ಬಿಸಿಲೆ ರಕ್ಷಿತಾರಣ್ಯದ ಪ್ರಶಾಂತತೆ ಕದಡುತ್ತಿರುವ ವಾಹನ ಸಂಚಾರ
ಮಂಗಳೂರು, ನವೆಂಬರ್ 03 : ನಿಷೇಧವಿದ್ದರೂ ಘನ ವಾಹನಗಳ ಓಡಾಟದಿಂದಾಗಿ ಬಿಸಿಲೆ ರಕ್ಷಿತಾರಣ್ಯದಲ್ಲಿರುವ ಪ್ರಾಣಿ-ಪಕ್ಷಿ ಸಂಕುಲಕ್ಕೆ ತೊಂದರೆಯಾಗುತ್ತಿರುವುದರಿಂದ ಮತ್ತು ಕಾಡಿನ ಪ್ರಶಾಂತತೆ ಕದಡುತ್ತಿರುವುದರಿಂದ ಅಲ್ಲಿ ಅಂತಹ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.
ಘನ ವಾಹನಗಳಿಗೆ ಸಂಪೂರ್ಣ ನಿಷೇಧ ಇದ್ದರೂ ಬಿಸಿಲೆ ಘಾಟ್ ರಸ್ತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಘನವಾಹನಗಳು ಸಂಚಾರ ಆರಂಭಿಸಿವೆ. ಅದರಲ್ಲೂ ಹಗಲು ರಾತ್ರಿ ಎನ್ನದೇ ಬಿಸಲೆ ಘಾಟ್ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ಓಡಾಟ ಆರಂಭಿಸಿವೆ.
ದಟ್ಟ ಕಾಡಿನ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸುತ್ತಿರುವ ಭಾರೀ ಗಾತ್ರದ ವಾಹನಗಳಿಂದಾಗಿ ಬಿಸಿಲೆ ರಸ್ತೆಯು ಕುಸಿದು ಬೀಳಲೂ ಕಾರಣವಾಗುತ್ತಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬಿಸಿಲೆ ಘಾಟ್ ನ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದವು.
ಶಿರಾಡಿ ಘಾಟ್ : ಇನ್ನೆರೆಡು ದಿನಗಳಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ
ಒಂದು ಕಡೆ ಭಾರೀ ವಾಹನಗಳ ಹಗಲು ರಾತ್ರಿ ಅಡ್ಡಾಟದಿಂದಾಗಿ ಕಾಡಿನ ಪ್ರಶಾಂತತೆಗೆ ಧಕ್ಕೆ ಬರುತ್ತಿದ್ದರೆ, ಮತ್ತೊಂದೆಡೆ ರೊಚ್ಚಿಗೇಳುತ್ತಿರುವ ಕಾಡು ಪ್ರಾಣಿಗಳೇ ಮಾನವರ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಆನೆಗಳು ಪ್ರತಿನಿತ್ಯ ರಸ್ತೆಯನ್ನು ದಾಟುವ ಪ್ರದೇಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸಬೇಕಾದ ಲಾರಿಗಳು ಇತ್ತೀಚಿನ ದಿನಗಳಲ್ಲಿ, ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಪಾಯಕಾರಿಯಾಗಿರುವ ಬಿಸಿಲೆ ಘಾಟ್ ರಸ್ತೆಯ ಮೂಲಕ ತೆರಳುತ್ತಿವೆ. ಜೊತೆಗೆ, ನಿಷೇಧವಿದ್ದರೂ ಇಲ್ಲಿ ಭಾರೀ ವಾಹನಗಳ ಅಡ್ಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇಕೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಬಿಸಿಲೆ ದಟ್ಟಾರಣ್ಯದಲ್ಲಿ ಹೆಚ್ಚಿನ ಸಂಖ್ಯೆಯ ಕಾಡುಪ್ರಾಣಿಗಳಿದ್ದು, ಅದರಲ್ಲೂ ಆನೆಗಳು ಪ್ರತಿನಿತ್ಯ ರಸ್ತೆಯನ್ನು ದಾಟುವ ಪ್ರದೇಶ ಇದಾಗಿದೆ.
