ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬರಕ್ಕೆ ಎತ್ತಿನಹೊಳೆ ಯೋಜನೆ ನೇರ ಕಾರಣವಂತೆ!
ಮಂಗಳೂರು, ಏಪ್ರಿಲ್ 27:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೀರಿಗೆ ಬರದ ಪರಿಸ್ಥಿತಿ ಎದುರಾಗಿದೆ. ಜನರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆಲ್ಲಾ ವಿವಾದಿತ ಎತ್ತಿನ ಹೊಳೆ ಯೋಜನೆ ನೇರ ಕಾರಣ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.
ಜಿಲ್ಲೆ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದಕ್ಕೆಲ್ಲಾ ಎತ್ತಿನಹೊಳೆ ಯೋಜನೆ ಕಾರಣ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬರಿದಾದ ತುಂಬೆ ಡ್ಯಾಮ್ ಒಡಲು:ಕ್ರಮ ಕೈಗೊಳ್ಳಲು ಡಿಸಿಗೆ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಗೆ ನೀರಿಲ್ಲ. ಹಾಗಾದರೆ ಎತ್ತಿನ ಹೊಳೆ ಯೋಜನೆ ಮೂಲಕ ಬರಡು ಭೂಮಿಗೆ ನೀರು ಹರಿಸುವುದಾದರೂ ಹೇಗೆ? ಎಂಬುದನ್ನು ಮನವರಿಕೆ ಮಾಡಿಕೊಂಡು ಜಿಲ್ಲೆಯ ಸಚಿವರು ಹಾಗೂ ಶಾಸಕರು ಎತ್ತಿನಹೊಳೆ ಯೋಜನೆ ಕೈಬಿಡಲು ವಿಧಾನಸಭೆಯಲ್ಲಿ ಧರಣಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಎತ್ತಿನಹೊಳೆ ಯೋಜನೆಯನ್ನು ಸರಕಾರ ಕೈಬಿಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹೋರಾಟ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೊದಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶನದ ಮೂಲಕ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೂ ತಟ್ಟಿದ ನೀರಿನ ಬರದ ಬಿಸಿ
ವಿವಾದಿತ ಈ ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿ ಕರಾವಳಿಯ ರಾಜಕಾರಣಿಗಳು ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಟ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪಶ್ಚಿಮ ಘಟ್ಟದಲ್ಲಿ ಎಳನೀರಿನಿಂದ ಪುಷ್ಪಗಿರಿಯವರೆಗೆ ನೇತ್ರಾವತಿಯ 9 ಉಪನದಿಗಳ ಮೂಲವನ್ನೇ ಈ ಎತ್ತಿನ ಹೊಳೆ ಯೋಜನೆಗಾಗಿ ದ್ವಂಸಗೊಳಿಸಲಾಗಿದೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಹ್ಯಾದ್ರಿ ಸಂಚಯ ಅಧ್ಯಕ್ಷ ದಿನೇಶ್ ಹೊಳ್ಳ, ಕರ್ನಾಟಕದಲ್ಲಿ ಕೆರೆಗಳ ಒತ್ತುವರಿಗೆ ಸಂಬಂಧಿಸಿ ಪ್ರತ್ಯೇಕ ಪ್ರಾಧಿಕಾರವೇ ಅಸ್ತಿತ್ವದಲ್ಲಿಲ್ಲ ಎಂದು ದೂರಿದ್ದಾರೆ. ಎತ್ತಿನಹೊಳೆಯಲ್ಲಿ ಕಳೆದ ಬಾರಿ ಕಾಮಗಾರಿ ನಡೆಸಲು ನೀರಿಲ್ಲದೆ ಹೇಮಾವತಿ ನದಿಯಿಂದ ನೀರನ್ನು ರಾತ್ರಿ ವೇಳೆ ಕದ್ದು ಮುಚ್ಚಿ ತರಲಾಗಿತ್ತು. ಕಾಮಗಾರಿಗೆ ನೀರಿಲ್ಲದ ಮೇಲೆ ಯೋಜನೆಯಿಂದ ನೀರು ಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.