬಾರಿ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಪೊಳ್ಳು ಭರವಸೆ ನೀಡುವ ಜನಪ್ರತಿನಿಧಿಗಳು, ಈ ಜನರ ವೋಟ್ ಪಡೆದುಕೊಂಡ ಬಳಿಕ ತಿರುಗಿಯೂ ಇವರನ್ನು ನೋಡುತ್ತಿಲ್ಲ ಎಂಬುದು ಇಲ್ಲಿಯ ಜನರ ಆಕ್ರೋಶ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ಕಾಲೋನಿ ನಿವಾಸಿಗಳ ನೆನಪಾಗುವ ಜನಪ್ರತಿನಿಧಿಗಳಿಗೆ ಈ ಜನರ ಮತ ಬೇಕೆ ಹೊರತು ಇಲ್ಲಿಯ ಜನರ ಜೀವನಮಟ್ಟ ಸುಧಾರಿಸುವ ಗೋಜಿಗೂ ಹೋಗುವುದಿಲ್ಲ. ಈಗ ಮತ್ತೆ ಚುನಾವಣೆ ಬಂದಿದೆ. ಮತ್ತೆ ಇಲ್ಲಿಗೆ ರಾಜಕೀಯ ಮುಖಂಡರುಗಳ ಪ್ರವೇಶ ವಾಗುತ್ತಿದೆ. ಈ ಬಾರಿಯಾದರೂ ತಾವು ಮತ ನೀಡುವ ಪಕ್ಷಗಳ ನೇತಾರರು ತಮಗೆ ಮೂಲಭೂತ ಸೌಕರ್ಯ ಒದಗಿಸುತ್ತಾರೆ ಎಂದು ಬಕ ಪಕ್ಷಿಗಳಂತೆ ಕಾತರದಿಂದ ಕಾಯುತ್ತಿವೆ ಇಲ್ಲಿಯ 15 ಕುಟುಂಬಗಳು.