ಕುದುರೆಮುಖ ಘಾಟ್ ನಲ್ಲಿ ಸಿಲುಕಿದ ಐರಾವತ ಬಸ್: ಫುಲ್ ಟ್ರಾಫಿಕ್ ಜಾಮ್
ಕಾಡುಪ್ರಾಣಿಗಳ ಸಂಚಾರಕ್ಕೆ ಸಂಚಕಾರ
ವಾಹನಗಳ ಸಂಚಾರ ಈ ಕಾಡಿನ ಪ್ರಶಾಂತ ಪರಿಸರವನ್ನು ಹಾಳುಗೆಡವುತ್ತಿರುವುದಲ್ಲದೆ, ರಾತ್ರಿ ವೇಳೆಯಲ್ಲಿ ಅಡ್ಡಾಡುವ ಪ್ರಾಣಿಗಳಿಗೂ ಅಪಾಯ ತಂದೊಡ್ಡುತ್ತಿವೆ ಎಂಬ ಕೂಗು ಪರಿಸರವಾದಿಗಳಿಂದ ಕೇಳಿಬರುತ್ತಿದೆ. ಘನ ವಾಹನಗಳ ಸಂಚಾರ ಕಾಡಿನ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದು ಕಾಡುಪ್ರಾಣಿಗಳ ಸ್ವಚ್ಛಂದ ಸಂಚಾರಕ್ಕೂ ಸಂಚಕಾರ ತಂದಿವೆ. ರಾತ್ರಿ ವೇಳೆಯಲ್ಲಿಈ ರಸ್ತೆಯಲ್ಲಿ ವಾಹನ ಸಂಚಾರವ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ಕುಲ್ಕುಂದ ಗೇಟಿನ ಬಳಿ ಆನೆ ದಾಳಿ
ಇತ್ತೀಚೆಗೆ ಅಕ್ಟೋಬರ್ 30ರಂದು ಈ ಬಿಸಲೆ ಘಾಟ್ ರಸ್ತೆಯಲ್ಲಿ ಬರುತ್ತಿದ್ದ ವಾಹನದ ಮೇಲೆ ಕಾಡಾನೆ ದಾಳಿ ಮಾಡಿತ್ತು. ಬಿಸಿಲೆ ಘಾಟಿಯ ಕುಲ್ಕುಂದ ಗೇಟಿನ ಬಳಿ ಅಕ್ಟೋಬರ್ 30ರ ತಡ ರಾತ್ರಿ ವಾಹನದ ಮೇಲೆ ಕಾಡಾನೆ ದಾಳಿ ಮಾಡಿತ್ತು. ಆನೆದಾಳಿ ಸಂದರ್ಭದಲ್ಲಿ ವಾಹನದಲ್ಲಿದ್ದ ಇಬ್ಬರು ಮೀನು ವ್ಯಾಪಾರಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಅವರ ಪ್ರಾಣಕ್ಕೆ ಹಾನಿಯಾಗಿದ್ದರೆ ಅದಕ್ಕೆ ಯಾರು ಜವಾಬ್ದಾರರಾಗುತ್ತಿದ್ದರು?
ಅದೃಷ್ಟವಶಾತ್ ಬಚಾವ್ ಆದ ಮೀನು ವ್ಯಾಪಾರಿಗಳು
ಸೋಮವಾರಪೇಟೆ ಮೂಲದ ವ್ಯಾಪಾರಿಗಳಾದ ಹಮೀದ್ ಹಾಗು ಅಬ್ದುಲ್ ಸಲೀಂ ಇಬ್ಬರು ಮೀನು ವ್ಯಾಪಾರಿಗಳು ಸೋಮವಾರಪೇಟೆಯಿಂದ ಹಸಿ ಮೀನು ತರಲು ಮಂಗಳೂರಿಗೆ ಬರುತ್ತಿದ್ದರು. ಕುಲ್ಕುಂದ ದೇವರ ಗುಡ್ಡ ಬಳಿ ಬರುವಾಗ ತಿರುವಿನಲ್ಲಿ ಕಾಡಾನೆಯೊಂದು ಮರಿಯೊಂದಿಗೆ ರಸ್ತೆ ಮಧ್ಯ ಕಾಣಿಸಿಕೊಂಡಿತ್ತು. ರಸ್ತೆಯಲ್ಲಿ ಸಾಗಿಬರುತ್ತಿದ್ದ ಇವರ ಮಹಿಂದ್ರಾ ಜೀತೊ ವಾಹನದ ಮೇಲೆ ಆನೆ ಏಕಾಏಕಿ ದಾಳಿ ಮಾಡಿತ್ತು. ಆದರೆ ದಾಳಿಯಲ್ಲಿ ಈ ಇಬ್ಬರು ವ್ಯಾಪಾರಿಗಳು ಪಾರಾಗಿದ್ದರು. ವಾಹನ ಸಂಪೂರ್ಣ ಆನೆದಾಳಿಯಿಂದ ಹಾನಿಗೊಂಡಿತ್ತು.