ಅಗತ್ಯ ಸೌಲಭ್ಯಕ್ಕಾಗಿ ಎಂಡೋ ಸಂತ್ರಸ್ತರಿಂದ ಅಮರಣಾಂತ ಉಪವಾಸ
27ರಂದು ಕೊಕ್ಕಡದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.ಇಲ್ಲಿಗೆ ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು ಆಗಮಿಸದಿದ್ದರೆ ಮೇ 28ರಿಂದ ಎಲ್ಲಾ ಎಂಡೋಸಲ್ಫಾನ್ ಸಂತ್ರಸ್ಥರು ಸ್ವಯಂ ಪ್ರೇರಿತರಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.
ಬೆಂಗಳೂರು, ಮೇ 22: ಸೂಕ್ತ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳಿಗೆ ಒತ್ತಾಯಿಸಿ ರಾಜ್ಯದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ಥರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಮೇ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಬೃಹತ್ ಪ್ರತಿಭಟನೆ ಮತ್ತು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು 'ಎಂಡೋ ವಿರೋಧಿ ಹೋರಾಟ ಸಮಿತಿ' ನಿರ್ಧರಿಸಿದೆ.
"27ರಂದು ಕೊಕ್ಕಡದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇಲ್ಲಿಗೆ ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳು ಆಗಮಿಸದಿದ್ದರೆ ಮೇ 28ರಿಂದ ಎಲ್ಲಾ ಎಂಡೋಸಲ್ಫಾನ್ ಸಂತ್ರಸ್ಥರು ಸ್ವಯಂ ಪ್ರೇರಿತರಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ," ಎಂದು ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೆಂಗುಂಡೇಲು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಸಂತ್ರಸ್ತರು ಸೇರಿದಂತೆ 15,000 ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಧರ ಗೌಡ, "ಕರ್ನಾಟಕವೊಂದರಲ್ಲೇ ಒಟ್ಟು 12,000 ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ. ಆದರೆ ಇವರಿಗೆ ಸರ್ಕಾರ ಯಾವುದೇ ರೀತಿಯಲ್ಲೂ ಸೂಕ್ತ ಪರಿಹಾರ ನೀಡಿಲ್ಲ. ಹೆಚ್ಚಿನವರು ಮಧುಮೇಹ ಮುಂತಾದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಸರಕಾರ ಸೂಕ್ತ ಚಿಕಿತ್ಸೆಯು ನೀಡುತ್ತಿಲ್ಲ. ಕೆಲವು ತಾಲೂಕುಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತದೆ. ಆದರೆ ವೈದ್ಯರ ಬದಲು ವೈದ್ಯ ವಿದ್ಯಾರ್ಥಿಗಳು ಇಲ್ಲಿ ಚಿಕಿತ್ಸೆ ನೀಡುತ್ತಾರೆ," ಎಂದು ದೂರಿದ್ದಾರೆ.
"ಹೈಕೋರ್ಟ್ ನ ಆದೇಶವಿದ್ದರೂ ಯಾವುದೇ ಸೌಲಭ್ಯಗಳನ್ನು ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರ ನೀಡುತ್ತಿಲ್ಲ. ಶೇಕಡಾ 25-60 ನ್ಯೂನ್ಯತೆ ಇದ್ದವರಿಗೆ ತಿಂಗಳಿಗೆ 1,500 ಹಾಗೂ ಶೇಕಡಾ 60ಕ್ಕಿಂತ ಹೆಚ್ಚು ನ್ಯೂನ್ಯತೆ ಇದ್ದವರಿಗೆ 3,000 ರೂಪಾಯಿ ಮಾಸಾಶನ ಮಾತ್ರ ನೀಡಲಾಗುತ್ತಿದೆ. ಎಂಡೋ ಸಂತ್ರಸ್ಥರ ಸೌಲಭ್ಯಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸರ್ಕಾರ ಯಾವುದೇ ಅನುದಾನವನ್ನೂ ಮೀಸಲಿರಿಸಿಲ್ಲ. ಯಾವುದೇ ಪುನರ್ವಸತಿ ಕೇಂದ್ರಗಳೂ ಎಂಡೋ ಸಲ್ಪಾನ್ ಪೀಡಿತರಿಗೆ ಇಲ್ಲ," ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈಗಿರುವ ಸಂಚಾರಿ ಆಸ್ಪತ್ರೆಗಳಲ್ಲಿ ಫಿಜಿಯೋಥರಪಿ ಹಾಗೂ ಸಂತ್ರಸ್ಥರಿಗೆ ಬೇಕಾದ ಔಷಧಿಗಳನ್ನು ನೀಡಬೇಕು. ಎಂಡೋ ಸಲ್ಫಾನ್ ಪೀಡಿತರಿರುವ ಪ್ರತಿ ಗ್ರಾಮಕ್ಕೆ ಸ್ಟಾಫ್ ನರ್ಸ್ ಒದಗಿಸಬೇಕು. ಮಾಸಿಕ ವೈದ್ಯಕೀಯ ಶಿಬಿರಗಳಲ್ಲಿ ತಜ್ಞ ವೈದ್ಯರಿಂದಲೇ ತಪಾಸಣೆಗಳು ನಡೆಯಬೇಕು ಎಂದೂ ಅವರು ಹೇಳಿದ್ದಾರೆ.
ಎಲ್ಲಾ ಎಂಡೋಪೀಡಿತರಿಗೆ 10 ಲಕ್ಷ ರೂಪಾಯಿ ಪರಿಹಾರ ಧನ ವಿತರಿಸಬೇಕು. ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಆರಂಭಿಸಬೇಕು. ಪ್ರತಿ ತಾಲ್ಲೂಕಿಗೆ ಒಂದು ಶಾಶ್ವತ ಪುನರ್ವಸತಿ ಕೇಂದ್ರ ಬೇಕು. ಎಲ್ಲಾ ರೀತಿಯ ಎಂಡೋ ಪೀಡಿತರಿಗೆ ಮಾಸಾಶನ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಎಂಡೋ ಸಂತ್ರಸ್ಥರ ಪೋಷಕರಿಗೆ ಮಾಸಿಕ 2 ಸಾವಿರ ರೂ. ಪಿಂಚಣಿ ನೀಡಬೇಕು ಎಂಬುದು ಎಂಡೋಪೀಡಿತರ ಬೇಡಿಕೆಗಳಾಗಿವೆ.
ಸಂತ್ರಸ್ಥರಿಗಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕ ಎಂದಿರುವ ಎಂಡೋಪೀಡಿತರು ಸರಕಾರದ ಮುಂದೆ ಪ್ರಮುಖ 20 ಬೇಡಿಕೆಗಳನ್ನು ಇಟ್ಟಿದ್ದಾರೆ.