ಮಂಗಳೂರು: ಅಮರಣಾಂತ ಉಪವಾಸ ಆರಂಭಿಸಿದ ಎಂಡೋಪೀಡಿತರು
ಮಂಗಳೂರು, ಮೇ 28: ಎಂಡೋ ಸಂತ್ರಸ್ತರಿಗೆ ಕೇರಳ ಮಾದರಿಯ ಪರಿಹಾರ ಪ್ಯಾಕೇಜ್ ನೀಡಬೇಕು ಎಂಬ ಪ್ರಮುಖ ಬೇಡಿಕೆ ಸಹಿತ ಒಟ್ಟು 20 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶನಿವಾರ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿ ಎಂಡೊ ಸಂತ್ರಸ್ತರು ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬಿ.ಜೆ.ಪಿ ಬೆಂಬಲದೊಂದಿಗೆ ಬೆಳ್ತಂಗಡಿಯ ಕೊಕ್ಕಡ ಜೋಡು ಮಾರ್ಗದಲ್ಲಿ ಎಂಡೋ ವಿರೋಧಿ ಹೋರಾಟ ಜತೆಗೆ ಅಮಣಾಂತ ಉಪವಾಸ ಸತ್ಯಾಗ್ರಹವೂ ಆರಂಭವಾಗಿದೆ.
"ಎಂಡೋ ಸಂತ್ರಸ್ಥರ ಬದುಕಿನಲ್ಲಿ ಸರಕಾರಗಳು ಮತ್ತು ಅಧಿಕಾರಿ ವರ್ಗ ಇಲ್ಲಿಯವರೆಗೂ ಆಟವಾಡುತ್ತಿದೆ . ಎಂಡೋ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕ್ರಮಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಉಚ್ಛ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿ ವರ್ಗ ಮಾತ್ರ ಇಲ್ಲಿವರೆಗೂ ಸಂಪೂರ್ಣ ವಾಗಿ ಪರಿಹಾರ ಕೊಡುವ ಕಡೆಗೆ ಗಮನ ನೀಡಿರುವುದಿಲ್ಲ," ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ್ದರು.
"ನಮ್ಮ ಜಿಲ್ಲೆಯವರಾಗಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರದಲ್ಲಿದ್ದ ವೇಳೆ ಎಂಡೋ ಸಂತ್ರಸ್ಥರಿಗೆ ಕೇರಳ ಮಾದರಿಯಲ್ಲಿ ಅಲ್ಲ ಕರ್ನಾಟಕವೇ ಮಾದರಿ ಆಗುವಂತೆ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಈಗ ನಾವು ಇಷ್ಟು ವರ್ಷ ಕಳೆದರೂ ಏನೊಂದೂ ನಮ್ಮ ಬೇಡಿಕೆ ಈಡೇರದ ಕಾರಣ ಇಂದು ನಾವು ಅಮರಣಾಂತ ಸತ್ಯಾಗ್ರಹದ ಹಾದಿ ಹಿಡಿಯಬೇಕಾಗಿದೆ," ಎಂದು ಅವರು ಹೇಳಿದರು.
"ಎಂಡೋ ಸಂತ್ರಸ್ಥರ ಸಮಸ್ಯೆಯ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯವಹಿಸುತ್ತಿದೆ. ಸರಕಾರ ಇನ್ನಾದರು ಎಚ್ಚೆತ್ತುಕೊಂಡು ಕೂಡಲೇ ಇವರ ಸಮಸ್ಯೆಗೆ ಸ್ಪಂದಿಸುವ ಅವಶ್ಯಕತೆಯಿದೆ. ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವರಲ್ಲಿ ಮಾತುಕತೆ ನಡೆಸಿ ವಿವರಿಸಲಿದ್ದೇನೆ. ಲೋಕಸಭೆಯ ಮುಂದಿನ ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆಯಲಿದ್ದೇನೆ," ಎಂದು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
2 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಮತ್ತು 500 ಕ್ಕೂ ಮಿಕ್ಕಿ ಎಂಡೋ ಸಂತ್ರಸ್ಥರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಎಂಡೋ ಸಂತ್ರಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ತಿಪ್ಪೇಸ್ವಾಮಿ ಮಧ್ಯಾಹ್ನದ ವೇಳೆ ಆಗಮಿಸಿ ಮಾತುಕತೆ ನಡೆಸಿದರು.