ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಂಭ್ರಮ
ಮಂಗಳೂರು, ನ, 28 : ನಾಗಾರಾಧನೆಯ ಮೂಲಕೇಂದ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಗುರುವಾರ ಚಂಪಾಷಷ್ಠಿ ಸಂಭ್ರಮ. ವಾರ್ಷಿಕ ಬ್ರಹ್ಮರಥೋತ್ಸದಲ್ಲಿ ಸಾವಿರಾರು ಭಕ್ತರು ಭಾಗಹಿಸಿದ್ದರು.
ಬೆಳಗ್ಗೆ ಮಂಗಳವಾದ್ಯ, ವೇದಘೋಷ, ಬ್ಯಾಂಡ್, ಶಂಖ, ಜಾಗಟೆ, ಸ್ಯಾಕ್ಸೋಫೋನ್, ಚೆಂಡೆಗಳ ನಿನಾದದಲ್ಲಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣವಾಯಿತು. ಉಮಾಮಹೇಶ್ವರ ದೇವರನ್ನು ಪಂಚಮಿ ರಥದಲ್ಲಿ ಆರಾಧಿಸಲಾಯಿತು.[ಮಡೆಸ್ನಾನದ ವಿರುದ್ಧ ಸುಪ್ರೀಂಗೆ ಮೊರೆ]
ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ರಥದಲ್ಲಿ ದೇವರ ಮೂರ್ತಿ ಕುಳ್ಳಿರಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಮಲೆಕುಡಿಯರು ಬೆತ್ತ ಹಾಗೂ ಬಿದಿರುಗಳಿಂದಲೇ ಕಲಾತ್ಮಕವಾಗಿ ನಿರ್ಮಿಸಿದ ಬ್ರಹ್ಮರಥವನ್ನು ಸಾವಿರಾರು ಮಂದಿ ಭಕ್ತರ ಜಯಘೋಷದಲ್ಲಿ ಎಳೆಯಲಾಯಿತು. ಸಾಸಿವೆ, ಧನ, ಕಾಳುಮೆಣಸುಗಳನ್ನು ರಥದತ್ತ ಎಸೆದು ಹರಕೆ ತೀರಿಸಿದರು.[ಚಿತ್ರಗಳು: ಐಸಾಕ್ ರಿಚರ್ಡ್]
ವರ್ಷದಲ್ಲಿ ಒಂದು ಬಾರಿ ಮಾತ್ರ ನಡೆಯುವ ಬ್ರಹ್ಮರಥೋತ್ಸವಕ್ಕೆ ಒಟ್ಟು 59 ಮಂದಿ ಸೇವಾರ್ಥಿಗಳಿದ್ದರು. ದೇವರ ಉತ್ಸವ ಮೂರ್ತಿಯ ರಥಾವರೋಹಣವಾದ ಬಳಿಕ ಷಷ್ಠಿ ಕಟ್ಟೆ ಮತ್ತು ದ್ವಾದಶಿ ಮಂಟಪದಲ್ಲಿ ಕಟ್ಟೆಪೂಜೆ ನಡೆಯಿತು.
ಶಾಸಕ ಎಸ್. ಅಂಗಾರ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಸದಸ್ಯರಾದ ಚಂದ್ರಶೇಖರ ತಳೂರು, ಸುಬ್ರಹ್ಮಣ್ಯ ಭಟ್, ಕಿಶೋರ್ ಶಿರಾಡಿ, ಮೋಹನ್ ರಾಂ ಸುಳ್ಳಿ, ಮೋನಪ್ಪ ಮಾನಾಡು, ವನಜಾ ಭಟ್, ಯಮುನಾ ರೈ, ದೇವಳದ ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ರವೀಂದ್ರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.